Monday, September 24, 2012

ಮಳೆಗಾಲ

ಮನುಷ್ಯನ ಬದುಕು ಎಷ್ಟು ವಿಚಿತ್ರ. ಯಾವುದಾದ್ದ್ರೊಂದು ವಸ್ತು ಅಥವಾ ವಿಚಾರ ಕೈಗೆ ಸಿಗುತ್ತಿರುವಾಗ ಅದರ ಬಗ್ಗೆ ಎಷ್ಟು ಕಡಿಮೆ ಗಮನ ಹರಿಸುತ್ತೇವೆ ನಾವು. ಅದೇ ಒಂದು ವಸ್ತು ಅಥವಾ ವಿಷಯ ಅಥವಾ ವ್ಯಕ್ತಿ ನಮ್ಮಿಂದ ದೂರವಾದಾಗ ಅವನಿಗಾಗಿ ನಾವೆಷ್ಟು ಹಂಬಲಿಸುತ್ತೇವೆ. ಕೆಲವು ಸಾರಿ ಕಳೆದು ಹೋದ ಆ ವಿಚಾರ ವಿಷಯಗಳ ಮುಂದೆ ಲೋಕದ ಇನ್ನಿತರ ಪ್ರಮುಖ ವಿಷಯಗಳೆಲ್ಲ ಗೌಣವಾಗಿಬಿಡುತ್ತದೆ. ದೇವರೇ ಮಾಡಿ ಹಾಕಿದ ಸ್ವರ್ಗ ಅಲ್ಲಿ ಹರಿದಾಡುವ ಸುರನಡಿಯೋ ಎಂಬಂತೆ ಬರುವ ಮಳೆಗಾಲ ಕೂಡ ಇದಕ್ಕೆ ಹೊರತಲ್ಲ. ನಾನು ಬದುಕಿನಲ್ಲಿ ಕಳೆದದ್ದು ಬಹಳ ಕಡಿಮೆ ವರ್ಷಗಳನ್ನಾದರೂ ಕಳೆದುಕೊಂಡಿದ್ದು ತುಸು ಹೆಚ್ಚು ಎಂದೇ ಹೇಳಬೇಕು. ಆದರೆ ಆ ದೇವರು ನನಗೆ ಕೆಲವು ವಿಷಯಗಳಲ್ಲಿ ಒಳ್ಳೆಯ ಜ್ಞಾಪಕ ಶಕ್ತಿ ಕೊಟ್ಟು ಅಂಥ ಘಟನೆಗಳ ಸವಿ ನೆನಪಿನ ಬುತ್ತಿಯ ಬುತ್ತಿ ಸದಾ ನೆತ್ತಿಯ ಮೇಲೆ ಇರುವಂತೆ ಮಾಡಿದ್ದಾನೆ ಅದಕ್ಕೆ ನಾನು ಆತನಿಗೆ ಋಣಿ. 

ಈಗ ಬರುತ್ತಿರುವ ಅಂಥದ್ದೇ ಇನ್ನೊಂದು ನೆನಪು ಊರಿನ ಮಳೆಗಾಲದ್ದು. ಚಿಕ್ಕ ವಯಸ್ಸಿನಲ್ಲಿ ಆ ಮಳೆಗಾಲದ ಬದುಕು ಅದೂ ಆ ಮಲೆನಾಡಿನಲ್ಲಿ ಅದೆಷ್ಟು ಚಂದವಿತ್ತು.ಶಾಲೆ ಶುರುವಾಗುವ ಸಮಯಕ್ಕೆ ಸರಿಯಾಗಿ ಮಳೆಗಾಲ ಪ್ರಾರಂಭವಾಗುತ್ತಿತ್ತು. ಆ ಮಣ್ಣಿನ ವಾಸನೆ ಅದೆಷ್ಟು ಮಧುರ ಅದೆಷ್ಟು ಹಿತಕರ. ಅಂತಹ ಬಿರುಮಳೆಯಲ್ಲಿ ಇಲ್ಲದಿದ್ದರೆ ಜಿಮರು ಮಳೆಯಲ್ಲಿ ಹುಡುಗರೆಲ್ಲ ಒಟ್ಟಾಗಿ ಶಾಲೆಗೇ ಹೋಗುತ್ತಿದ್ದೆವು. ಎಲ್ಲರ ಕೈನಲ್ಲೂ ಒಂದೊಂದು ಕೊಡೆ. ಎಲ್ಲರ ಕೊಡೆಯ ಮೇಲೂ ಅವರ ಹೆಸರು ಅಥವಾ ಇನಿಷಿಯಲ್ಲು. ಅದನ್ನೂ ಕೂಡ ಜಂಭದಿಂದ ತೋರಿಸುತ್ತ ಓಡಾಡುತ್ತಿದ್ದವರು ನಾವು. ಮನೆಯಲ್ಲಿ ದೊಡ್ದವರೆನೋ ಕೊಡೆ ಕಳೆದುಕೊಂಡು ಮಕ್ಕಳು ಮಳೆಯಲ್ಲಿ ನೆನೆದಾಡುವುದು ಬೇಡ ಅಂತ ಬರೆದು ಕೊಡುತ್ತಿದ್ದರು. ಈ ಕೊಡೆ ನಮಗಾದರೂ ಯಾಕೆ? ಬೇರೆ ಹುಡುಗರ ಹತ್ತಿರ ಜಂಭ ಕೊಚ್ಚುವುದಕ್ಕೆ. ಮಳೆಯಲ್ಲಿ ಹರಿದಾಡುವ ನೀರಿಗೆ ಅಲ್ಲೇ ಇದ್ದ ಕೆಸರನ್ನು ಕಾಲಿಂದ ಒಟ್ಟುಮಾಡಿ ಕಟ್ಟು ಕಟ್ಟುವ ಸಮಯಕ್ಕೆ ಕೊಡೆ ಒಂದು ಭಾರವಾದ ವಸ್ತು. ಮಳೆಗಾಲದಲ್ಲಿ ಬಿಡುವ ಹನ್ನುಗಳದ ಅಂಕೋಲೆ ಹಣ್ಣು ತೊಗರು ರುಚಿಯ ಕುನ್ನೆರಳ ಹಣ್ಣು ತಿನ್ನುವಾಗ ಇದೆ ಕೊಡೆ ನಮ್ಮ ಆಪ್ತ ಮಿತ್ರ. ಏಕೆಂದರೆ ಅದಕ್ಕೆ ಅಲ್ಲಿ ದೋಟಿಯ ಪಾತ್ರ. 
ಹಾಂ! ಮಳೆಗಾಲದ ನಿಜವಾದ ಮಜಾ ಇರುತ್ತಿದ್ದದ್ದೆ ಈ ಹಣ್ಣುಗಳನ್ನು ತಿನ್ನುವುದರಲ್ಲಿ ಅಲ್ಲವೇ. ಇದಕ್ಕಿಂತ ಹೆಚ್ಚಿನ ಮಜಾ ಕೊಡುತ್ತಿದ್ದದ್ದು ಅನೇಕ ರುಚಿಗಳಲ್ಲಿ ಸಿಗುತ್ತಿದ್ದ ಸಳ್ಳೆ ಹಣ್ಣಿನಲ್ಲಿ.ಸಿಹಿ ಕಹಿ ಒಗರು ಹುಳಿ ಹೀಗೆ ಎಲ್ಲ ರುಚಿಗಳಿಂದ ಕೂಡಿರುತ್ತಿತ್ತು  ಈ ಹಣ್ಣು. ಇದನ್ನು ತಿನ್ನುವಾಗಲೂ ಕೊಡೆ ಮಿತ್ರನೇ. ಇಷ್ಟೆಲ್ಲಾ ಆದ ಮೇಲೆ ಮೈ ವದ್ದೆ ಮಾಡಿಕೊಂಡು ಮನೆಗೆ ಹೋದರೆ ಹೊರಗಡೆ ಇರದಿದ್ದ ಗುಡುಗು ಸಿಡಿಲು ಮಿಂಚುಗಳ ಅಬ್ಬರ ಮನೆಯಲ್ಲಿ. ಅಪ್ಪ ಅಮ್ಮನ ಬಾಯಲ್ಲಿ ವಿಶ್ವ ರೂಪದ ದರ್ಶನವೂ ಆಗುತ್ತಿತ್ತು. ಇದಕ್ಕೆ ಸಿಟ್ಟು ಮಾಡಿಕೊಂಡು ಮತ್ತೆ ಮಳೆಯಲ್ಲಿ ನೆನೆದಾಟ. ಆ ಮೇಲೆ ಜ್ಞಾನ ವೃಕ್ಷದ ಬೇರು ಎನ್ನಿಸಿಕೊಂಡ ಬರಲಿನ ದರುಶನ. 
ಇಷ್ಟೆಲ್ಲಾ ಆದರೂ ನಾವ್ಯಾರೂ ಮಳೆಯಲ್ಲಿ ನೆನೆಯುವ (ಕೆಟ್ಟ) ಅಭ್ಯಾಸ ಬಿಟ್ಟವರಲ್ಲ. ಆಗ ಅಮ್ಮನೋ ಅಜ್ಜಿಯೋ ಅಥವಾ ಊರಲೀ ಬೇರೆ ಯರದರೋ ಹೇಳುತ್ತಿದ್ದದ್ದು "ನೀರಾಡಿರೆ ಕೊಕ್ಕೆ ಹುಳ ಮೈ ಒಳಗೆ ಹೋಗಿ ಹುಣ್ಣು ಮಾಡ್ತು. ಕೊನಿಗೆ ಡಾಕ್ಟ್ರು ಹೊಟ್ಟೆ ಕೊಯ್ತ ನೋಡು. " ಅಂತ ಹೆದರಿಸುತ್ತಿದ್ದದ್ದು ಎಷ್ಟು ಚನ್ನ ಅಲ್ಲವೇ?
ಇದೇ ಮಳೆಗಾಲದಲ್ಲಿ ತಲೆ ತುಂಬಾ ಹೇನು. ಅಮ್ಮನ ತೊಡೆ ಮೇಲೆ ಮಲಗಿ ಆ ಹೇನು ತೆಗೆಸಿ ಕೊಳ್ಳುವುದರಲ್ಲಿ ಅದೆಂಥ ಆನಂದ ಇತ್ತು?
ಮಳೆಗಾಲ ನಮ್ಮಂಥ ತಿಂಡಿ ಪೋತರಿಗಂತೂ ಹೇಳಿ ಮಾಡಿಸಿದ ಕಾಲವಾಗಿತ್ತು. ಹಲಸಿನ ಕಾಯಿಯ ಚಿಪ್ಸ್ ಹಪ್ಪಳ, ಬಾಲೆಕಾಯಿಯ ಚಿಪ್ಸ್ ಹಪ್ಪಳ ಮತ್ತೆ ಕಳಲೆ..... ಆಹಾ ಎಂಥ ರುಚಿಯಾದ ಪದಾರ್ಥಗಳು ಇವು. ಸಾಲದ್ದಕ್ಕೆ ಸಾಲುಗಟ್ಟಿ ಬರುವ ಹಬ್ಬಗಳು. ನೂಲ ಹುಣ್ಣಿಮೆಯಲ್ಲಿ ಸತ್ರದ ಹಿತ್ತನ್ನೂ ಬಿಡದೆ ತಿನ್ದಾಗುತ್ತಿತ್ತು. ನಾಗರ ಪಂಚಮಿಯ ಕಾಯಿ ಕಡುಬು, ಕೃಷ್ಣಾಷ್ಟಮಿಯ ಗೋಧಿ ಮುದ್ದೆ ಆ ಮೇಲೆ ಗಣಪತಿ ಹಬ್ಬದ ಚಕ್ಕುಲಿ ಎಳ್ಳುಂಡೆ ಪಂಚ ಕಜ್ಜಾಯ. ಇಷ್ಟಲ್ಲದೆ ಮಳೆಗಾಲದಲ್ಲೇ ಬರುವ ವೈದೀಕ ಅರ್ಥಾತ್  ತಿಥಿ ಮನೆ ಅಲ್ಲಿ ಹೋಳಿಗೆ, ಸುಟ್ಟೆವು ಪಾಯಸ. 

ಇದೆ ಮಳೆಗಾಲವನ್ನು ನಾವು ಸೈಕಲ್ ಹೊಡೆಯಬೇಕು ಎಂಬ ಆಸೆಗೆ ಬಿದ್ದು ಬೈದದ್ದೂ ಇದೇ ಆ ಕಾಲದಲ್ಲಿ. ಕ್ರಿಕೆಟ್ ಆಟಕ್ಕೆ ಇದೊಂದು ಶತ್ರು ಎಂಬಂತೆ ಕಂಡದ್ದೂ ಇದೇ. ಮಳೆ ಜೋರಾಗಿ ಮನೆಯಲ್ಲಿ ಹಿರಿಯರೆಲ್ಲ "ಇವತ್ತು ಶಾಲಿಗೆ ಹೋಪದು ಬ್ಯಾಡ" ಅಂದ ಕೂಡಲೇ ಮಳೆ ಮಿತ್ರ!! ಇದೇ ಮಳೆಗಾಲದಲ್ಲಿ ಬರುತ್ತಿದ್ದ ಜ್ವರ! ಅಹ ಗಣಿತದ ಮನೆ ಕೆಲಸ ಮಾಡದೇ ಇದ್ದಾಗ ಜ್ವರ ಬಂದರೆ ಅದೆಂಥಾ ಆನಂದ.

ಇನ್ನು ಇದೆಲ್ಲ ಬರೇ ನೆನಪು ಅಷ್ಟೇ. ನಮ್ಮ ಕಾಸು ಸಂಪಾದಿಸುವ ಹುಕಿಗೆ ನಮ್ಮ ಮುಂದಿನ ಪೀಳಿಗೆ ಇಂತಹ ಸುಖದಿಂದ ವಂಚಿತವಾಗುತ್ತಿದೆ

Wednesday, September 12, 2012

ಒಲೆದಂಡೆ


ನಾನು ಶಾಲೆಗೇ ಹೋಗಲು ಶುರು ಮಾಡಿದಾಗ  ಮನೆಯಲ್ಲಿ ಇನ್ನೂ ಎಲ್. ಪಿ. ಜಿ ಬಂದಿರಲಿಲ್ಲ. ಆಗ ಏನಿದ್ದರೂ ಕಟ್ಟಿಗೆ ಒಲೆ ಮತ್ತು ಇದ್ದಿಲ ಒಲೆಗಳದ್ದೆ ಅಡಿಗೆಮನೆಯಲ್ಲಿ ಕಾರ್ಯಭಾರ.ಈಗ ಈ ಬೆಂಗಳೂರೆಂಬ ಮಹಾ ನಗರಕ್ಕೆ ಬಂದ ಮೇಲೆ ಅನೇಕ ಬಾರಿ ನೆನಪಾಗುವ ವಸ್ತು ವಿಷಯಗಳಲ್ಲಿ ಇದು ಕೂಡ ಒಂದು. 
ಮಳೆಗಾಲದಲ್ಲಿ ಆ ಬಿರುಸುಮಳೆಯಲ್ಲಿ ಸೋಕಿದ ಇರುಸಲು ನೀರು ಅಂಗಿ ಚಡ್ಡಿಯನ್ನೆಲ್ಲ ಒದ್ದೆ ಮಾಡಿ ಹಾಕುತ್ತಿತ್ತು. ಕೊಡೆಯಿಂದ ಬಿದ್ದ ನೀರು ಪುಸ್ತಕಕ್ಕಿಂತ ಹಡಪ  ಹೆಚ್ಚಾಗಿದ್ದ ಪಾಟಿ ಚೀಲವನ್ನೂ ವದ್ದೆ ಮಾಡುತ್ತಿತ್ತು. ಸಾಲದ್ದಕ್ಕೆ ಹರಿಯುವ ನೀರಿಗೆ ಅಣೆ ಕಟ್ಟು ಕಟ್ಟುವ ಭರದಲ್ಲಿ ಕೊಡೆಯ ಮೇಲಿನ ಧ್ಯಾನ ತಪ್ಪಿ ಹೋಗಿ ಮೈ ಮೇಲೆಲ್ಲಾ ನೀರು ಬಿದ್ದು ಮನೆಗೆ ಬರುವಷ್ಟರಲ್ಲಿ ಮೈ ಚಳಿ ನಡುಕ ಹತ್ತುತ್ತಿತ್ತು. ಆದರೂ ಅದರಲ್ಲಿ ಖುಷಿ ಇರುತ್ತಿತ್ತು. ಕಾರಣ ಗೊತ್ತಿಲ್ಲ.
ಹೀಗೆ ಒದ್ದೆಯಾದ ಮೈಯನ್ನು ಮನೆಯಲ್ಲಿದ್ದ ಹಿರಿಯರು ಒರೆಸಿ ಬೇರೆ ಬಟ್ಟೆ ತೊಡುವಂತೆ ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆ. ನಂತರ, ಅಜ್ಜ ಹೇಳುತ್ತಿದ್ದ."ಅಪ್ಪಿ ಪುಸ್ತಕ ವದ್ದೆ ಆಗಿರ್ತು ಒಣಸಕ್ಕು. ಕೊಡು. ಒಲೆ ದಂಡೆ ಮೇಲೆ ಇಡ್ತಿ" ಎಂದು ಅಪ್ಯಾಯಮಾನತೆಯಿಂದ ಕೇಳುತ್ತಿದ್ದ. ಅಜ್ಜನ ಬಾಲವೇ ಆಗಿದ್ದ ನಾನು ಅಜ್ಜನ ಹಿಂದೆಯೇ ಒಲೆ ದಂಡೆ ಹತ್ತಿರ ಪುಸ್ತಕ ಒಣಗಿಸುತ್ತ, ಮೈ ಬೆಚ್ಚಗೆ ಮಾಡಿಕೊಳ್ಳುತ್ತಾ ಕೂರುತ್ತಿದ್ದೆ. ಅಂದು ಓದಿಗೆ ಚಕ್ಕರ್. ಯಾರಾದರೂ ಹೇಳಿದರೆ ನನ್ನ ಸೂಪರ್ ಮ್ಯಾನ್ ನನ್ನಜ್ಜನ ಬೆಂಬಲ ನಂಗೆ ಅಂದು. "ಪುಸ್ತಕ ಎಲ್ಲ ಒದ್ದೆ ಆಯ್ದು. ಮೈ ಎಲ್ಲ ಚಳಿ ಹತ್ತಿ ನಡುಗ್ತಾ ಇದ್ದು. ಸ್ವಲ್ಪ ಬೆಚ್ಚಗೆ ಮಾಡ್ಕಂಡು ಓದಕ್ಕೆ ಕೂತ್ಗತ್ತ. ಅಷ್ಟು ಹೊತ್ತಿಗೆ ಪುಸ್ತಕ ಒಣಗ್ತು" ಎನ್ನುವ ಆಜ್ಞೆ ಹೊರ ಬರುತ್ತಿತ್ತು. ಜೂನ್ ನಿಂದ ಜನವರಿ ತನಕ ಅಜ್ಜ ಸಂಜೆ ಹೊತ್ತು ಹೆಚ್ಚಾಗಿ ಇರುತ್ತಿದ್ದುದು ಒಲೆ ದಂಡೆಯ ಬಳಿಯಲ್ಲಿ. ನಾನು ಪುಸ್ತಕ ಹಿಡಿದು ಓದುತ್ತಾ ಅಜ್ಜನ ಪಕ್ಕದಲ್ಲಿ. 
ಇಷ್ಟೇ ಅಲ್ಲ ಚೌತಿ ಹಬ್ಬದ  ಸಮಯದಲ್ಲಿ ತಂದ ಪಟಾಕಿ ಎಲ್ಲ ಒಲೆ ದಂಡೆಯ ಮೇಲಿನ ಗೂಡಲ್ಲಿ ಸೇರುತ್ತಿತ್ತು. "ಬೆಚ್ಚಗೆ ಇಡಕ್ಕು. ಇಲ್ದಿದ್ರೆ ಪಟಾಕಿ ಹೊಡೆಯಕ್ಕೆ ಆಗ್ತಲ್ಲೆ." ಎನ್ನುವ ಅಜ್ಜನ ಅಪ್ಪನ ಮಾತುಗಳು ಈಗಲೂ ನೆನಪಾಗುತ್ತದೆ. ಕೆಲವೊಮ್ಮೆ ಮಳೆರಾಯ ಗಣಪನನ್ನು ಕಳಿಸಿದರೂ ಹೋಗುತ್ತಿರಲಿಲ್ಲ. ಆಗೆಲ್ಲ ಹೇಳುವುದು. "ಒಲೆ ದಂಡೆ ಮೇಲೆ ಇರ್ಲಿ ಪಟಾಕಿ. ದೊಡ್ಡ ಹಬ್ಬಕ್ಕೆ ಹೊಡೆದರೆ ಆತು" ಎಂದು.
ಆ ಮೇಲೆ ಮನೆಗೆ ಎಲ್. ಪಿ. ಜಿ. ಪ್ರವೇಶ ಆಯಿತು. ನಿಧ್ಹನಕ್ಕೆ ಒಲೆ ಉರಿಯುವುದೂ ಕಮ್ಮಿ ಆಯಿತು. ಅಷ್ಟರಲ್ಲಿ ನಾನು ಸ್ವಲ್ಪ ಬೆಳೆದಿದ್ದನಲ್ಲ, ಪುಸ್ತಕ ಒದ್ದೆಯಾಗುವುದೂ ಕಮ್ಮಿ ಆಯಿತು. ಆದರೂ ಒಲೆ ದಂಡೆಯ ಸೆಳೆತ ಬಿಡಲಿಲ್ಲ.
ಹೋಗಿ ಚಳಿ ಕಾಯಿಸುತ್ತಾ ಕೂರುತ್ತಿದ್ದೆ. "ಮುದುಕ!" ಎಂದು ಯಾರಾದರೂ ಕರೆದರೂ ಬೇಸರವಾಗುತ್ತಿರಲಿಲ್ಲ. ಒಲೆ ದಂಡೆಯ ಸೆಳೆತ ಎಷ್ಟಿತ್ತು ಎಂದರೆ ಸಣ್ಣ ಮಳೆಗೂ ನಾನು ಚಳಿ ಎನ್ನುತ್ತಾ ಕೂರುತ್ತಿದ್ದೆ. ಕೊನೆ ಕೊನೆಗೆ ಇದ್ದ ಒಲೆ ಪೂರ್ತಿ ಮಾಯವಾಯಿತು. ಆದರೂ ಬಚ್ಚಲ ಮನೆಯ ಒಲೆ ಇತ್ತು. ಈಗಲೂ ಅಷ್ಟೇ ಊರಿಗೆ  ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋದರೆ ಒಲೆ ದಂಡೆ ಮುಂದೆ ಕಾಲು ಗಂಟೆಯಾದರೂ ಕೂರುತ್ತೇನೆ. 
ಮೊನ್ನೆ ಒಂದು ದಿನ ರೈನ್ ಕೋಟ್ ಬಿಟ್ಟು ಹೋಗಿ ಮಳೆಯಲ್ಲಿ ನಾನು ವದ್ದೆಯಾಗಿ ಚೀಲದಲ್ಲಿದ್ದ ಪುಸ್ತಕವೂ ವದ್ದೆಯಾದಾಗ ಇದೆಲ್ಲ ನೆನಪಾಯಿತು. ಈಗ ಮೈ ವದ್ದೆಯಾದರೆ ಹೇಗೆ ಬೆಚ್ಚಗೆ ಮಾಡಲಿ? ಪುಸ್ತಕ ವದ್ದೆಯಾದರೆ ಹೇಗೆ ಒಣಗಿಸಲಿ? 
ನಿಜಕ್ಕೂ ನಾನು ಏನನ್ನೋ ಕಳೆದುಕೊಂದನೆಂಬ ಭಾವ ನನ್ನನ್ನು ಕಾಡಿದ್ದು ಸುಳ್ಳಲ್ಲ.

Wednesday, September 5, 2012

ಮಳೆಗಾಲದ ನೆನಪು

ಅಂದು ಮಧ್ಯಾಹ್ನ ಗಪ್ಪನ್ನ ಊಟ ಮಾಡಿ ಮನೆಯ ಚಾವಡಿಯ ಮೇಲೆ ಅತ್ತಿಂದ ಇತ್ತ ಇತ್ತಲಿಂದ ಅತ್ತ ಸುತ್ತಾಡುತ್ತಿದ್ದ. ಸುತ್ತಾಡುತ್ತ  ಸುತ್ತಾಡುತ್ತ  ಹಾಗೆಯೇ ಅವನ ದೃಷ್ಟಿ ಮನೆಯ ಎದುರಿನ ಜೀರಿಗೆ ಮಾವಿನ ಮರದ ಕಡೆ ಹರಿಯಿತು. ಅದು ಆಟ ಹುಟ್ಟಿದಾಗ ಆತನ ಅಜ್ಜಿ ಆ ಸಂಬ್ರಮದ ನೆನಪಿಗೆಂದು ನೆಟ್ಟಿದ್ದ ಗಿಡವಾಗಿತ್ತಂತೆ. ಅಂದರೆ ಈ ಮಾವಿನ ಮರಕ್ಕೂ ತನಗೂ ಒಂದೇ ಪ್ರಾಯ. ಈ ಮಾವಿನ ಮರದಲ್ಲಿ ಬಿಟ್ಟ ಎಷ್ಟು ಸಾವಿರ ಮಿಡಿಗಳನ್ನು ಉಪ್ಪಿನಕಾಯಿ ಮಾಡಿ ತಾನು ತನ್ನವರು ತಿನ್ನಲಿಲ್ಲ. ಎಷ್ಟು ದಿನ ಇದರ ನೀರು ಗೊಜ್ಜು ಮಾಡಿ ಕುಡಿಯಲಿಲ್ಲ.ನಿಜ ಈ ಮರ ನಿಜಕ್ಕೂ ತನ್ನ ಹುಟ್ಟಿನಿಂದ ಇಲ್ಲಿಯ ತನಕವೂ ತನ್ನ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿದೆ.
        ಆದರೆ ಇದೊಂದೇ ತನ್ನ ಬದುಕಿನ ಅವಿಭಾಜ್ಯ ಭಾಗವೇ? ಖಂಡಿತಾ ಅಲ್ಲ. ಎದುರಿಗಿರುವ ಎಲ್ಲವೂ ಅವಿಭಾಜ್ಯ ಭಾಗಗಳೇ. ಅದರಲ್ಲೂ ಇವಳು. ಅಂದೊಂದು ಕಾಲವಿತ್ತು ಇವಳ ಬರವಿಕೆಗೆ ತಾನು ಎಷ್ಟು ಕಾತರದಿಂದ ಕಾಯುತ್ತಿದ್ದೆ. ಇವಳು ಕೂಡ ಹಾಗೆಯೇ ಹೊತ್ತಿಗೆ ಸರಿಯಾಗಿ ಬರುತ್ತಿದ್ದಳು. ಬಂದಳೆಂದರೆ ತನ್ನಲ್ಲಿ ಅದೆಂಥ ಸಡಗರ -ಸ೦ಭ್ರಮ. ಇವಳು ಬಂದಳೆಂದರೆ ಮನಕ್ಕೆ ಅದೆಂಥಾ ತಂಪು. ಇವಳು ಬೀರುವ ಕಂಪು ಅದರ ಪರಿ ಹೇಳಲು ತನ್ನಲ್ಲಿ ಶಬ್ದಗಲಾದರೂ ಎಲ್ಲಿದೆ? ಮೇಲಿನಿಂದ ಕೆಳಕ್ಕೆ ಬರುವಾಗ ಅದೆಂತಹ ವಯ್ಯಾರ ಇವಳದ್ದು. ಇವಳ ಬರುವಿಕೆ ತನ್ನಲ್ಲಿ ಅದೆಂತಹ ಉತ್ಸಾಹ ಕೆರಳಿಸುತ್ತಿತ್ತು. ದೇಹದಲ್ಲಿದ್ದ ಹುಮ್ಮಸ್ಸ್ಸೆಲ್ಲವೂ ಒಟ್ಟಾಗಿ ಇವಳೊಂದಿಗೆ ಹೊರಡುತ್ತಿದ್ದೆ. ಸುತ್ತಾಟ ಓಡಾಟದ ಆಯಾಸ ಎಳ್ಳಷ್ಟೂ ಅರಿವಾಗುತ್ತಿರಲಿಲ್ಲ. ಆ ವಯಸ್ಸು ಕೂಡ ಹಾಗೆಯೆ ಇತ್ತು. ಅಂದು ಇವಳು ಬಂದಳೆಂದರೆ ತಾನೇ ಏನು? ಈ ಹೈಗರ ಕೇರಿ ಒಂದೇ ಅಲ್ಲ. ಎಲ್ಲ ಕೇರಿಗಳ ಜನರೂ ಸ೦ಭ್ರಮಿಸುತ್ತಿದ್ದರು. ಆ ಕಾಲದಲ್ಲಿ ತನ್ನನ್ನು ಹಿಡಿದವರಾದರೂ ಯಾರು? ಏನು ಕಡಿಮೆಯವಳೇ ಇವಳು?ಇವಳ ಹೊಡೆತಕ್ಕೆ ಕೊಚ್ಚಿ ಹೋದವರೆಷ್ಟು? ಇವಳ ಸುನ್ದರ್ಯಕ್ಕೆ ನಾಚಿಯೇ ಇರಬೇಕು ಹೆಂಗಸರು ಮನೆಯೊಳಗೇ ಹೊಕ್ಕಿ ಕೂರುತ್ತಿದ್ದುದು.ಮುದುಕರು ತಮ್ಮ ಕೈಲಾಗದಲ್ಲ ಎಂದುಕೊಂಡಿರಬೇಕು, ಅವರ ಹುಡುಗಾಟಿಕೆಯ ಕಥೆ ಹೇಳುತ್ತಿದ್ದುದು.
         ಆದರೆ ನಂತರದಲ್ಲಿ ಏನಾಯಿತು ಇವಳಿಗೆ? ಹೊತ್ತಿಗೆ ಸರಿಯಾಗಿ  ಬರುವುದು ಬಿಟ್ಟಳು. ಬಂದರೂ ಪೂರ್ತಿ ಹೊತ್ತು ಇರುವುದು ಬಿಟ್ಟಳು. ಇದ್ದರೂ ಅವಳಲ್ಲಿ ಮೊದಲಿನ ತಾದಾತ್ಮ್ಯ ಇರಲಿಲ್ಲ .ಇನ್ನು ಕೆಲವು ಸಾರಿ ಮತ್ತೆ ಬರಲಾರಲೇನೋ ಎನ್ನುವಂತೆ ಹೋಗುತ್ತಿದ್ದಳು. ಮತ್ತೆ ಬರುತ್ತಿದ್ದಳು. ಇನ್ನು ಒಮ್ಮೊಮ್ಮೆ  ಬಂದಳೆಂದರೆ ಆ ಸ್ನಿಗ್ಧ ಸೌಂದರ್ಯದ ಬದಲಾಗಿ ರಾಕ್ಷಸಿಯಂತೆ ಸಿಟ್ಟು ಹೊತ್ತು ಬರುತ್ತಿದ್ದಳು.
       ಈ ಬಾರಿಯೂ ಹಾಗೆ ಆಯಿತಲ್ಲ. ಬರುವುದಿಲ್ಲವೇನೋ ಎಂಬಂತೆ ಮುನಿಸು ತೋರಿದಳು ಮೊದಲು. ನಂತರ ಅದೆಂತಹ ವಯ್ಯಾರದಲ್ಲಿ ಬಂದಳು. ತನಗೆ ಒಮ್ಮೆ ಉತ್ಸಾಹ ಹುಟ್ಟಿತ್ತಲ್ಲ ಅದೂ ಈ ನಡುಪ್ರಾಯದಲ್ಲಿ.
ಆ ಮೇಲೆ ಎಳೆ ಮಗುವಿನಂತೆ ರಚ್ಚೆ ಹಿಡಿದು ಕುಳಿತಳು-ಕುಣಿದಳು. ಈಗ ಮತ್ತೆ ಅದೇ ರುದ್ರ ನರ್ತನ ಯಾಕೆ ಹೀಗೆ? ಏನಾಗಿದೆ ಇವಳಿಗೆ? ಏನು ಬೇಕಾಗಿದೆ ಇವಳಿಗೆ?
      ಅಷ್ಟರಲ್ಲಿ ಅಲ್ಲಿಗೆ ಬಂದ ಮಂಜಣ್ಣ ಹೇಳಿದ."ಎಂತೋ ಗಪ್ಪ ಕತ್ತೆ ಮೇಲೆ ಒಂದೇ ಸಮ ನಿತ್ಗಂಡು ಯೋಚನೆ ಮಾಡ್ತೆ? ಎಂತಾತ? " ಎಂದು. ಅದಕ್ಕೆ ನಮ್ಮ ಗಪ್ಪಣ್ಣ ಹೇಳಿದ " ಎ೦ತು ಇಲ್ಯ ಮಂಜ.ಈ ಮಳೆ ಮೇಲೆ ಸುಮ್ನೆ ಯೋಚನೆ ಮಾಡ್ತಾ ಇದ್ದಿದ್ದಿ. ಅರ್ಥನೇ ಆಗ್ತಾ ಇಲ್ಲೆ ಮಾರಾಯ ಇದು. ಮುಂಚೆ ಬತ್ನೆ ಇಲ್ಲೆ ಅಂತಿತ್ತು. ಈಗ ಹೋಗ್ತನೆ ಇಲ್ಲೆ ಅಂತಿದ್ದು. ಎಂತ ಇದರ ಕಥೆ?"