Thursday, March 30, 2023

ಒಂದು ವ್ಯಭಿಚಾರಿಣಿಯ ಆರೋಪ

ಒಂದೂರಲ್ಲಿ ಒಬ್ಬಳು ಸೂಳೆ ಇದ್ದಳು. ಆದರೆ ಲೋಕಕ್ಕೆ ಅಂಜಿ ಸೂಳೆಗಾರಿಕೆಯನ್ನು ಗುಟ್ಟಾಗಿ ಮಾಡುತ್ತಿದ್ದಳು. ಅವಳು ವಯಸ್ಸು ಮೀರುತ್ತಿದ್ದರೂ ಮದುವೆಯಾಗದ್ದನ್ನು ನೋಡಿ ಜನ ಅನುಮಾನಿಸ ತೊಡಗಿದರು. ಕೊನೆಗೆ ಯಾವುದೋ ಒಬ್ಬನನ್ನು ಮದುವೆಯಾದಳು. ಎರಡೋ ಮೂರೋ ಸಂತಾನವೂ ಆಯ್ತು.

ತಾನು ಮಹಾ ಗರತಿ ಅಂತ ತೋರಿಸೋದಕ್ಕೆ ಯಾವ್ಯಾವುದೋ ಧರ್ಮಶಾಸ್ತ್ರದ ಪುಸ್ತಕ ಓದಿ ಇತರ ಹೆಂಗಸರನ್ನು ನಿಂದಿಸುತ್ತಿದ್ದಳು. ಅವಳ ಗಂಡ ಇದಕ್ಕೆಲ್ಲ ತಕರಾರು ಮಾಡಲೇ ಇಲ್ಲ. 

ಅವಳ ಆಪ್ತ ಗಿರಾಕಿಗಳಲ್ಲಿ ಊರ ದೊಡ್ಡ ಮನುಷ್ಯರೂ ಕೆಲವರಿದ್ದರು. 

ಇಂತಿಪ್ಪ ಹೊತ್ತಿನಲ್ಲಿ ಊರಿಗೆ ವೈದ್ಯರೊಬ್ಬರು ಬಂದು ನೆಲೆಯಾದರು. ತಮ್ಮ ಕೈಗುಣದಿಂದ ವೈದ್ಯರು ಒಳ್ಳೆ ಹೆಸರೂ ಸಂಪಾದಿಸಿದರು ಊರ ಗಣ್ಯರಲ್ಲಿ ಒಬ್ಬರು ಎಂದೂ ಎನ್ನಿಸಿಕೊಂಡರು.

ಆದರೆ ಸಾತ್ವಿಕರಾಗಿದ್ದ ವೈದ್ಯರು ಒಂದು ದಿನವೂ ಸೂಳೆಯ ಮನೆ ಕಡೆ ಗುಟ್ಟಾಗಿ ಸುಳಿಯಲಿಲ್ಲ. ತನ್ನ ಚೆಲುವಿಗೆ ಇದು ಅವಮಾನ ಎಂದು ಭಾವಿಸಿದ ಆ ಸೂಳೆ ವೈದ್ಯರ ಹೆಂಡತಿಗೆ ವ್ಯಭಿಚಾರಿಣಿಯ ಪಟ್ಟ ಕಟ್ಟಿದಳು.

ವೈದ್ಯರ ಹೆಂಡತಿ ಜೊತೆ ಹಾದರ ಮಾಡಿದ್ದು ತನ್ನ ಗಂಡನೇ ಅಂದಳು. ಪಂಚಾಯ್ತಿಯನ್ನೂ ಸೇರಿಸಿದಳು. ಅವಳ ಗುಟ್ಟಿನ ಗಿರಾಕಿಗಳೇ ಪಂಚರು.

ವೈದ್ಯರು ಇದನ್ನೆಲ್ಲ ಕೇಳಿ ನಗತೊಡಗಿದರು. ಪಂಚರು ಸಿಟ್ಟಾಗಿ ನಕ್ಕಿದ್ದನ್ನು ಆಕ್ಷೇಪಿಸಿದರು.

ವೈದ್ಯರು ಹೇಳಿದ್ದು ಇಷ್ಟೇ. "ಸಮರ್ಥ ಯೌವ್ವನ ಭರಿತ ಪುರುಷ ನಾನಿರುವಾಗ ನನ್ನ ಹೆಂಡತಿ ಆ ನಪುಂಸಕನ ಜೊತೆ ಹಾದರ ಮಾಡಿದ್ದಾಳೆ ಎಂದರೆ ನಗದೆ ಇನ್ನೇನು ಮಾಡಲಿ".

ಈಗ ಎಲ್ಲರಿಗೂ ಪೀಕಲಾಟ. ವೈದ್ಯರು ನಪುಂಸಕ ಎಂದ ಮೇಲೆ ಅದು ಸತ್ಯವೇ. ಅದನ್ನು ಪ್ರಶ್ನಿಸಿದರೆ ಸೂಳೆಯ ಗಂಡನ ಗಂಡಸುತನ ಸಾಬೀತು ಮಾಡಬೇಕು. ಅದು ಸಾಧ್ಯವಿಲ್ಲ. ಹಾಗಂತ ಸುಮ್ಮನಿದ್ದರೆ ಸೂಳೆ ಹಡೆದ ಮಕ್ಕಳು ಯಾರು ಎನ್ನುವ ಪ್ರಶ್ನೆ. ಎಲ್ಲಾದರೂ ತಮ್ಮನ್ನು ತೋರಿಸಿದರೆ ಎನ್ನುವ ಅಳುಕು ಎಲ್ಲಾ ಪಂಚರಿಗೆ. ತನ್ನ ಗುಟ್ಟು ರಟ್ಟಾಗುವ ಆತಂಕ ಸೂಳೆಗೆ.

ಇಷ್ಟು ದಿವಸ ಏನೇನೋ ಪುಂಗಿ ಭಾರತದ ಆಡಳಿತ ವ್ಯವಸ್ಥೆ ಸರಿ ಇಲ್ಲ, ಸಂವಿಧಾನಕ್ಕೆ ಅಪಾಯ ಎಂದೆಲ್ಲ ಏನೇನೋ ಎಂದವರ ಪಾಡು ಕೂಡಾ ಹೀಗೆಯೇ ಆಗಿದೆ.

ಸಂವಿಧಾನಾತ್ಮಕವಾಗಿ, ಶಾಸನಕ್ಕೆ ತಕ್ಕಂತೆ ಸಾಕ್ಷ್ಯಾಧಾರ ಪರಿಶೀಲಿಸಿ ಕೊಟ್ಟ ತೀರ್ಪನ್ನು ಅನುಸರಿಸಿ ಅನರ್ಹತೆಯ ನೋಟೀಸ್ ಕೊಟ್ಟಿದ್ದಾರೆ. ಇಲ್ಲಿ ನೋಟೀಸ್ ಒಂದು ಶಿಷ್ಠಾಚಾರ ಅಷ್ಟೇ. 

ತೀರ್ಪು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ. ಮಾಡಿದ್ದನ್ನು ಸಮರ್ಥಿಸಿದರೆ ಜಾತ್ಯತೀತರು ಜಾತಿ ನಿಂದನೆ ಸಮರ್ಥಿಸಿದ ಹಾಗೆ. ಏನು ಮಾಡೋದು? ಪಾಪ. ಹೀಗಾಗಬಾರದಿತ್ತು.

#Disqualification 
#disqualified

Tuesday, March 28, 2023

ಎಂತ ಹರ್ಕಂತ ಕಾಂತೆ

ಪರಶುರಾಮ ಭಟ್ಟರು- ಹೀಗೆ ಹೇಳಿದರೆ ನಮ್ಮೂರಲ್ಲಿ ಯಾರಿಗೂ ತಿಳಿಯುವುದಿಲ್ಲ. ಒಂದು ಕಾಲದಲ್ಲಿ ಅಂಗಡಿ ಭಟ್ಟರು ಎಂದರೆ ಎಲ್ಲಾರಿಗೂ ಪರಿಚಯ ಸಿಗುತ್ತಿತ್ತು. ಆದರೆ ಈಗ ಅವರಿಗೆ ಬ್ಲೇಡು ಭಟ್ಟರು ಅಂತಲೇ ಕರೆಯುವುದು. ಆಶ್ಚರ್ಯದ ಸಂಗತಿ ಎಂದರೆ ಭಟ್ಟರು ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಿರುವುದು. ಭಟ್ಟರ ಅತೀವ ಹಾಸ್ಯಪ್ರಜ್ಞೆಯೇ ಭಟ್ಟರಿಗೆ ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಲು ಸಾಧ್ಯ ಮಾಡಿರಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಆ ಹೆಸರು ಬೀಳುವ ಮುನ್ನಿನ ಘಟನೆ ಏನಿದ್ದಿರಬಹುದು ಎನ್ನುವ ಕುತೂಹಲ ನನ್ನ ತಲೆಯೊಳಗೆ ಹೊಕ್ಕು ಹುಳುವಾಗಿ ಹಾವಾಗಿ ಕಾಡತೊಡಗಿತ್ತು. ಭಟ್ಟರಿಗೀಗ ಬಹುಶಃ ತೊಂಭತ್ತರ ಹರೆಯ. ಅವರಲ್ಲಿಯೇ ಕೇಳೋಣ ಅಂತ ನಿಶ್ಚಯಿಸಿ ಒಮ್ಮೆ ಅವರ ಬಳಿಯೇ ಕೇಳಿದೆ. ವಿಶೇಷ ಎಂದರೆ ಈ ಕತೆ ನಮ್ಮ ಶುಕ್ರನ ಕಡೆಗೇ ಹೋಗಿದ್ದು.

ಬ್ಲೇಡು ಭಟ್ಟರೇ ಹೇಳಿದ ಕತೆ ಇದು.

ಘಟ್ಟದ ಕೆಳಗಿನ ಭಟ್ಟರ ಅಪ್ಪಯ್ಯ ಕರೂರು ಸೀಮೆಗೆ ಮನೆಯಳಿಯಾನಾಗಿ ಬಂದರಂತೆ. ಮಾವನ ಮನೆಯ ತೋಟ ಗದ್ದೆ ನೋಡಿಕೊಳ್ಳುತ್ತಾ ಇದ್ದ ಭಟ್ಟರ ಅಪ್ಪಯ್ಯನಿಗೆ ಭಟ್ಟರೊಂದೇ ಮನೆ ಸಂತಾನವಂತೆ. ಭಟ್ಟರ ಬೆನ್ನಿಗೆ ಬಿದ್ದದ್ದೆಲ್ಲಾ  ಎಂಟು ಬೇರೆಯವರ ಮನೆಗೆ ಹುಟ್ಟಿದ್ದಂತೆ. 

ಏನು ಅಂತ ನನಗೂ ಗೊತ್ತಾಗಲಿಲ್ಲ. ಬೊಚ್ಚು ಬಾಯಲ್ಲಿದ್ದ ಕವಳ ತುಪ್ಪಿ ಹೇಳಿದರು ಭಟ್ಟರು. "ಆನೊಬ್ಬನೇ ಗಂಡು. ಉಳಿದಿದ್ದೆಲ್ಲಾ ಹೆಣ್ಣು".

ಮುಂದುವರೆದು ಭಟ್ಟರು ಮತ್ತೆ ಕತೆ ಹೇಳತೊಡಗಿದರು. 
"ಶರಾವತಿ ನದಿಗೆ ಹಿರೇಭಾಸ್ಕರ ಡ್ಯಾಮ್ ಕಟ್ಟಿದಾಗ ಯಂಗಳದ್ದು ಎಲ್ಲಾ ಮುಳುಗಿ ಹೋತು. ಪರಿಹಾರಕ್ಕೆ ಅಂತ ಅಪ್ಪಯ್ಯ ಜಮೀನು ತಗಳದೆ ದುಡ್ಡು ತಗಂಡ. ಅವಂಗೆ 7 ಹೆಣ್ಣು ಮಕ್ಕಳನ್ನು ದಡ ಹತ್ತಿಸದೇ ದೊಡ್ಡ ತಲೆಬಿಸಿಯಾಗಿತ್ತು."

ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡು ಭಟ್ಟರು ಮತ್ತೆ ನಗುತ್ತಾ ಕತೆ ಮುಂದುವರೆಸಿದರು. "ಆಗ ಇಲ್ಲಿ ಯನ್ನ ಚಿಕ್ಕಯ್ಯ ಇದ್ದಿದ್ದ. ಅವ ಶ್ಯಾನುಭೋಗ.ಅದಕ್ಕೇ ಯಂಗ ಈ ಊರಿಗೆ ಬಂದ್ಯ. ದೇವರಂಥಾ ಜನ ಚಿಕ್ಕಯ್ಯ. ಅಪ್ಪಯ್ಯ ಅಮ್ಮನ ಕಷ್ಟ ನೋಡಿ ಯಂಗಕ್ಕೆ ಎರಡೆಕರೆ ಗದ್ದೆ ದರಖಾಸ್ತು ಮಂಜೂರು ಮಾಡಿಸಿ ಕೊಟ್ಟ. ಅವಂಗೆ ಗಂಡು ಮಕ್ಕಳಿರ್ಲೆ. ಅವನ ಒಂದೆಕರೆ ತೋಟ ಹೊಸತಾಗಿತ್ತು. ಜೀವನ ಮಾಡಕ್ಕಲ, ಅದಕ್ಕೇ ಆನು ಮಾಣಿ ಇದ್ದಿದ್ನಲ, ಯನ್ನ ಹತ್ರ ಇದೇ ಊರಾಗೆ ಒಂದು ದಿನಸಿ ಅಂಗಡಿ ಹಾಕಿಸಿ ಕೊಟ್ಟ."

"ಮುಳುಗಡೆ ಪರಿಹಾರ ಪೂರ್ತಿ ತಂಗಿದಿಕ್ಕಳ ಮದುವೆ ಮಾಡಕ್ಕೆ ಸಮಾ ಆತು. ಚಿಕ್ಕಯ್ಯನ ತೋಟದ ಉತ್ಪತ್ತಿ ಅವನ ಮೂರು ಹೆಣ್ಣು ಮಕ್ಕಳ ಮದುವೆಗೆ ಸಮ ಆತು. ಅಂಗಡಿ ದುಡ್ಡಲ್ಲಿ ಜೀವನ ಯಂಗಳದ್ದು."

"ಅಷ್ಟೊತ್ತಿಗೆ ಯಂಗೆ ಓ ಅಲ್ಲಿ ಕೂತಿದ್ದ ನೋಡು, ನಿಂಗಳ ಅಂಬಮ್ಮೊಮ್ಮ ಅವಳನ್ನ ತೋರ್ಶಿದ. ಆನು ಕಟ್ಕಬುಟಿ. ಬಿಡಕ್ಕೆ ಬತ್ತನಾ. ಅಂಥಾ ಚಂದಿದ್ದ ಅವಳು ಆಗ. ಈಗಲೂ ಚಂದವೇ, ಯನ್ನ ಕೈಯಾಗೆ ಹರಿತಲ್ಲೆ ಅಷ್ಟೇ."ಎನ್ನುತ್ತಾ ಮತ್ತೆ ಕವಳ ತುಪ್ಪಿ ಕತೆ ಮುಂದುವರೆಸಿದರು.

"ಹಳ್ಳಿ ಬದಿ ಅಂಗಡಿ ಅಂದರೆ ಕಡದ್ದೆ ವ್ಯವಹಾರ. ನಂಬಿಕೆ ಮೇಲೆ ಎಲ್ಲರೂ ಕೊಡ್ತ. ಆದರೆ ಈ ಶುಕ್ರ ಇದ್ದ ನೋಡು, ಅವ ನಿಂಗೊತ್ತಿದ್ದಲ ಎಂತೋ ಫೇಸ್ ಬುಕ್ಕಾ ಎಂತ ಸುಡುಗಾಡ, ಅದರಾಗೆ ಬರದ್ಯೆಡಲ ಅವನದು ವೇಶದ್ದು ಮತ್ತೆಂತದೋ ಕತೆ ಎಲ್ಲ, ಅವ ಯನ್ನ ಹತ್ರ ಅಂಗಡಿಲಿ ಒಂದು ಮೂರು ಸಾವಿರ ಕಡ ಮಾಡಿದ.ಆನೂ ಕೊಡ್ತ ಮಾಡ್ಕಂಡು ಸುಮ್ಮನಿದ್ದಿ. ಆದರೆ ಇವ ಕಿತಾಪತಿ ಮಾಡದ?"

"ಎಂತ ಮಾಡಿದ ಅಜಾ" ಅಂದೆ ನಾನು.

"ಹೇಳ್ತಾ ತಿರುಗಿದ್ನಡ. ಅಂಗಡಿ ಭಟ್ಟನ ಹತ್ರ ಆರು ಸಾವಿರ ಕಡ ಮಾಡೀದೆ. ಕೊಡೂದಿಲ್ಲ. ಕೇಂಡ್ರೆ ಇತ್ತಲ. ಬಾಂಬಿಯಿಂದ ಜನ ಬತ್ರ್. ಭಟ್ರ್ ಎಂತ ಸಾಂ* ಹರ್ಕಾಂತ್ರ್ ಕಾಂತೆ. ಹಿಂಗೆ ಊರೆಲ್ಲ ಹೇಳ್ತಾ ತಿರುಗಿದ್ನಡ. 

"ಆನೂ ನೋಡ ಅಷ್ಟು ನೋಡಿದಿ. ಇವಂದು ಕಮ್ಮಿ ಆಪ ಲಕ್ಷಣವೇ ಇಲ್ಲೇ. ಬತ್ತ ಎಲ್ಲಿ ಹೋಗ್ತಾ ಅಂತ ಕಾಯ್ತಾ ಇದ್ದಿ. ಅಷ್ಟೊತ್ತಿಗೆ ದೀಪಾವಳಿ ಬಂತು. ಇವನೂ ಬಂದ ಸಾಮಾನು ತಗ ಹೋಗಕ್ಕೆ"

"ಎಲ್ಲಾ ಸಾಮಾನೂ ಕಟ್ಟಿ ಕೊಟ್ಟಿ. ಆಮೇಲೆ ಬ್ಲೇಡ್ ಸುಮ್ನೆ ಕೈಯಾಗೆ ಹಿಡಕಂಡು ದುಡ್ಡು ಕೋಡಾ ಶುಕ್ರ. ಹಳೆದೂ ಎಲ್ಲ ಸೇರಿಸಿ. ಇಲ್ಲದೆ ಹೋದ್ರೆ, ಇಲ್ನೋಡು ಕೈಯಾಗೆ ಎಂತಿದೆ ನೋಡು" ಅಂದಿ.

"ಶುಕ್ರ ಜೋರಾಗಿಬುಡಕ್ಕ. "ಎಂತ *ಟು ಹರ್ಕಂತ್ರಿ ಕಾಂತೆ" ಅನ್ನ ತಂಕ ಮಾತಾಡಿದ. ಆನು ಅವನ್ನ ಅಂಗಡಿ ಒಳಗೆ ದೂಡಿ ಬಾಗಿಲು ಹಾಕಿದಿ. ಬ್ಲೇಡಾಗೆ ಅವನ ಚಡ್ಡಿ ಶಿಗದಿ. ಹೋಗು ತಮಾ ಅಂದಿ"

"ಶುಕ್ರ ಅವಾಗ ಪಕ್ಕಾದ. ಇಷ್ಟು ದಿನ ಹೇಳಿದ್ದು ಹೊರಗೆ ಹೇಳ ಹಾಂಗೆ ಇಲ್ಲೇ. ನಾನು ಬ್ಲೇಡ್ ಹಿಡಕಂಡು ಅವನ್ನ ಒಳಗೆ ಕೂಡಿದ್ದಿ. ಹೊರಗೆ ಕಳಿಸಕ್ಕಿದ್ದರೆ ಅವನ ಚಡ್ಡಿ ಶಿಗದ್ದಿ. ಹಳೆ ಮಾತೇ ಆಡಿರೆ ಯಾರೂ ನಂಬದಿಲ್ಲೆ. ಹೊಸ ಮಾತಾಡಕ್ಕೆ ಧೈರ್ಯ ಇಲ್ಲೆ."

"ಮಕದ ಮೇಲೆ ಟವಲ್ ಹಾಕ್ಯಂಡು ನಿಮ್ಮನೆ ಶಣ್ಣಜ್ಜನ ಹತ್ರ ಹೋಗಿ ದುಡ್ಡು ಇಸ್ಕ ಬಂದು ಕೊಟ್ಟ. ನಿಮ್ಮನೆ ಶಣ್ಣಜ್ಜ ಒಂದಿನ ಎಲ್ಲಾ ಕೂತಾಗ ಎಂತಾತು ಅಂತ ವಿಚಾರ ಕೇಳಿದ. ಆನು ಸತ್ಯ ಇದ್ದಿದ್ದಷ್ಟೂ ಟ ಠ ಡ ಢ ಣ ಹೇಳಿದಿ. ಆಗ ನಿಮ್ಮನೆ ಶಣ್ಣಜ್ಜ, ಓ ಒಳ್ಳೆ ಬ್ಲೇಡ್ ಎಳದ್ದೆ. ಇಲ್ಲದೇ ಇದ್ದರೆ ನಿನ್ನ ದುಡ್ಡು ಮರ್ಯಾದೆ ಎರಡೂ ಗೋವಿಂದ ಆಗ್ತಿತ್ತು ಅಂದ ಅವತ್ತಿಂದ ಆನು ಬ್ಲೇಡ್ ಭಟ್ಟರು ಹೇ ಹೇ ಹೇ." ಹೀಗೆಂದು ಕತೆ ಮುಗಿಸಿದರು ಅಜ್ಜಯ್ಯ.

ಕ್ಷಮೆ ಬಗ್ಗೆ ಕೇಳಿದಾಗ ವೀರಾಧಿವೀರನೊಬ್ಬನನ್ನು ಅಣಕಿಸಿ,ಕೊನೆಗೆ ಕಂಪ್ಲೇಂಟ್ ಎಂದಕೂಡಲೇ ಹೇಂಬೇಡಿಯಂತೆ ಗೋಡೆ ತೊಳೆದು ತಿಕ್ಕಿದವನೊಬ್ಬನ ಕತೆ ಕೇಳಿ ಈ ಘಟನೆ ನೆನಪಾಯಿತು.

#ಶುಕ್ರ