Friday, May 24, 2019

ಸಮರಸಿಂಹಾಖ್ಯಾನ-ಪ್ರಜಾಲ್ಲೆಂದ್ರ ಪ್ರವೇಶ

ಕುಸಿದು, ಕವುಚಿ, ಮಗುಚಿ ಬಿದ್ದ ಸಮರಸಿಂಹರು ಕರಟಿ, ಸುರುಟಿ ಮುರುಟಿ ಹೋದ ತಮ್ಮ ಮೂತಿಯನ್ನು ಮತ್ತಷ್ಟು ಕಿವುಚುತ್ತಾ ಹೊರ ಜಗತ್ತಿನೆಡೆಗೆ ದೈನ್ಯದ ನೋಟವನ್ನು ಬೀರಿದರು.

ಅಲ್ಲಿ ನೋಡಿದರೆ, ನರೇಂದ್ರ ಮತ್ತು ಅಮಿತೇಂದ್ರರು ಬಿಟ್ಟ ಅಶ್ವಮೇಧದ ಕುದುರೆಯನ್ನು ಕಟ್ಟುವ ದೊಡ್ಡಪ್ಪನ ಒತ್ತಾಸೆಗೆ ಬೆಂಬಲವಾಗಿ ನಿತ್ತು ಯುದ್ಧದಲ್ಲಿ ಗಾಯವೂ ಆಗದೆ ಉಳಿದ ಪ್ರಜಾಲ್ಲೆಂದ್ರ ಕುಮಾರ ರಥ ಹತ್ತಿ ಮುಂದೆ ಸಾಗುವ ಹವಣಿಕೆಯಲ್ಲಿದ್ದ.

ಆತನ ಮುಖದಲ್ಲಿ ಗೆಲುವಿನ ನಗೆಗೂಡಿ ಕೊಂಕು ನಗೆ ಇತ್ತು. ಆಶ್ಚಮೇಧದ ಕುದುರೆ ಕಟ್ಟಿ ನಿಲ್ಲಿಸಲಾಗದಿದ್ದರೂ ಈ ನಗೆ ಹೇಗೆ ಎನ್ನುವುದು ಸಮರಸಿಂಹರಿಗೆ ತಿಳಿಯದ್ದೇನಲ್ಲ. ತನ್ನಪ್ಪ ರೇವೇಂದ್ರನ ಹಿರಿತನವನ್ನು ಹಿಂದೊತ್ತಿ ತಾನು ಪಟ್ಟವೇರಿದ ಕಂಠೀರವನ ಮಗ ಕೀಳೆಂದ್ರ ಸೋತ ಮೇಲೆ ಯುವರಾಜಾಭಿಷೇಕ ತನಗೇ ಸರಿ ಎನ್ನುವ ನಿಚ್ಚಳ ವಿಶ್ವಾಸದ ನಗೆ ಅದು.

ಇಷ್ಟಕ್ಕೆಲ್ಲಾ ಕಾರಣನಾದ ತಾತನನ್ನೊಮ್ಮೆ ನಿಕೃಷ್ಟಿಯಿಂದ ನೋಡಿ ಆತನ ಮುಖದ ಸುಕ್ಕುಗಳನ್ನೆಣಿಸಬೇಕೆಂದು ಪ್ರಜಾಲ್ಲೆಂದ್ರ ತಾತನ ಕಡೆ ತಿರುಗಿದ.

ಥಟ್ಟನೆ ತಾತನೆಡೆ ಓಡಿದ. "ರಥವೇರಿ ತಾತ. ಪೋಪುದು ನೀವೇ ನಿಶ್ಚಿತ ಎಂದ".

ಆತನ ಈ ನಿರ್ಧಾರವನ್ನು ತಾತ ಒಪ್ಪಿಬಿಟ್ಟರೆ ಎನ್ನುವ ಆತಂಕದಿಂದ ಬಂದ ತನ್ನ ತಾಯಿ ಭುವನಿ ಮತ್ತು ತಂದೆ ರೇವೇಂದ್ರ ಇಬ್ಬರನ್ನೂ ಕಣ್ಣುಸನ್ನೆಯಿಂದ ತಡೆದ. ನುಡಿದ.
"ಹಿರಿಯ ತಾತ ತಾನಿರ್ಪಾಗ ಸಿಂಹಾಸನವ ಏರಿ ಕೂರ್ವುದ ಬಿಸುಟು, ತಾತ ತಾ ಪೋಪುದ ಕಾಂಬುದೇ ಸೊಗಸು ತನಗಬ್ಬೆ. ತಾತನಿರ್ದೋಡೆಮ್ಮ ಸೈನ್ಯ ತಾ ಮುಂದಿನೊಲಿರ್ಪಲು ಸಾಧ್ಯ ನಿನಗೆಂಬೆ. ತಾತ ಪೋಗಲೇರಿ ರಥವಮ್, ಮುಂದೊಮ್ಮೆ ಅಮಿತೇಂದ್ರ ಮೈತ್ರಿ ಸಾಧ್ಯಮ್, ತಾನಂದು ತಾತನಾಶೀರ್ವಾದದಿಂ ಪಟ್ಟ ಏರ್ವೇನೀ ಮಾತು ದಿಟ" ಎಂದು ಅಮ್ಮ ಅಪ್ಪನಿಗೆ ಸಮಾಧಾನ ಮತ್ತು ಸಾಂತ್ವನ ಹೇಳಿದ, ವೀರಾವೇಶದಲ್ಲಿ. ಕುಸಿದು ಬಿದ್ದಿದ್ದ ಸಮರಸಿಂಹರು ಮೊಮ್ಮಗನ ಬಲದ ಮೇಲೆ ಎದ್ದು ಕುಳಿತರು.

ಇತ್ತ ಒಳಮನೆಯಲ್ಲಿ ತಾಯಿ ಭುವನಿಯ ಕಿವಿಯಲ್ಲಿ ಹೇಳಿದ.
"ಮಾತೆ, ತಾನು ಯುದ್ಧಕ್ಕೆ ಪೋಗಿ ಬರುವ ರಭಸದಲ್ಲಿ ರಥದ ಚಕ್ರದ ಕೀಲು ಸಡಿಲವಾಗಿರ್ಪುದು. ತಾತ ತಾನೇರಿ ಪೊದರೆ ಚಾಕಚಕ್ಯದಿಂ, ಮೈತ್ರಿ ಸಾಧ್ಯಮ್. ಅಲ್ಲದಿರೆ, ತಾತಂಗೆ ಸಗ್ಗವಪ್ಪುದು ತನಗದೆ ನಿಜ ಗೆಲುವಿಂಗೆ ಮಾರ್ಗವಪ್ಪುದು ಅಬ್ಬೆ. ನಾ ನಿನಗೆ ನಿಜವೆಂಬೆ." ಎಂದ.

ಮಗನ ಬುದ್ಧಿವಂತಿಕೆಗೆ ಭುವನಿ ಮೆಚ್ಚಿ ತಲೆದೂಗಿದಳು. " ತಾತ ಗೆದ್ದರೆ ಅಮಿತೇಂದ್ರನೊಂದಿಗೆ ಮೈತ್ರಿ ಮಾಡಿಸಿ ಪಟ್ಟ ತನ್ನ ಪುಟ್ಟಗಪ್ಪುದು ಎಂದರಿತ ಈತ ಸಮರ್ಥ ದಿಟ. ಅಲ್ಲದಿರೆ ತಾತನ ಸಾವ ಬಳಸಿ ತಾನು ಅನುಕಂಪದಲೆಯೆರ್ದು ಮುಂದಪ್ಪ ಜಾಣತನ.ಆಹಾ ನನ್ನ ಹೊಟ್ಟೆಯ ಭಾಗ್ಯವೇ" ಎಂದು ಸಂತೋಷಿಸಿದರೆ, ಇತ್ತ ರೇವೇಂದ್ರ ವರ್ಮ ಮಗನಿಗದ್ಯಾವ ಭೂತ ಪ್ರೇತ ಪಿಶಾಚಿಯ ಪೀಡೆಯೋ, ನಿಂಬೆಹಣ್ಣು ಸಾಲದಾಯ್ತು ಎನ್ನುತ್ತಾ ಚಕ್ಕೋತ ಹುಡುಕಿ ಹೊರಟ.

#ಸಮರಸಿಂಹಾಖ್ಯಾನಮು

ಸಮರಸಿಂಹಾಖ್ಯಾನಮು

ತನ್ನ ಟೈಮ್ ಸರಿಯಿಲ್ಲ ಎನ್ನುತ್ತಲೇ ಹಾಸಿಗೆಯಿಂದ ಎದ್ದ ಸಮರಸಿಂಹರು ತಮ್ಮ HMT ವಾಚ್ ನೋಡಿ ಅವಾಕ್ಕಾದರು. ಅದರಲ್ಲಿ ಒಂದೇ ಮುಳ್ಳು ಕಾಣುತ್ತಿತ್ತು. ಛೇ!! ಎನ್ನುತ್ತಾ ಕೋಣೆಯಿಂದ ಹೊರಬಂದರೆ ಮಗ ರೇವೇಂದ್ರವರ್ಮನ ಕಣ್ಣಿನಲ್ಲಿ ಧಾರಾಕಾರ ನೀರು.

ತನ್ನ ಸೋಲಿಗೆ ಈ ಮಗ ಈ ರೀತಿ ಅಳುವುದನ್ನು ಕಂಡು ಸಮರಸಿಂಹರ ಕರುಳು ಕಿತ್ತು ಬಂತು. ಅಳುವ ಮಗನಿಗೆ ತಾನು ಹೆಗಲು ನೀಡಬೇಕೆಂದು ಬರಸೆಳೆದು ಬಿಗಿದಪ್ಪಿದರು. ಆದರೆ ಮಗನ ಹೆಗಲ ಮೇಲಿನ ಟವೆಲ್ಲಿನಿಂದ ನಿಂಬೆ ಹಣ್ಣಿನ ಪರಿಮಳ ಸೂಸುತ್ತಿತ್ತು. ಆಗ ತಿಳಿದದ್ದು, ಜ್ಯೇಷ್ಠನದ್ದು ಕಣ್ಣೀರಲ್ಲ, ಆನಂದಭಾಷ್ಪ ಎಂದು.

ನಿಂಬೆ ಹಣ್ಣಿನ ಪರಿಮಳ ಅಸಹನೀಯವಾಗಿ, ತಲೆತಿರುಗಿ ಕುಸಿದು ಬಿದ್ದರು. ಪಕ್ಕದಲ್ಲಿಯೇ ಇದ್ದ ಕಂಠೀರವನ ಕಡೆ ನೋಡಿದರೆ, ಆ ಪುತ್ರ ಲತೆಯೊಂದರ ಏಟಿನಿಂದ ಕುಸಿದು ಬಿದ್ದು ಕಿಲಕಿಲ ಎನ್ನುವ ಬದಲಾಗಿ ಕೊಸರುತ್ತಿದ್ದ ,  ತನ್ನ ಮಗ ಕೀಳೆಂದ್ರವರ್ಮನನ್ನು ಎತ್ತುವುದಕ್ಕಾಗದೆ ಅಳುತ್ತಿದ್ದ.

ಸಮರಸಿಂಹರು ದೀರ್ಘವಾಗಿ ಉಸಿರೆಳೆದರು. ಎಂದಿನಂತೆ ಬರಬೇಕಿದ್ದ ವಿಕ್ಸ್ ಘಾಟು ಬಡಿಯದ್ದು ನೋಡಿ, ಕಂಠೀರವನ ಕಡೆಯಿಂದ ಸಹಾಯ ಸಾಧ್ಯವಿಲ್ಲ ಎಂದರಿತರು.

ಎದ್ದು ನಿಲ್ಲುವುದಕ್ಕೆ ಸಹಾಯಕ್ಕಾಗಿ ಒಂದು ಕಾಲದ ಮಿತ್ರ ಅಹಿಂದವರ್ಮನ ಕಡೆ ದೈನ್ಯತೆಯ ನೋಟವನ್ನು ಬೀರಿದರು. ಆತ ತನಗೂ ಸಾಧ್ಯವಿಲ್ಲ ಎನ್ನುವಂತೆ ಕೈಯಾಡಿಸಿದ. ಕೈನಲ್ಲಿನ ಐದು ಬೆರಳುಗಳಲ್ಲಿ ನಾಲ್ಕು ಮುರಿದುದನ್ನು ಕಂಡು ಗದ್ಗದಿತರಾಗಿ  ಮತ್ತೆ ಕುಸಿದರು.

Wednesday, May 15, 2019

ಸಾಮಗರು

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ.ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋs ರ್ಜುನ ಸುಖಂ ಯದಿ ವಾ ದುಃಖಂ ಸಃ ಯೋಗಿ ಪರಮೋ ಮತಮ್.

ಈ ವಾಕ್ಯವನ್ನಾತ ವಾಸುದೇವ ಸಾಮಗರನ್ನು ಕುರಿತಾಗಿಯೇ ಹೇಳಿದ್ದೇನೋ ಎನ್ನುವ ಅನುಮಾನ ಬರುತ್ತದೆ. ಇದಕ್ಕೆ ಕಾರಣ ವಾಸುದೇವ ಸಾಮಗರ ಪಾತ್ರ ನಿರ್ವಹಣೆಯ ಪರಿ.ಯಾವುದೇ ಪಾತ್ರವಿರಲಿ, ಅದರಲ್ಲಿ ತಲ್ಲೀನತೆ ಸಾಧಿಸಿ, ಅದರೊಡನೆ ಕೂಡಿ ಅಂದರೆ, ಯೋಗವನ್ನು ಸಾಧಿಸುತ್ತಾರೆ.
ಸಾಮಗರ ಪಾತ್ರ ನಿರ್ವಹಣೆಯ ರೀತಿಯೇ ಅವರನ್ನು ಇತರ ಪಾತ್ರಧಾರಿಗಳಿಗಿಂತ ಭಿನ್ನವಾಗಿಸುತ್ತದೆ. ಯಕ್ಷಗಾನವೂ ಅವರ ಪಾಲಿಗೊಂದು ಯೋಗವೇ ಸರಿ.

ಉದಾಹರಣೆಗೆ ಈಶ್ವರನ ಪಾತ್ರ ಮಾಡಿದಾಗ ಅವರು ಕೇವಲ ಈಶ್ವರನ ವ್ಯಕ್ತಿ ಚಿತ್ರಣ ಕೊಡುವುದಿಲ್ಲ. ಬದಲಾಗಿ ವ್ಯಕ್ತಿತ್ವದ ಅನಾವರಣ ಮಾಡುತ್ತಾರೆ. ಅವರ ಅರ್ಥಗಳನ್ನು ಕೇಳಿದರೆ, ನಮಗೆ ಇಷ್ಟು ದಿನ ಮೂಡದೆ ಇದ್ದ ಪ್ರಶ್ನೆಗಳು ಆ ಕ್ಷಣದಲ್ಲಿ ಮೂಡಿ ಉತ್ತರ ಪಡೆದುಕೊಂಡು ಕೇಳುಗರನ್ನು ಚಕಿತವಾಗಿಸುತ್ತದೆ. ಈಶನಿಗೆ ಕಡೆಯ ದಿಕ್ಕಿನ ಒಡೆತನ ಯಾಕೆ? ಕೈಲಾಸವನ್ನೇ ಆತನ ವಾಸಸ್ಥಾನವನ್ನಾಗಿ ಆರಿಸಿಕೊಂಡಿದ್ದೇಕೆ? ಕೈಲಾಸಕ್ಕೆ ರಜತಾದ್ರಿ ರಜತಪುರ ಎನ್ನುವ ಹೆಸರುಗಳೇಕೆ? ಆತ ವೃಷಭವನ್ನಡರಿದ್ದೇಕೆ ಹೀಗೆ ಅನೇಕ ಏಕೆಗಳನ್ನು ಒಟ್ಟಾಗಿ ಮೂಡಿಸಿ ಅದಕ್ಕೆ ಉತ್ತರ ಕೊಡುತ್ತಾರೆ. ಹಾಗಂತ, ಅವರು ಮನ್ಮಥನ ಪಾತ್ರ ಮಾಡಿದಾಗಲೂ ಕುಸುಮಾವತಿ ಮತ್ತು ರತಿಯ ಮೇಳಗಳ ಬಗ್ಗೆ ಈ ರೀತಿಯ ವ್ಯಾಖ್ಯಾನಗಳನ್ನು ಕೊಡುತ್ತಾರೆ.

ಅವರ ಬಗ್ಗೆ ಮಾತೊಂದಿದೆ. ವಾಸುದೇವ ಸಾಮಗರು ನಮ್ಮನ್ನೊಮ್ಮೆ ಹಿಮಾಲಯದ ತುದಿಗೆ ಕರೆದೊಯ್ದು ನಂತರ ಕೆಳಕ್ಕೆ ಕೆಡವಿ ಮತ್ತೆ ನಂತರ ತಾವು ಹಿಮಾಲಯದ ಎತ್ತರಕ್ಕೆ ಏರುತ್ತಾರೆ. ಆದರೆ ಪ್ರಪಾತದಲ್ಲಿದ್ದ ಪ್ರೇಕ್ಷಕರು ಅಲ್ಲಿಯೇ ಇರುತ್ತಾರೆ ಎಂದು. ನನಗನ್ನಿಸುವುದು ಹಾಗಲ್ಲ. ಅವರು ನಮಗೆ ಒಮ್ಮೆ ಹಿಮಾಲಯ ಸದೃಶ ಪ್ರತಿಭಾ ಚಿತ್ರಣವನ್ನು ಕೊಟ್ಟ ಬೆನ್ನಿನಲ್ಲಿ ಥಟ್ಟನೆ ನಮಗೆ ನಮ್ಮ ಸಾಮರ್ಥ್ಯದ ದರ್ಶನ ಮಾಡಿಸುತ್ತಾರೆ. ನನಗಿದು ಅರ್ಥವಾಗಿದ್ದು ಅವರ ದುರ್ವಾಸನ ಪಾತ್ರವನ್ನು ನೋಡಿದಾಗ.

ರಾಮ ನಿರ್ಯಾಣ ಪ್ರಸಂಗದ ದುರ್ವಾಸನಾಗಿ ಪ್ರವೇಶಿಸಿದ ಸಾಮಗರು ಮೊದಲು ಕೊಟ್ಟ ವ್ಯಾಖ್ಯಾನ ದುರ್ವಾಸ ಶಬ್ದದ ಬಗ್ಗೆ. ಕೆಲವರು ದುರ್ವಾಸನನ್ನು ದೂರ್ವಾಸ ಎಂದು ಕರೆಯುವುದರ ಬಗೆಗೆ ಆಕ್ಷೇಪಿಸುತ್ತಲೇ, ದುರ್ವಾಸನಿಗೆ ಆ ಹೆಸರು ಏಕೆ ಸೂಕ್ತ ಎನ್ನುವುದರ ವಿವರಣೆ ಕೊಟ್ಟರು. ದೇಹ ಎನ್ನುವ ಮಲಿನ ಪದಾರ್ಥವೇ ಬಟ್ಟೆಯಾದ್ದರಿಂದ ಆತ ದುರ್ವಾಸ ಎಂದರು. ನಂತರ ಮಾತು ಹೊರಳಿದ್ದು ಅನಸೂಯೆಯ ಕಡೆ. ಆಗ, ಅನಸೂಯೆಯ ಹೆಸರು ಅನುಸೂಯಾ ಆಗಿದ್ದು ಹೇಗೆ ಎಂದು ಕೂಡಾ ತಿಳಿಸಲು, ವ್ಯಂಗ್ಯ ಭರಿತ ಹಾಸ್ಯದಲ್ಲಿ, ಹರಿದಾಸ ಹರಿಕಥೆ ದಾಸ ಇಬ್ಬರ ನಡುವಿನ ವ್ಯತ್ಯಾಸ ತಿಳಿಸಿದರು. ಯಾವಾತ ಹರಿಯ ಭಕ್ತಿಯಲ್ಲಿ ಕೀರ್ತನೆಯಲ್ಲಿ ಕಳೆದುಹೋಗುತ್ತಾನೋ ಆತ ಹರಿದಾಸ. ಅದಲ್ಲದೆ ಕಥೆಯ ಕೊನೆಯಲ್ಲಿ ಸಿಗುವ ಕಾಸಿನ ಬಗೆಗೆ ಯೋಚಿಸುವವ ಹರಿಕಥೆ ದಾಸ.

ಮುಂದುವರೆದು ರಾಮನ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಹೋದರು. ರಾಮರಾಜ್ಯ ಎನ್ನುವ ಶಬ್ದವನ್ನು ವ್ಯಾಖ್ಯಾನಿಸುತ್ತಾ "ನಿಮಗೆ ರಂ ಎಂದರೇನು ಗೊತ್ತೇ" ಎಂದರು. ಸಭೆ ಪೂರ್ತಿ ನಗೆ. ಆದರೆ ಇಲ್ಲಿ ಸಾಮಗರು ನಮಗೆ ನಮ್ಮ ತಿಳಿವಳಿಕೆ ಮಟ್ಟವನ್ನು ತಿಳಿಸಿದರು. ರಾಮನಂಥಾ ವ್ಯಕ್ತಿತ್ವದ ಮೂಲವಾದ ರಂ ಧಾತುವಿನ ಬಗೆಗೆ ಹೇಳಿದರೆ, ಮತ್ತೊಂದು ರಂ ಬಗ್ಗೆ ಯೋಚಿಸುವುದು ನಮ್ಮ ತಿಳುವಳಿಕೆಯ ಕೊರತೆಯೇ ಸರಿ.

ಅದೇ ರೀತಿ ತ್ರಿಶಂಕು ಚರಿತ್ರೆಯ ವಿಶ್ವಾಮಿತ್ರನಾಗಿ ದೇವೇಂದ್ರನಲ್ಲಿ ಮಾತುಕತೆ ನಡೆಸುವ ಗಂಭೀರ ವಿಶ್ವಾಮಿತ್ರನಾಗಿ, ತಪಶ್ಚರಣೆ ಮಾಡುವವ ಇರಬೇಕಾದ ರೀತಿಯನ್ನು ಅನನ್ಯವಾಗಿ ವಿವರಿಸಿದ್ದರು.

ವಿಶ್ವಾಮಿತ್ರ ಮೇನಕೆ ಪ್ರಸಂಗದ ಮೇನಕೆಯಾಗಿ, ತಂದೆ ರಾಮದಾಸ ಸಾಮಗರ ವಿಶ್ವಾಮಿತ್ರನೊಡನೆ ನಡೆಸಿದ ಮಾತುಕತೆ ನಾನು ನನ್ನ ಜನ್ಮಕ್ಕೆ ಮರೆಯುವುದಿಲ್ಲ.

ರಂಗಸ್ಥಳದ ಮೇಲೆ ಮಾತು ಹೊರಡದ ಎಷ್ಟೋ ಕಲಾವಿದರನ್ನು ಉತ್ತಮ ಮಾತುಗಾರರಾಗಿಸಿದ್ದಾರೆ  ಸಾಮಗರು.

ಸಾಮಗರು, ತೆಂಕು ಬಡಗಿನ ಸವ್ಯಸಾಚಿ ಮಾತ್ರವಲ್ಲ, ಆಟ ಕೂಟಗಳ ಸವ್ಯಸಾಚಿ ಕೂಡಾ. ಅವರು ಯಕ್ಷಗಾನದ ಹೆಜ್ಜೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲವಂತೆ. ಆದರೆ ರಂಗಸ್ಥಳದ ಮೇಲೆ ಬಂದಾಗ ಕುಣಿತಕ್ಕೆಂದೂ ಮೋಸ ಮಾಡಿದ್ದಿಲ್ಲ. ಮತ್ತೆ ಆ ರೀತಿ ಕಲಿಯುವುದು ಸುಲಭ ಸಾಧ್ಯವೂ ಅಲ್ಲ.

ಅನೇಕ ವರ್ಷಗಳ  ಮೇಳದಲ್ಲಿನ ಕಲಾಸೇವೆಯ ನಂತರ ಸಾಮಗರು ಸಂಯಮಂ ಎನ್ನುವ ಹೆಸರಿನ ತಾಳಮದ್ದಳೆ ಸಂಘಟನೆಯನ್ನು ಪ್ರಾರಂಭಿಸಿ ನಡೆಸುತ್ತಿದ್ದಾರೆ. ತನ್ನ ಸಾಂಪ್ರದಾಯಿಕ ಪ್ರದೇಶಗಳಾಚೆಗೆ ಯಕ್ಷಗಾನವನ್ನು ಕೊಂಡೊಯ್ಯಲು ಅವರು ಈ ಮೂಲಕ ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಾರೆ.

ವಾಸುದೇವ ಸಾಮಗ ಈ ಹೆಸರಿನಲ್ಲಿನ ಒಂದೊಂದು ಅಕ್ಷರವೂ ಅನ್ವರ್ಥವಾದಂತೆ ನನಗನ್ನಿಸುತ್ತದೆ. ವಸು ಎಂದರೆ ಸಂಪತ್ತು. ವಾಸುದೇವ ಸಾಮಗರಲ್ಲಿ ಜ್ಞಾನ ಸಂಪತ್ತು ಇರುವ ಪರಿಗೆ ಆ ಸಂಪತ್ತಿಗವರು ದೇವನೇ ಸರಿ. ಶ್ರೀಕೃಷ್ಣ ಹೇಳಿದ್ದಾನೆ, ವೇದಗಳಲ್ಲಿ ಆತ ಸಾಮವಂತೆ. ಸಾಮಗರು ಕೃಷ್ಣನ ಪಾತ್ರ ನಿರ್ವಹಿಸುವ ರೀತಿಯೇ ಇದನ್ನು ಸಾರುತ್ತದೆ.

ವಾಸುದೇವ ಸಾಮಗರು ಎಪ್ಪತ್ತು ವರ್ಷಗಳನ್ನು ಕಳೆದಾಯಿತಂತೆ. ಆದರೆ ಅವರ ಲವಲವಿಕೆ ಉತ್ಸಾಹ ಮತ್ತು ಸಾಧನೆಯ ಹಾದಿಯ ಪಯಣ ಅವರನ್ನು ಇನ್ನೂ ಇಪ್ಪತ್ತರ ತರುಣ ಎನ್ನುವಂತೆ ಇಟ್ಟಿದೆ.

ಭಗವಂತ ಸಾಮಗರ ಮುಖೇನ ಇನ್ನಷ್ಟು ಪಾತ್ರಗಳ ಚಿತ್ರಣವನ್ನು ಕೊಡಿಸಿ ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೆ ಪಾತ್ರ  ಪರಂಪರೆ ಹಾಗೂ ಪುರಾಣಗಳ  ಕುರಿತು ಆಸಕ್ತಿ ಮತ್ತು ಅರಿವು ಮೂಡಿಸಲಿ ಎಂದು ಹಾರೈಸೋಣ.