Thursday, March 29, 2018

ಪೃಥು


ನಮಗೆ ಎಷ್ಟೋ ಸಲ ಏನೋ ಒಂದು ವಸ್ತುವೋ ಅಥವಾ ಬದಲಾವಣೆಯೋ ಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಅದು ನಮಗೆ ಸಿಗುವುದಿಲ್ಲ. ಮರೀಚಿಕೆಯಾಗಿಬಿಡುತ್ತದೆ. ನಾವು ಅದನ್ನು ಪಡೆಯದೇ ಸೋತು ಖಿನ್ನರಾಗಿ ಕುಬ್ಜರಾಗಿ ವಿಹ್ವಲರಾಗಿಬಿಡುತ್ತೇವೆ. ವಾಸ್ತವದಲ್ಲಿ, ನಾವು ಬದಲಾವಣೆಗೆ ಅಥವಾ ಬೇಕಾದ ವಸ್ತುವಿಗೆ ತಕ್ಕ ಅರ್ಹತೆ ಪಡೆದಿರುವುದೇ ಇಲ್ಲ. ಹಾಗೆ ನಮ್ಮಲ್ಲಿ ಆಗಬೇಕಾದ ಮುಖ್ಯವಾದ ಬದಲಾವಣೆ ನಮ್ಮ ಮನಸ್ಸಿನದ್ದು, ನಮ್ಮ ಮನೋಶಕ್ತಿ ಇಂದ್ರಿಯಗಳ ಮೂಲಕ ಹರಿಯುವ ಬಗೆ. ಇದಕ್ಕೆ ನಾವು ನಮ್ಮ ಮನಸ್ಸಿನೊಂದಿಗೆ ಮಾತಾಡಬೇಕು. ಇದನ್ನು 'Telepsychics' ಎನ್ನುವ ಪುಸ್ತಕದಲ್ಲಿ ಚೆನ್ನಾಗಿ ಬರೆದಿದ್ದಾನೆ ಡಾ|| ಜೋಸೆಫ್ ಮರ್ಫಿ. ಆಶ್ಚರ್ಯವೆಂದರೆ, ಆಧುನಿಕತೆ ದೇವರನ್ನು-ಧರ್ಮವನ್ನು ಒಪ್ಪುವುದಿಲ್ಲ. ಆದರೆ ಜೋಸೆಫ್ ಮರ್ಫಿ, ಬೈಬಲ್ಲಿನ ಆಧಾರದಲ್ಲೇ ಇದನ್ನು ಹೇಳುತ್ತಾ ಹೋಗುತ್ತಾನೆ.

ನಮಗೇ ನಾವು ಮಾತಾಡಿಕೊಳ್ಳುವುದು ಕೆಲವು ಸಲ ಸರಿಯಾಗುವುದಿಲ್ಲ. ನಮ್ಮ ಅಹಂಕಾರವೋ ಅಥವಾ ಮತ್ಯಾವುದೋ ಚಿಂತನೆ-ಯೋಚನೆ ಅಡ್ಡವಾಗುತ್ತದೆ ಇಲ್ಲಿ. ಇದನ್ನೇ ಮೆಂಟಲ್ ಬ್ಲಾಕ್ ಎಂದು ಕರೆಯುವುದು. ಮೆಂಟಲ್ ಬ್ಲಾಕ್ ಅನ್ನು ನಾವೇ ತೆಗೆಯುವುದು ಕಷ್ಟ. ಹೇಗೆ ನಮ್ಮ ದೇಹ ಕೆಲವು ಸಲ ರೋಗ ನಿರೋಧಕ ಶಕ್ತಿ ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೋ ಅಥವಾ ಸಾಕಷ್ಟು ಬಿಡುಗಡೆ ಮಾಡುವುದಿಲ್ಲವೋ, ಇದೂ ಹಾಗೆಯೆ. ಆಗ ನಾವು ಬೇರೊಬ್ಬರ ಸಹಾಯ ಪಡೆಯುತ್ತೇವೆ. ಹಾಗೆ ಬೇರೆಯವರು ನಮ್ಮ ಮನಸ್ಸಿನೊಡನೆ ಮಾಡುವ ಸಂವಹನಕ್ಕೆ ಅನೇಕ ವಿಧಾನಗಳಿವೆ. ಅದರಲ್ಲಿ ಒಂದು 'ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮ್'.

ಎಷ್ಟೋ ಕೊಳಕು ಕೊಳಚೆ ಹಾಳು ಮೂಳು ತುಂಬಿದ ನಮ್ಮಗಳಿಗೇ 'ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮ್' ಕೆಲಸ ಮಾಡಬೇಕಾದರೆ, ಯಾವುದೇ ರೀತಿಯ ಭಾವನೆ ಹುಟ್ಟಿಲ್ಲದ ಬಿಳಿಯ ಹಾಳೆಯಂಥಾ ಮಗುವಿನ ಮನಸ್ಸಿನಲ್ಲಿ ಇದು ಹೇಗೆ ಕೆಲಸ ಮಾಡೀತು ಒಮ್ಮೆ ಯೋಚಿಸಿ. ಇಂಥದ್ದೊಂದು ದೃಷ್ಟಾಂತ ಇದೆ ನಮ್ಮ ಪುರಾಣಗಳಲ್ಲಿ. ಪೃಥುವಿನ ಕಥೆಯಲ್ಲಿ. ಪ್ರಕರಣದ ಹಿಂದಿನ ಭಾಗ ಈಗಾಗಲೇ ಹಂಚಿಕೊಂಡಾಗಿದೆ.

ವೇನನ ಬಲಗೈ ಮಂಥನದಿಂದ ಪೃಥು ಜನಿಸಿದ. ಆಗ ಎಲ್ಲೆಲ್ಲೂ ಶುಭಶಕುನಗಳೇ ಘಟಿಸಿದವು. ಪೃಥು ಹುಟ್ಟಿದೊಡನೆ ಬೆಳೆದ. ಜೀನ್ ಮಾಡಿಫ಼ಿಕೇಷನ್ ಚೆನ್ನಾಗಿ ತಿಳಿದಿದ್ದ ನಮ್ಮ ಋಷಿ ಮುನಿಗಳು ಇದನ್ನು ಮಾಡಿದ್ದು ಹೆಚ್ಚಲ್ಲ ಬಿಡಿ.ಅರಾಜಕತೆಗೆ ಪರಿಹಾರವಾಗಿ ಕಂಡ ಪೃಥು. ಅವನಿಗೆ ಪಟ್ಟಾಭಿಷೇಕ ಮಾಡುವಾಗ, ಬ್ರಹ್ಮನು ಸೂತ ಮಾಗಧರನ್ನು ಕಳಿಸಿದ, ಪೃಥುವನ್ನು ಹೊಗಳಲು. ಸೂತ ಮಾಗಧರು ಹೇಳಿದರು"ಏನೂ ಕಾರ್ಯವನ್ನು ಮಾಡದ ಪೃಥುವನ್ನು ನಾವು ಹೊಗಳುವುದು ಹೇಗೆ?" ಆಗ ಋಷಿಗಳು ಹೇಳಿದರು "ಪೃಥುವಿನಿಂದ ಯಾವ ಯಾವ ಮಹತ್ಕಾರ್ಯಗಳನ್ನು ಮಾಡಬೇಕೋ, ಯಾವ ಯಾವ ಸದ್ಗುಣಗಳು ಈತನಲ್ಲಿ ನೆಲೆಸಬೇಕೋ ಅದನ್ನೇ ಊಹಿಸಿಕೊಂಡು ಹೇಳಿರಿ." ಆಗ, ಪೃಥು ಕೂಡಾ ಹೇಳುತ್ತಾನೆ.

ತತಃ ನೃಪತಿಸ್ತೋಷಂ ತಚ್ಛು ತ್ವಾ ಪರಂ ಯಯೌ|
ಸದ್ಗುಣೈಃ ಶಾಘ್ಯತಾಮೇತಿ ತಸ್ಮಾಲ್ಲಭ್ಯಾ ಗುಣಾ ಮಮ||

ತಸ್ಮಾದದ್ಯ ಸ್ತೋತ್ರೇಣ ಗುಣನಿರ್ವರ್ಣನಂ ತ್ವಿಮೌ|
ಕರಿಷ್ಯೇತೇ ಕರಿಷ್ಯಾಮಿ ತದೇವಾಹಂ ಸಮಾಹಿತಃ||

ಯದಿಮೌ ವರ್ಜನೀಯಂ ಕಿಞ್ಚಿದತ್ರ ವದಿಷ್ಮತಃ|
ತದಹಂ ವರ್ಜಯಿಷ್ಯಾಮೀತ್ಯೇವಂ ಚಕ್ರೇ ಮತಿಂ ನೃಪಃ||

"ನಿಜ. ಮನುಷ್ಯನು ಸದ್ಗುಣಗಳಿಂದಲೇ ಪ್ರಶಂಸೆಗೆ ಪಾತ್ರನಾಗುತ್ತಾನೆ. ಆದ್ದರಿಂದ, ನಾನೂ ಸದ್ಗುಣಗಳನ್ನು ಪಡೆಯುತ್ತೇನೆ. ಸ್ತೋತ್ರದ ಮೂಲಕ ಯಾವ ಸದ್ಗುಣಗಳನ್ನು ಇದೆ ಎನ್ನುತ್ತೀರೋ ಅದನ್ನು ಪಡೆಯುತ್ತೇನೆ. ಯಾವ ಗುಣಗಳನ್ನು ಬಿಡಲು ಹೇಳುತ್ತೀರೋ ಅದನ್ನು ವರ್ಜಿಸುತ್ತೇನೆ."

ಆಗ ಸೂತ-ಮಾಗಧರು ಪೃಥುವನ್ನು ರೀತಿಯಾಗಿ ಹೊಗಳಿದರು.

ಸತ್ಯವಾಗ್ದಾನ ಶೀಲೋಽಯಂ ಸತ್ಯಸನ್ಧೋ ನರೇಶ್ವರಃ|
ಹ್ರೀಮಾನ್ಮೈತ್ರಃ ಕ್ಷಮಾಶೀಲೋ ವಿಕ್ರಾನ್ತೋ ದುಷ್ಟಶಾಸನಃ||

ಧರ್ಮಜ್ಞಶ್ಚ ಕ್ರುತಜ್ಞಶ್ಚ ದಯಾವಾನ್ ಪ್ರಿಯಭಾಷಕಃ|
ಮಾನ್ಯನ್ಮಾನಯಿತಾ ಯಜ್ವಾ ಬ್ರಹ್ಮಣ್ಯಃ ಸಾಧುಸಮ್ಮತಃ||

" ರಾಜನು ಸತ್ಯಭಾಷಿ, ದಾನಶೀಲ.ಮರ್ಯಾದೆಗಂಜುವವ, ಸ್ನೇಹಜೀವಿ, ಹಾಗೂ ತಾಳ್ಮೆಯನ್ನು  ಹೊಂದಿದವನು. ವೀರನೂ ದುಷ್ಟನಿಗ್ರಹಿಯೂ ಆದ ಈತ ಧರ್ಮಜ್ಞ, ಕ್ರುತಜ್ಞ, ದಯಾಶೀಲ, ಪ್ರಿಯಭಾಷಿ. ಪೂಜ್ಯರನ್ನು ಪೂಜಿಸುತ್ತಾನೆ. ಯಜ್ಞ ಯಾಗಗಳನ್ನು ಮಾಡುತ್ತಾನೆ. ಸಜ್ಜನರನ್ನು ಆದರಿಸುತ್ತಾನೆ. ಜ್ಞಾನಿಗಳನ್ನು ಗೌರವದಿಂದ ಕಾಣುತ್ತಾನೆ. ಶತ್ರು-ಮಿತ್ರ ಎನ್ನುವ ಭಾವಗಳಿಲ್ಲದೆಯೇ ರಾಜ್ಯವಾಳುತ್ತಾನೆ"

ನ್ಯೋರೋ ಲಿಂಗ್ವಿಸ್ಟಿಕ್ ಪ್ರೊಗ್ರಾಮಿನಲ್ಲಿ ಕೂಡಾ ಹೀಗೆಯೇ ಆಗುತ್ತದೆ. ನಮ್ಮನ್ನು ಕಾಡುವ ಅಡೆತಡೆಗಳು, ಹೊರಹೋಗಿ ಬೇಕಾದ ಸಾಮರ್ಥ್ಯಗಳು ಲಭ್ಯವಾಗುತ್ತವೆ. ಇಲ್ಲಿನ ಪ್ರಕ್ರಿಯೆಯಲ್ಲಿ, ಪ್ರೋಗ್ರಾಮರ್, ಒಂದು ಸನ್ನಿವೇಶವನ್ನು ನಾವು ಸ್ವೀಕರಿಸುವ, ಅದರ ಕುರಿತಾಗಿನ ನಮ್ಮ ಕ್ರಿಯೆ ಪ್ರತಿಕ್ರಿಯೆಯನ್ನು ಅಭ್ಯಸಿಸಿ, ನಮ್ಮನ್ನು ಕಲ್ಪನೆಗಳ ಮೂಲಕ ಅಂಥಾ ಒಂದು ಪರಿಸ್ಥಿತಿಗೆ ಕೊಂಡೊಯ್ದು ಅಂದರೆ ಯಾವ ಪರಿಸ್ಥಿತಿಯಲ್ಲಿ ನಮಗೆ ಸಾಮರ್ಥ್ಯ ಪ್ರವಹಿಸಬೇಕೋ ಅಂಥಾ ಪರಿಸ್ಥಿತಿಗೆ ಕೊಂಡೊಯ್ದು ನಮ್ಮ ಅಚೇತ ಮನಸ್ಸಿನ ಜೊತೆ ಸಂಭಾಷಿಸುತ್ತಾನೆ. ಹಾಗಾಗಿ ನಮಗೆ ಬದಲಾವಣೆಗಳು ಅರಿವಿಲ್ಲದಂತೆ ಆಗುತ್ತವೆ.

ಚಿತ್ತ ಮತ್ತು ಬುದ್ಧಿಯ ಶಕ್ತಿಗಳನ್ನು ಮತ್ತು ಆಜ್ಞೆಗಳನ್ನು ಮನಸ್ಸಿನ ಮೂಲಕ ಪ್ರವಹಿಸುವ ನ್ಯೂರಾನ್ ಗಳ ಪ್ರವಹಿಸುವಿಕೆಯೇ ಬದಲಾಗುತ್ತದೆ. ಪರಿಣಾಮ ಮನಸ್ಸಿನಲ್ಲಿ ಬದಲಾವಣೆ ಮತ್ತು ಸ್ಥಿತಿಯೊಂದರ ಗ್ರಹಣ, ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿಯೂ ಬದಲಾವಣೆ. ಇದೆಲ್ಲ ಆಗುವುದು ಇಂದ್ರಿಯಗಳ ಮೂಲಕ. ಆದರೆ ಇದೆಲ್ಲಾ ಸಾಧ್ಯವಾಗುವುದು ಪ್ರೋಗ್ರಾಮರ್ ಹೇಳುವುದನ್ನು ನಮ್ಮ ಹೊರಮನಸ್ಸಿನಿಂದ ಒಪ್ಪಿದಾಗ ಮಾತ್ರ. ಇಲ್ಲವಾದರೆ ಅಚೇತ ಮನ ಮತ್ತು ಹೊರ ಮನಸ್ಸಿನ ನಡುವೆ ಘರ್ಷಣೆಯಾಗಿ ತೊಂದರೆಯಾಗುತ್ತದೆ.

ಪೃಥುವಿನ ವಿಚಾರದಲ್ಲಿ ಆಗಿದ್ದು ಕೂಡಾ ಇದೇ. ಸೂತ ಮಾಗಧರು ಆತನ ಕುರಿತು ಕಲ್ಪಿಸಿಕೊಂಡು ಹೇಳಿದ್ದಲ್ಲ. ಆತನಿಂದಾಗಬೇಕಾದ ಕೆಲಸವನ್ನು ತಿಳಿಸಿದ್ದು. ಪೃಥು ಕೂಡಾ ಅದನ್ನು ಸ್ವೀಕರಿಸಿದ್ದ. ಸ್ವೀಕರಿಸಲು ಸನ್ನದ್ಧವಾಗಿದ್ದೇನೆ ಎಂದಮೇಲೆಯೇ ಸೂತ ಮಾಗಧರು ಹೊಗಳಿದ್ದು.

ನಮ್ಮ ವೈದಿಕ ಮಂತ್ರಗಳಲ್ಲೂ ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ಮತ್ತು ಸೆಲ್ಫ್ ಅಫ಼ರ್ಮೇಷನ್ ಇವೆ, ಫಲಶೃತಿಯ ರೂಪದಲ್ಲಿ. ಮಂತ್ರಗಳು ಹೇಗೆ ಕೆಲಸಮಾಡುವ ಕ್ರಮ ಹೀಗೂ ಇರುತ್ತದೆ.

Tuesday, March 27, 2018

ಶ್ವಾನ ದಂಶನ


ಮೊನ್ನೆ ಒಂದು ದಿನ ಆಫೀಸಿನಿಂದ ಮನೆಗೆ ಬರುತ್ತಿರುವಾಗ ರೂಢಿಯಂತೆ ಫೋನಿನಲ್ಲಿ ಮಾತಾಡುತ್ತಾ ಬರುತ್ತಿದ್ದೆ. ಫುಟ್ ಪಾಥ್ ಮೇಲೆ ನಡೆಯುತ್ತಾ ಬರುತ್ತಿದ್ದ ನನಗೆ ಮೊಣಕಾಲ ಕೆಳಗೆ ಏನೋ ತಾಗಿದ ಅನುಭವ ಜತೆಯಲ್ಲಿಯೇ ಉರಿ. ಇದ್ಯಾವ ಪುಣ್ಯಾತ್ಮ ಗಾಡಿಯನ್ನು ಫುಟ್ ಪಾತ್ ಮ್ಮೇಲೆ ಹತ್ತಿಸಿದನಪ್ಪಾ ಎಂದು ತಿರುಗು ನೋಡಿದರೆ, ಅಲ್ಲಿದ್ದದ್ದು ಒಂದು ನಾಯಿ. ಅದು ಕಚ್ಚಿಯೇ ಉರಿಯಾದದ್ದು ಎಂದು ತಿಳಿಯಿತು ನನಗೆ.ಆದರೂ ಅಭ್ಯಾಸದಂತೆ ಗಾಯವನ್ನೊಮ್ಮೆ ನೋಡಿದೆ. ಗಾಯ ಆಳವಾಗಿ ಏನೂ ಇರಲಿಲ್ಲ. ಆದರೂ ನಾಯಿ ಕಚ್ಚಿದ್ದು ಎಂದ ಮೇಲೆ ಭಯ ಇದ್ದಿದ್ದೇ. ಡಾಕ್ಟರ ಹತ್ತಿರ ಹೋಗಲೇ ಬೇಕಲ್ಲ. ಆಯ್ಕೆಯಲ್ಲ- ಅನಿವಾರ್ಯವೂ ಅಲ್ಲ ದೊಮ್ದು ಅವಶ್ಯಕತೆ ಸಂದರ್ಭಕ್ಕೆ.

ಡಾಕ್ಟರ ಕಡೆ ಹೋಗುತ್ತಿದ್ದವನಿಗೆ ಪೂರ್ಣ ಚಂದ್ರ ತೇಜಸ್ವಿಯವರ ಊರ್ವಶಿ ಎನ್ನುವ ಸಣ್ಣ ಕತೆ ನೆನಪಾಯಿತು. ಅದರಲ್ಲಿ ಕಥಾ ನಾಯಕ ಸೋಮು, ತನ್ನ ಪ್ರೇಮವನ್ನು ಮನದಲ್ಲಿ ಧೇನಿಸುತ್ತಾ, ತನಗೆ ಕಚ್ಚಿದ ನಾಯಿ ಹುಚ್ಚು ನಾಯಿಯೋ ಅಥವಾ ಅಲ್ಲವೋ ಎಂದು ಹುಡುಕುತ್ತಾನೆ. ನಾಯಿ ಬದುಕಿದ್ದರೆ ಅದು ಹುಚ್ಚು ನಾಯಿಯಲ್ಲ ಹಾಗಾಗಿ ಹೊಕ್ಕಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳಬೇಜಾದ ಅವಶ್ಯಕತೆ ಇಲ್ಲ. ಇಲ್ಲವಾದರೆ ಹೊಕ್ಕುಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳುವುದು ತ್ರಾಸದಾಯಕವೇ ಸರಿ. ಈಗಂತೂ ಹೊಕ್ಕುಳ ಸುತ್ತ ಇಂಜೆಕ್ಷನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಹಾಗಾಗಿ ಪ್ರಶ್ನೆ ಬಂದರೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ರಿಸ್ಕ್ ಬೇಡ ಎಂದು ಡಾಕ್ಟರಿಗೆ ಹೇಳಿ, ಎಷ್ಟಿದೆಯೋ ಅಷ್ಟೂ ಸೂಜಿ ತೆಗೆದುಕೊಂಡರಾಯಿತು ಎಂದುಕೊಂಡು ಡಾಕ್ಟರ ಹತ್ತಿರ ಹೋದೆ. ಡಾಕ್ಟರು ಹೆಚ್ಚು ಪ್ರಶ್ನೆ ಕೇಳಲಿಲ್ಲ. ಮನೆ ನಾಯಿಯಾ ಬೀದಿ ನಾಯಿಯಾ ಎಂದಷ್ಟೇ ಕೇಳಿದರು. ಬೀದಿ ನಾಯಿ ಎಂದೆ. ಐದು ಇಂಜೆಕ್ಷನ್ನುಗಳನ್ನು ಬರೆದು ಕೊಟ್ಟರು. ಆಫೀಸಿನಲ್ಲೇ ಆಸ್ಪತ್ರೆ ಇರುವ ಕಾರಣ ನನಗೇನೂ ತಲೆಬಿಸಿ ಇಲ್ಲ. ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ತೆಗೆದುಕೊಳ್ಳಬಹುದು, ಡಾಕ್ಟರ್ ಫೀಸ್ ಇಲ್ಲದೆ. ಅಪ್ಪಿ ತಪ್ಪಿ ಆದರೆ ಅದಕ್ಕೆ ಪರಿಹಾರವಿಲ್ಲ.

ಆದರೆ, ಒಳಗಿರುವ ಲೆಕ್ಕಾಚಾರಿ ಬುದ್ಧಿ ಸುಮ್ಮನಿರಲಿಲ್ಲ. ಇದಕ್ಕೆ ಆರೋಗ್ಯ ವಿಮೆ ಸಿಕ್ಕೀತೋ ಎಂದೊಮ್ಮೆ ನೋಡಿದೆ. ಸಿಗುವಂತೆ ಕಾಣಲಿಲ್ಲ. ನನ್ನೊಳಗಿದ್ದ ಲೆಕ್ಕಾಚಾರಿ ಸತ್ತು ಬಿದ್ದ ಅಲ್ಲಿಗೆ. ತಿಳಿದೆ ಸಮಸ್ಯೆ ಬಗೆ ಹರಿಯಿತು ಅಂತ. ಆದರೆ ಘಟನೆಯ ಜೊತೆ ನಾನು ಸೇರಿ ಮತ್ತೆ ಹೊತ್ತು ತಂದ ಮಾತುಗಳಲ್ಲಿ ಇದೂ ಒಂದಾಗುತ್ತದೆ ಎಂದು ಖಂಡಿತ ಎಣಿಸಿರಲಿಲ್ಲ. ಆದರೆ ಆಗಿಯೇ ಬಿಟ್ಟಿತು. ಭಗವಂತನೇ ಹೇಳಿದ್ದಾನಲ್ಲ. ಜ್ಣಾನ ಕಾಲದೊಂದಿಗೆ ಸೇರಿ ಕಾಲ ನಿನ್ನೊಂದಿಗೆ ಸೇರಿದಾಗ ಮಾತ್ರ ಅದರ ಸಿದ್ಧಿ ಸಾಧ್ಯ ಎಂದು.  ಅದು ನಿಜ.

ಮರುದಿನ ಒಂದು ಕಾರ್ಯದ ಮನೆ. ನಾಯ್ ಹಿಂದೊಮ್ಮೆ ಕಚ್ಚಿದ್ದಾಗ ಮಾಡಿದ್ದ ಎಲ್ಲಾ ಪಥ್ಯದ ನೆನಪಿತ್ತು ನನಗೆ. ಇದೊಂದು ವಿಶೇಷ. ತಿಂದಿದ್ದು ಏನು ಎಂದು ಯಾರಿಗೂ ನೆನಪಿರುವುದಿಲ್ಲ, ಆದರೆ ತಿನ್ನದೇ ಬಿಟ್ಟಿದ್ದು ಮಾತ್ರ ಮರೆಯುವುದೇ ಇಲ್ಲ. ಇದು ಒಳ್ಳೆಯದಲ್ಲ. ಮತ್ತೆ ಅದರ ಆಸೆಗೇ ಏನೇನೋ ಆಗಿ ಹುಟ್ಟಬೇಕಾಗಿ ಬಂದರೆ ಕಷ್ಟ. ಆದರೆ ಕೆಲವರಿಗೆ ಇದು ತಿಳಿಯುವುದಿಲ್ಲ ಬೇಡ ಎಂದು ಹೇಳಿದರೆ ಪ್ರಶ್ನೆಗಳ ಬೋಗಿ. "ಎಂತಕ್ಕೆ ತಿಂತಲ್ಲೆ?" ಎನ್ನುವುದರಿಂದ ಶುರುವಾಗುತ್ತದೆ ಪ್ರಶ್ನೆ. ಆಮೇಲೆ ಅದಕ್ಕೆ ಪ್ರಶ್ನೆಗಳು ಮಾತ್ರ ಸೇರಿಕೊಳ್ಳುತ್ತವೆ. "ತೀದ್ರೆ ಎಂತ ಆಗ್ತು?" "ಬೇರೆ ಯಾರೂ ತಿಂತ್ವೇ ಇಲ್ಯಾ?" "ಮುಂಚೆ ತಿಂತಿದ್ದೆ ಈಗ ಎಂತಕ್ಕೆ ಬ್ಯಾಡ?" "ಒಂಚೂರೂ ತಿನ್ನಲಾಗ್ದಾ?" "ಚೂರು ತಿಂದರೂ ತೊಂದ್ರೆಯಾ?" ರೀತಿ ಉತ್ತರ ಇಲ್ಲದ ಮತ್ತು ಬೇಡದ ಪ್ರಶ್ನೆಗಳಿಗೆ ಏನೂ ಮಾಡಲಾಗದ ದೌರ್ಬಲ್ಯ ನನ್ನದ್ದು. ಪರಿಣಾಮ ಸಿಟ್ಟು. ಸಿಟ್ಟಿನಿಂದ ಸಾಧಿಇಸುವುದು ಏನೂ ಇಲ್ಲ ನಿಜ. ಅಂತೆಯೇ ಸಿಟ್ಟಿಗೆ ಕಾರಣವಾಗುವ ಪ್ರಶ್ನೆಗಳಿಂದಲೂ ಕೂಡಾ. ಆದರೆ ಕೊನೆಗೆ ಕಾಣುವುದು ಶಶಾಂಕನ ಸಿಟ್ಟಷ್ಟೆ. ಕ್ಷಮಿಸಿ ವಿಚಾರ ಎಲ್ಲೋ ಹೋಯಿತು. ಅದೇ ಕಾರಣಕ್ಕೆ ನಾನು ಪಥ್ಯವಿದ್ದಾಗ ಮುಲಾಜಿಲ್ಲದೆ ಅದರ ಕಾರಣವನ್ನು  ಹೇಳಿಬಿಡುತ್ತೇನೆ. ಕೆಲವರಿಗೆ ಇದು ಸಿಂಪತಿ ಗಿಟ್ಟಿಸುವ ಹುನ್ನಾರವೆಂಬಂತೆ ಕಂಡೀತು. ಅದಕ್ಕೆ ನಾನು ಹೊಣೆಯಲ್ಲ.

ಹೀಗೆಯೇ ಕಾರ್ಯದ ಮನೆಯಲ್ಲಿ ನಾನು ಕೆಲವೊಂದನ್ನು ತಿನ್ನದಿದ್ದಾಗ "ಎಂತಕ್ಕೆ" ಎನ್ನುವ ಸದಾಕಾಲದ ಯಾವತ್ತೂ ನನ್ನ ಪಾಲಿಗೆ ಸಾಯದ ಪ್ರಶ್ನೆ ಎದುರಾಯ್ತು. ಉತ್ತರ ಕೊಟ್ಟೆ. ಆದರೆ ಮತ್ತೊಂದು ಪ್ರಶ್ನೆ ಎದುರಾಗಬೇಕೇ. "ಹೆಂಗೆ ಕಚ್ಚಿದ್ದು ನಾಯಿ?" ಇದಕ್ಕೆ ಹೇಗಪ್ಪಾ ಉತ್ತರ ಕೊಡಲಿ, ನಾಯಿ ಬಾಯಿ ಕಳೆದು ಕಚ್ಚಿತು ಅಷ್ಟೇ. ಆದರೆ ಉತ್ತರ ಹೊತ್ತಿನಲ್ಲಿ ತಲೆ ಹರಟೆ ಉತ್ತರವಾಗುತ್ತದೆ. ಕೇಳಿದವರದ್ದು ನಿಜ ಕಳಕಳಿ-ಕಕ್ಕುಲತೆ. ಆದರೆ ಉತ್ತರ ಕೊಡುವುದು ಕಷ್ಟ. ಏಕೆಂದರೆ ಭಾವಾರ್ಥ ಗೂಢಾರ್ಥದ ಮಾತುಗಳು ದಿನ ನಿತ್ಯದ ವ್ಯವಹಾರಕ್ಕೆ ಬೇಡ ಎಂದೇ ನನ್ನ ನಂಬಿಕೆ. ಅದಕ್ಕೆ ಉತ್ತರ ಕೊಟ್ಟೆ. "ಹಿಂದಿಂದ ಬಂದು ಕಚ್ಚಿತು" ಅಂತ.

ಪ್ರಶ್ನೆ ಇದೊಂದೇ ಅಲ್ಲ. "ನೀ ಎಂತ ಮಾಡಿದ್ದೆ?" ಎಂದೂ ಕೇಳಿದರು. ನಾನೇನಾದರೂ ಮಾಡಿಯೇ ನಾಯಿ ಕಚ್ಚಬೇಕಾ? ಅಂದರೆ ನಾಯಿಗೆ ಪೂರ್ತಿ ವಿವೇಚನಾ ಶಕ್ತಿ ಇದೆ. ನನಗಿಲ್ಲ ಎಂದು ಅರ್ಥವಲ್ಲ. ಕೇಳುವುದಕ್ಕೊಂದು ಪ್ರಶ್ನೆ ಅಷ್ಟೇ. ಆದರೆ ಇದಕ್ಕೆ ಸ್ವಲ್ಪ ಹತ್ತಿರದ ಉತ್ತರ ಕೊಡುವುದೂ ಕಷ್ಟ. "ನಾ ಎಂತ ಮಾಡ್ಲೆ. ಹಿಂದಿಂದ ಬಂದು ಕಚ್ಚಿಬಿಡ್ತು" ಎಂದು ಹೇಳಿ ದಾಟಿದೆ ಮುಂದೆ. ಅವರಿಗಿದ್ದ ಕಳಕಳಿ ಇಷ್ಟೇ ನಾನೇನಾದರೂ ನಾಯಿಯ ಬಾಲ ಮೆಟ್ಟಿದ್ದನಾ ಅಂತ. ಅದಕ್ಕೆ ಇದು ಪೀಠಿಕೆ.

ಇನ್ನೂ ಒಂದು ಮಜವಾದ ಪ್ರಶ್ನೆ ಎಂದರೆ, "ನಾಯಿ ಮರಿ ಹಾಕಿತ್ತಾ?" ಕೇಳಿದವರೇನು ಹೋಗಿ ಮರಿ ತರುವುದಿಲ್ಲ. ನನಗೊಂದು ಎಚ್ಚರಿಕೆಯ ಮಾತು ಆಡಲು ಪೀಠಿಕೆ ಅದು. ಕಳಕಳಿಗೆ ಸಂತೋಷವಿದೆ. ಸಹಜವೇ ಅದು. ಆದರೆ ನಾಯಿ ಕಚ್ಚಿಸಿಕೊಂಡ ಹೊತ್ತಿಗೆ ಯೋಚನೆ ಬರುವುದೇ ಇಲ್ಲ. ಡಾಕ್ಟರ ದುಕಾನ್ ಎಲ್ಲಿದೆ ಎಂದು ಹುಡುಕುವ ಕಡೆಗೇ ತಲೆ ಹೋಗುತ್ತದೆ. ನಾಯಿಯೋ ಅದರ ಮರಿಯೋ ಯೋಚನೆಗೇ ಬರುವುದಿಲ್ಲ.

ಕೇಳಿದ ಮತ್ತೊಂದು ಪ್ರಶ್ನೆ "ನಾಯಿಗೆ ಹುಚ್ಚು ಹಿಡಿದಿತ್ತಾ?" ಈಗ ಮತ್ತೆ ನಾನು ಊರ್ವಶಿಯ ಸೋಮು ಆಗಿದ್ದೆ. "ನೋಡಲ್ಲೆ. ರಿಸ್ಕ್ ಬ್ಯಾಡ ತಗಬುಡ್ತಿ ಇಂಜೆಕ್ಷನ್" ಎಂದು ಉತ್ತರಿಸಿದ್ದೆ.

ಒಟ್ಟಿನಲ್ಲಿ ಪ್ರಶ್ನೆಗಳು ತಪ್ಪುವುದಿಲ್ಲ. ರೂಪ ಬದಲಾವಣೆಯಾಗುತ್ತದೆ ಎನ್ನುವ ಸತ್ಯ ನನಗೆ ಗೊತ್ತಾಯಿತು. ಪ್ರಶ್ನೆಗಳನ್ನು ಋಷಿ ಮುನಿಗಳಲ್ಲಿ ಕೇಳಿದರೆ ಉಪನಿಷತ್ತುಗಳು ಹುಟ್ಟಿದ್ದವು. ನಮ್ಮಂಥಾ ಅವಾಂತರಿಗಳಲ್ಲಿ ಕೇಳಿದರೆ ಅದು ಹೊತ್ತು ತಂದ ಮಾತುಗಳಲ್ಲಿ ಒಂದಾಗುತ್ತದೆ ಅಷ್ಟೇ.

ಪ್ರಶ್ನೆಗಳನ್ನು ಕೇಳಿದ ಯಾರೂ ಬೇಸರಿಸಬೇಡಿ. ಕೇಳುವುದನ್ನೂ ನಿಲ್ಲಿಸಬೇಡಿ. ಇದು ತಮಾಷೆಗೆ ಅಷ್ಟೇ. ನಿಮ್ಮ ಪ್ರಶ್ನೆಗಳಿರದಿದ್ದರೆ ಲೇಖನ ಬರುತ್ತಿರಲಿಲ್ಲ. ಎಲ್ಲಾ ಇಂಜೆಕ್ಷನ್ನುಗಳನ್ನೂ ಮುಗಿಸಿ ಸುಮ್ಮನೆ ಘಟನಾವಳಿಗಳನ್ನು ಮೆಲುಕು ಹಾಕಿದಾಗ ಹೀಗೆಲ್ಲ ಅನ್ನಿಸಿತು. ಹಂಚಿಕೊಂಡೆ.

ಹೀಗಿದೆ ಶ್ವಾನ ದಂಶನ ಪ್ರಕರಣ.