Monday, December 3, 2018

ವರದಕ್ಕನ ವರಾತಗಳು (ಪ್ರಸಂಗ 3)

[ಇಲ್ಲಿಯವರೆಗೆ: ಚಹಾ ಮಾಡುವುದರಲ್ಲಿ ಸಿದ್ಧಿ ಪ್ರಸಿದ್ಧಿ ಪ್ರಚಾರ ಮೂರನ್ನೂ ಪಡೆದಿದ್ದ ವರದಕ್ಕ ತನ್ನ ಪ್ರಸಿದ್ಧಿಗೆ ಮಗ ಕಾಪಿ ಕುಡಿದು ಕುತ್ತು ತಂದರೆ ಎನ್ನುವ ಭಯದಿಂದ ಆತನಲ್ಲಿ ಒದು ರೀತಿಯ ಭಯವನ್ನು ಹುಟ್ಟಿಸಿದಳು. ನಂತರದಲ್ಲಿ ವರದಕ್ಕ ಇದಕ್ಕೆ ಪಶ್ಚಾತ್ತಾಪ ಪಟ್ಟಳು. ಅದಕ್ಕೆ ಪ್ರಾಯಶ್ಚಿತ್ತವನ್ನು ಯೋಚಿಸುತ್ತಿದ್ದ ಹೊತ್ತಿನಲ್ಲಿ ಅವಳ ಸೋದರ ಮಾವನ ಮಗ ತನ್ನ ಮಗನ ಮದುವೆಗೆ ಕರೆಯೋಲೆ ಕೊಟ್ಟ. ಸೋದರ ಮಾವನ ಮನೆಯಲ್ಲಿನ ಮದುವೆ ಸಂವರಣಿಗೆಯನ್ನು ಹೊರಟ ವರದಕ್ಕನ ಸವಾರಿ ಹೂತನ್ ಜಾನ್ಮನೆಯ ಬದಲು ಅಮ್ಮೆನಳ್ಳಿ ಜಾನ್ಮನೆಯನ್ನು ಸೇರಿ ನಂತರ ಅವಳ ಚಿಕ್ಕಮ್ಮನ ಮಗಳು ಜಲಜಾಕ್ಷಿಯ ಸಂಗಡ ಹೂತನ್ ಜಾನ್ಮನೆಗೆ ಚಿತ್ತೈಸಿತು]

ಸೋದರ ಮಾವನ ಮನೆ ಸೇರಿದ ವರದಕ್ಕನನ್ನು ಅವರೆಲ್ಲರೂ ಪ್ರೀತಿ ಆದರ ಸಡಗರದಿಂದಲೇ ಉಪಚರಿಸಿದರು. ವರದಕ್ಕ ಒಂದೊಂದು ತಯಾರಿಯನ್ನೂ ಕೂಲಂಕುಶವಾಗಿ ನೋಡಿ ಸಂತೋಷ ಪಟ್ಟು "ಚೊಲೋ ಆಜು" ಎಂದೆನ್ನುತ್ತಾ ಸಂಭ್ರಮಿಸಿದ್ದಳು. ನಂತರ ನೀಲಕಂಠನ ಹೆಂದತಿ ಕಲಾವತಿ, ಬಂಗಾರದಾಭರಣಗಳನ್ನು ತೋರಿಸಲು ವರದಕ್ಕನನ್ನು ಕರೆದಳು. ವರದಕ್ಕ, ಜುಮಕಿ ಬೆಂಡೋಲೆ, ತಾಳಿ ಸರ, ಬಳೆ ಎಲ್ಲವನ್ನೂ ನೋಡಿ ಸಂತಸ ಪಟ್ಟಳು. ಅಷ್ಟರಲ್ಲಿ ಕಲಾವತಿಗೆ ಜವಳಿ ತೋರಿಸದೇ ಇದ್ದಿದ್ದು ನೆನಪಾಯಿತು. "ಅಯ್ಯೋ!! ರಾಮನೇ!! ಆನೆಂತಾ ಮಳ್ಳಾಗಿಕ್ಕು!! ಸೀರೆ ತೆಗೆದು ತೋರ್ಸಿದ್ನೇ ಇಲ್ಯೆಲೇ!! ತಡ್ಯೇ ತೆಗದು ತೋರಸ್ತಿ." ಎಂದಳು. ವರದಕನೂ ಮಾತು ಸೇರಿಸಿದಳು "ಇಶಿ ಮಳ್ಳೆಯ. ಆನೂ ಕೇಳಕ್ಕು ಮಾಡಿಗಿದ್ದಿ. ಮರ್ತೇ ಹೋಯ್ದು. ಸೀರೆ ತೆಗದು ತೋರ್ಸೇ" ಎಂದಳು. ಜೊತೆಗಿದ್ದ ಜಲಜಾಕ್ಷಿ ಕೂಡಾ " ಹೌದೇ!! ಮದುವೆ ಮನೆ ಸಂವರಣಿಗೆ ನೋಡವ್ವು ಹೇಳಿ ಬಂಜ್ಯ. ನೀ ಸೀರೆ ತೆಗದ್ ತೋರ್ಸದೇ ಸೈ" ಎಂದಳು. ಮೂರು ಹೆಂಗಸರು ಸೇರಿದ ಮೇಲೆ ಸಣ್ಣ ಧ್ವನಿಯ ಮಾತು ಅದೆಲ್ಲಿ? ಇದೆಲ್ಲವೂ ಹೊರಗಿದ್ದ ಸದಾಶಿವನಿಗೆ ಕೇಳಿಸಿತು. ಆತ "ಬಾಗ್ಲ್ ಹಾಕ್ಯಳ್ರೇ" ಎಂದ. ಪರಿಣಾಮವಾಗಲಿಲ್ಲ. ಆಗ ತನ್ನ ಮಗಳು ಸಿಂಚನಾಳನ್ನು ಕಳಿಸಿದ. ಅವಳು ಬಂದು "ದೊಡ್ಡಾಯಿ!! ಕಾಕಂಗೆ ನಿದ್ದೆ ಮಾಡವ್ವಡ. ನಿಂಗವ್ವು ಬಾಗ್ಲು ಹಾಕ್ಕಂಡು ನೋಡವ್ವಡ" ಎಂದಳು. ಎಂದವಳೇ ದೊಡ್ದ ಧ್ವನಿಯಲ್ಲಿ ನಗತೊದಗಿದ್ದಳು. ಯಾರ್ ಬಂದು ಕೇಳಿದರು. "ಎಂತಾತೇ?"

"ಕಾಕ ಅತ್ತೆ ಅವಕ್ಕೆ ದೊಡ್ದಾಯಿಗೆ ಮತ್ತೆ ಅತ್ತಿಗೆ ಬಾಗ್ಲ್ ಹಾಕ್ಕಂಡ್ ಸೀರೆ ತೆಗೆದು ನೋಡ್ಕಳಿ" ಅಂದ ಎನ್ನುತ್ತಾ ಮತ್ತೂ ದೊಡ್ದದಾಗಿ ನಕ್ಕಳು. ಉಳಿದವರೂ ಎಲ್ಲ ಅವಳ ಜೊತೆ ನಗು ಸೇರಿಸಿದರು. ಮಾತುಉ ನಗು ಹರಟೆಗಳು ಮುಂದುವರೆದವು. ಅಷ್ಟರಲ್ಲಿ ಯಾರಿಗೋ ಚಹಾ ನೆನಪಾಯಿತು. ವರದಕ್ಕನಿದ್ದಂತೆ ಮತ್ತೊಬ್ಬರು ಚಹಾ ಮಾಡುವುದೇ? ಘೋರ ಅಪಮಾನ-ಚಹಾಕ್ಕೆ-ವರದಕ್ಕನಿಗೆ ಇಬ್ಬರಿಗೂ. ಹಾಗಾಗಿ ವರದಕ್ಕನೇ ಚಹಾ ಮಾಡಿದಳು.

"ಮದ್ವೇಲಿ ಚಾಕ್ಕೆ ವ್ಯವಸ್ಥೆ ಮಾಡ್ಶಿದ್ಯೇನೋ ಭಾವ" ಎಂದ ಪಕ್ಕದ ಮನೆಯಿಂದ ಆಗಷ್ಟೇ ಬಂದ ಮಾಬ್ಲೇಸ್ರ.

"ಹೇಳಿದ್ದೆ. ಯಂಗಳ ಬದಿಗೆ ಚಾನೇ ಸೈ. ಕಾಪಿ ಕುಡ್ಯವ್ವು ಇಲ್ದೇ ಇಲ್ಲೆ. ನಿಂಗವ್ವು ಒಳ್ಳೆ ಚಾ ಮಾಡ್ಸವ್ವು ಹೇಳಿ." ಎಂದ ನೀಲಕಂಠ

ಸದಾಶಿವ ಎಂದ " ಅಪರೂಪಕ್ಕೆ ಸಾಗರ ಬದಿಗೆ ಹೋಗಾಗಿರ್ತು. ಯಾರದ್ದಾರು ಮನೇಲಿ ಕಾಪಿ ಕುಡ್ಯವ್ವು ಹೇಳಲೆ ಬಿಡಿಯ ಆಗ್ತು. ಮದ್ವೆ ಮನೆ ಹೇಳ್ಕೆಲಿ ಸಮಾ ಜಡ್ದ್ ಕಾಪಿ ಕುಡ್ಯ ಬಿಡ ಮಾಬ್ಲೇಸ್ರ"

" ಯಾವಾಗ್ಲೂ ಚಾ ಕುಡ್ಯವಕ್ಕೆ ಕಾಪಿ ಕುಡದ್ರೆ ತಡಿತಿಲ್ಯ. ಹೊಟ್ಟೆ ನೋವು ಬತ್ತು"

"ಜೀರಿಗೆ ತಿಂದ್ರಾತಪ" ಎಂದ ಸದಾಶಿವ ನಗುತ್ತಾ.

ಅಷ್ಟರಲ್ಲಿ ವರದಕ್ಕನ ಅಮೃತ ಹಸ್ತದಲ್ಲಿ ತಯಾರಾದ ಚಹಾ ಬಂತು, ಚೂಡಾದೊಂದಿಗೆ. ಎಲ್ಲರಿಗೂ ಚಹಾ ಸೇವನೆಯಾಯಿತು. ವರದಕ್ಕನನ್ನು ಜಲಜಾಕ್ಷಿ ತನ್ನ ಜೊತೆ ಕರೆದೊಯ್ದು ಮತ್ತೆ ಬಸ್ ಸ್ಟ್ಯಾಂಡಿಗೆ ಬಿದದೆ ಅವಳ ಮನೆತನಕ ಕರೆದೊಯ್ದು ಬಿಟ್ಟುಕೊಟ್ಟು ತನ್ನ ಮನೆಗೆ ಹೋದಳು.

ಅಕಾ ಇಕಾ ಎನ್ನುವಷ್ಟರಲ್ಲಿ ಮದುವೆಯ ದಿನ ಬಂತು. ವರದಕ್ಕ ಜಲಜಾಕ್ಷಿ ಮತ್ತು ಗಿರಿಜಾ ದಿಬ್ಬಣದ ಬಸ್ಸೇರಿ ವರದಾಮೂಲಕ್ಕೆ ಬಂದಿಳಿದರು. ಅಲ್ಲಿ ಹೆಣ್ಣಿನ ಕಡೆಯಿಂದ ಗಿರಿಜಾಳ ದೂರದ ಬಂಧು ವೆಂಕಟೇಶ ಬಂದಿದ್ದ. ಆತನೊಂದಿಗೆ ಮಾತಾಡುತ್ತಾ ದೇವಸ್ಥಾನ ನೋಒಡುವ ಕಾರ್ಯಕ್ರಮವೂ ಜರುಗಿತು.

"ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದು ಇಲ್ಲೇಯಾ" ಎಂದಳು ಜಲಜಾಕ್ಷಿ

"ಅಲ್ಲ. ಅದು ವದ್ದಳ್ಳಿ. ಇದು ವರದಾಮೂಲ. ಇದು ವರದಾ ನದಿ ಹುಟ್ಟ ಜಾಗ. ಅಲ್ಲಿ ಒಳಗಿದ್ದಲ ದೇವಿ ಅದೇ ವರದಾಂಬೆ. ಇದೋ ಇಲ್ನೋಡು ಸೂರ್ಯ ನಾರಾಯಣ. ಅವನ್ ಅಪ್ರಭಾವಳಿ ಮೇಲೆ ಉಳಿದ ಎಂಟು ಗ್ರಹ ಇದ್ದು ನೋಡು. ಪಕ್ಕಕ್ಕೆ ರಾಮೇಶ್ವರ. ಅವನ ಪಕ್ಕದಲ್ಲಿ ವೀರಭದ್ರ. ಅಲ್ಲೇ ಪಕ್ಕದಲ್ಲಿ ಶಂಭುಲಿಂಗೇಶ್ವರ. ಅಲ್ಲಿ ನೊಡು ಅನ್ನ ಪೂರ್ಣೇಶ್ವರಿ"

"ಎಷ್ಟು ಪುಟೀಕಿದ್ದು ಅನ್ನಪೂರ್ಣೇಶ್ವರಿ ದೇವ್ರು" ಎಂದಳು ಗಿರಿಜಾ

"ಅಲ್ಲಿ ನೋಡು ಕಲ್ಲಿನ ಹೋಮದ ಹುಟ್ಟು. ಎಷ್ಟು ದೊಡ್ಡಕಿದ್ದು. ಭರತ ಮುನಿ ಇಲ್ಲಿ ಯಜ್ಞ ಮಾಡಿದಾಗ ಇದರಲ್ಲೇ ತುಪ್ಪ ಹಾಕಿದ್ನಡ. ಅದು ಲಕ್ಷ್ಮೀ ತೀರ್ಥ, ಅದು ಸದಾಶಿವ ದೇವಸ್ಥಾನ". ಎಂದು ಒಳಗಿನ ಪ್ರಾಂಗಣವನ್ನೆಲ್ಲಾ ತೋರಿಸಿದ. ನಂತರ ಹೊರಬಂದು, "ಇದೇ ನೋಡು ವರದಾ ತೀರ್ಥ. ವರದಾ ನದಿ ಹುಟ್ಟದು ಇಲ್ಲೇ. ಅಲ್ಲಿದ್ದಲ ಶಣ್ಣ ಗುಡಿ, ಅದು ವರದೇಶ್ವರ. ಶ್ರೀಧರ ಸ್ವಾಮಿಗಳು ಅದನ್ನ ಗುರುತು ಹಿಡಿದು ಅದಕ್ಕೆ ವರದೇಶ್ವರ ಅಂತ ಕರೆದ. ಇಲ್ಲಿ ನೋಡು ಗಣಪತಿ, ಜಪದ ಸರ ಹಿಡ್ಕಂಡ ಅಪರೂಪದ ಗಣಪತಿ ಇದು" ಎಂದು ತೋರಿಸಿದ.

"ವರದಕ್ಕನ ಬುಡ ಇಲ್ಲೇಯಾ" ಎಂದಳು ಜಲಜಾಕ್ಷಿ ನಗುತ್ತಾ. ಉಳಿದವರೂ ನಗು ಸೇರಿಸಿದರು.

ನಂತರ ಅಲ್ಲಿಂದ ಬಲಕ್ಕೆ ಕರೆದುಕೊಂಡು ಹೋಗಿ "ಅಗ್ನಿ ತೀರ್ಥ, ಇದರಲ್ಲಿ ಸ್ನಾನ ಮಾಡಿರೆ ಚರ್ಮ ರೋಗ, ಮೈ ಮೇಲೆ ಬರದು ಎಲ್ಲಾ ಹೊಗ್ತು, ಇದು ಗೋಪಾಲಕೃಷ್ಣ. " ಎಂದು ಎಲ್ಲವನ್ನೂ ತೋರಿಸಿದ.

ವರದಕ್ಕನಿಗೆ ಒಂದು ಅನುಮಾನ ಹೊಕ್ಕಿತು. ತೀರಿಸಿಕೊಂಡು ಬಿಟ್ಟಳು. "ವರದಾ ನದಿ ನಮ್ಮ ಬನವಾಸೆಲಿ ಹರಿತು. ಲಕ್ಷ್ಮೀ ನದಿ, ಅಗ್ನೀ ನದಿ ಎಲ್ಲಿ ಹರಿತು. ಎಲ್ಲೂ ಕೇಳಿದ್ವೇ ಇಲ್ಲೆ."

ಜಲಜಾಕ್ಷಿ ಮಾತು ಸೇರಿಸಿದಳು "ಸರಸ್ವತೀ ನದಿ ಹರೀತಲ ಹಾಂಗೇ ಗುಪ್ತವಾಗಿ ಹರೀತಿಕ್ಕು ತಗ"

"ಎಂತಕ್ಕೆ ಹಿಂಗೆ ಕೇಳಿದ್ಯೇ ವರದಕ್ಕ" ಎಂದ ವೆಂಕಟೇಶ.

"ವರದಾ ತೀರ್ಥದಲ್ಲಿ ವರದಾ ನದಿ ಹುಟ್ಟಿದ್ದು ಅಂದಮೇಲೆ ಲಕ್ಷ್ಮೀ ತೀರ್ಥದಲ್ಲಿ ಲಕ್ಷ್ಮೀ ನದಿ ಹುಟ್ಟವ್ವಲ್ದೋ! ಅಗ್ನಿ ತೀರ್ಥದಲ್ಲಿ ಅಗ್ನಿ ನದಿ ಹುಟ್ಟವಲ್ದೋ." ವೆಂಕಟೇಶನಿಗೂ ಡೌಟ್ ಹತ್ತಿಬಿಟ್ಟಿತು. ಶಂಕರ ಭಟ್ಟರು ಸಿಕ್ಕಿದಾಗ ಕೇಳಿದರಾಯ್ತು ಎಂದುಕೊಂಡ.

ಮತ್ತೆ ಎಲ್ಲರೂ ಕಲ್ಯಾಣ ಮಂಟಪದತ್ತ ಬಂದರು. ಅಲ್ಲಿ ಆಸರಿಗೆ ಕೊಡುವಲ್ಲಿ ಒಬ್ಬ ಫ್ರೆಶ್ ಕಾಪಿ ಮಾಡುತ್ತಿದ್ದ. ವರದಕ್ಕನ ಗಮನವೆಲ್ಲಾ ಆ ಕಡೆಗಿತ್ತು. ಆತ ಕಾಪಿ ಡಿಕಾಕ್ಷನ್ ಹಾಕಿ ನಂತರ ಹಾಲು ಸೇರಿಸುತ್ತಿದ್ದ. ಅದನ್ನು ಗಮನವಿಟ್ಟು ನೋಡಿದ್ದಷ್ಟೇ ಅಲ್ಲ, ಪ್ರಕ್ರಿಯೆಯನ್ನು ಮನದಲ್ಲೇ ಮಂತ್ರದಂತೆ ಮಣಮಣಿಸಿದಳು-"ಕಾಪಿ ಕಣ್ಣು ತೆಕ್ಕಂಡು ಅದನ್ನ ತಣಸ್ಕಂಡು ಆಮೆಲೆ ಬೆಶಿ ಹಾಲು ಹಾಕವ್ವು".

ಮತ್ತೆ ದಿಬ್ಬಣದ ಬಸ್ಸೇರಿ ಮನೆ ಸೇರಿದ ವರದಕ್ಕ, ಗಪ್ಪತಿ ಭಾವನಿಗೆ ಕಾಪಿ ಹಿಟ್ಟು ತರುವಂತೆ ತಾಕೀತು ಮಾಡಿದಳು. ತರದೇ ಇರಲಾದೀತೇ? ತಂದ.

ವರದಕ್ಕ ಕಾಪಿ ಪುಡಿಯನ್ನು ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕೊತಕೊತನೆ ಕುದಿಸಿದಳು. ಅದು ಮಂದವಾಗಿ ಕಣ್ಣು ತಯಾರಾಯಿತು. ಅಷ್ಟರಲ್ಲಿ ಜಾನ್ಮನೆಯ ಸೋದರ ಮಾವನ ಮನೆಯಲ್ಲಿ ನಡೆದ ಮಾತು ಕತೆ ನೆನಪಾಯಿತು. ಸದಾಕಾಲ ಚಹಾ ಕುಡಿಯುವವರಿಗೆ ಕಾಪಿ ಕುಡಿದರೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುವುದೂ, ಜೀರಿಗೆ ಅದಕ್ಕೆ ಔಷಧ ಎನ್ನುವುದೂ ನೆನಪಾಗಿ, ತಯಾರಾಗಿದ್ದ ಕಣ್ಣಿಗೆ ಜೀರಿಗೆ ಹಾಕಿ ಮತ್ತಷ್ಟು ಕುದಿಸಿದಳು. ಅದು ತಣಿಯುವುದನ್ನೇ ಕಾಯ್ದು, ಅದಕ್ಕೆ ಹಾಲು ಸೇರಿಸಿದಳು.

ಸಡಗರದಮಿತ ಸಂಭ್ರಮದಿಂದ ಕಾಪಿಯನ್ನು ಬಾಯಿಗಿಟ್ಟ ವರದಕ್ಕ, ಮನೋವೇಗ ವಾಯುವೇಗಗಳನ್ನೂ ಮೀರಿ ಕಾಪಿಯನ್ನು ಅದೇ ಲೋಟಕ್ಕೆ ತುಪ್ಪಿ "ಇಶ್ಶಿಶ್ಶೀ" ಎಂದಳು.

ಅವಳು ಇಶ್ಶಿಶ್ಶೀ ಎಂದ ಪರಿಗೆ ಗಿರಿಜಾ ಗಾಭರಿಗೊಂಡು ಅಡುಗೆ ಮನೆಗೆ ಬಂದು "ಎಂತಾತೇ" ಎಂದಳು.

"ಕಾಪಿ ಮಾಡಿದಿದ್ದಿ. ಬಾಯ್ಗೆ ಹಾಕ್ರೆ ಮಡ್ ಮಡ್ಡಿ" ಎಂದಳು.

"ಅಯ್ಯೋ ವರದಕ್ಕನೇ. ಕಾಪಿ ಮಾಡದು ಹಾಂಗಲ್ದೇ. ಫಿಲ್ಟರಿಗೆ ಹಾಕಿ ಮಾಡವ್ವು. ನೀ ರಾಜಿ ಮನೇಲಿ ನೋಡಿದ್ದಿಲ್ಯೋ" ಎಂದಳು.

"ಅಯ್ಯೋ ಆನ್ ನೋಡಿದ್ನೇ ಇಲ್ಯೇ. ನಿಂಗೆ ಬತ್ತೋ?" ಎಂದಳು ವರದಕ್ಕ.

" ನೀ ಬಂಗಾರದಂಥಾ ಚಾ ಮಾಡಕ್ಕಿದ್ರೆ ನಾ ಎಂತಕ್ಕೆ ಕಾಪಿ ಮಾಡದು ಕಲಿಯವ್ವೇ" ಎಂದಾಗ ವರದಕ್ಕ ಮತ್ತೆ ಸಂತೋಶಿಸಿದ್ದಳು.

ಆದರೆ ಅವಳಿಗೆ ಮಗನ ವಯೋಸಹಜ ಆಸೆಯೊಂದನ್ನು ಮೊಳೆಯುವ ಮುನ್ನವೇ ಚಿವುಟಿದ್ದಕ್ಕೆ ಮತ್ತದಕ್ಕೆ ತಾನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದಕ್ಕೆ ಬೇಸರ ಹೆಚ್ಚಾಯಿತು. ಹೀಗೆ ಬೇಸರದಲ್ಲಿದ್ದಾಗಲೇ ಮಗ ಫೋನ್ ಮಾಡಿದ. ವರದಕ್ಕ ಮಾತಾಡುತ್ತಾ ಆಡುತ್ತಾ, ಕಾಲೇಜಿನ ಕ್ಯಾಂಟೀನ್ ಬಗ್ಗೆ ವಿಚಾರಿಸಿದಳು. "ಆಯೀ ಚಾ ಸಿಗ್ತಿಲ್ಯೇ ಗನಾಗಿ ಇಲ್ಲಿ. ಆನು ಕಾಪಿ ಕುಡಿತೆ ದಿನಾ ಆಸ್ರಿಗೆ" ಎಂದ. ವರದಕ್ಕನಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಕಾಪಿ ಮಾಡುವುದರಲ್ಲಿ ಆಗಿದ್ದ ಸೋಲು, ಅವಳಲ್ಲಿ ಕಾಪಿಯ ಕುರಿತು ಒಂದು ಛಲ ಹತ್ತಿಬಿಟ್ಟಿತು. ಕಾಲ ಮುಂದೆ ಸಾಗುತ್ತಲೇ ಇತ್ತು.

(ಮುಂದುವರೆಯುವುದು)
#ವರದಕ್ಕನ_ವರಾತಗಳು