Wednesday, November 29, 2017

ಟಿಪ್ಪುರಾಣ-2

ಸೀದನ ಈ ಪವಿತ್ರವಾದ ವಚನಗಳನ್ನು ಕೇಳಿ ಎಲ್ಲರೂ ಪಾವಣಾರಾದ ಭಾವನೆಯನ್ನು ಅನುಭವಿಸುತ್ತಿರುವಂತೆಯೇ ಕಾಕ ಎಂಬ ಯುವ ಮಹರ್ಷಿಯು, ಉತ್ಸುಕನಾಗಿ ಪ್ರಶ್ನಿಸಿದನು.

"ಓ ಪುರಾಣಿಕನೆ, ಚೇತನದ ಮಹತ್ತನ್ನೂ, ಅದರ ಸೃಜನವನ್ನೂ, ಆ ಚೇತನವು ಹೆಸರು ಪಡೆದ ಬಗೆಯನ್ನೂ ನಮಗೆ ವಿವರಿಸಿದಿರಿ. ಈ ಚೇತನದ ಚರಿತ್ರೆಯು ವಿಸ್ಮೃತವಾಗಲು ಇದ್ದ ಕಾರಣವನ್ನೂ ಅದನ್ನು ಮತ್ತೆ ನೆನಪಿಸಿದವನನ್ನೂ ತಿಳಿಸಿದಿರಿ. ಆದರೆ ವಿಸ್ಮೃತವಾಗಿದ್ದ ಚರಿತ್ರೆಯು ಪುನಃ ಜ್ಞಾತವಾದ ಪರಿಯನ್ನೂ ಮತ್ತೆ ಪ್ರಚುರವಾದ ರೀತಿಯನ್ನೂ ನಮಗೆ ತಿಳಿಸಿ. ಕೇಳಿ ಪುನೀತರಾಗುತ್ತೇವೆ"

ನಮನಗಳಿಗೆ ಪ್ರತಿಯಾಗಿ ಸೀದನು ಹೇಳತೊಡಗಿದನು." ಸ್ಕಂದ ಪುರಾಣದಲ್ಲಿ ಬರುವ ಉತ್ತರ ಸಹ್ಯಾದ್ರಿ ಕಾಂಡದಲ್ಲಿ ಬರುವ ಸಪ್ತ ದ್ರಾವಿಡ ಬ್ರಾಹ್ಮಣರ ಬಗ್ಗೆ ನೀವು ಕೇಳಿ ಬಲ್ಲಿರಲ್ಲ. ಅದರಲ್ಲಿ ಹವ್ಯಕರು ಎಂದು ಕರೆಯಲ್ಪಡುವ ಬ್ರಾಹ್ಮಣರು ಕೂಡಾ ಒಬ್ಬರು. ಸದಾ ಹವ್ಯ ಕವ್ಯ ಗಳಲ್ಲಿ ನಿರತರಾಗಿದ್ದ ಕಾರಣ ಅವರಿಗೆ ಈ ಹೆಸರು ಬಂದಿತು. ಆ ಹವ್ಯಕರು ದೈವ ಲೀಲೆಯೋ ಎಂಬಂತೆ ಟಿಪ್ಪುವಿನ ಚರಿತ್ರೆಯನ್ನು ಸದಾ ಕಾಲ ಅವರಿಗೆ ಅರಿವಿಗೆ ಬಾರದಂತೆ ನೆನಪಿಸಿಟ್ಟರು. ಹೇಗೆಂಬ ಬಗೆ ಹೇಳುತ್ತೇನೆ ಕೇಳು."

ಸಮುದ್ರ ಮಥನದ ಕಾಲದಲ್ಲಿ ಹುಟ್ಟಿದ ಕಾರ್ಕೋಟಕ ವಿಷ ಮತ್ತು ಪೀಯೂಶಗಳ ಹದ ಮಿಶ್ರಣವೇ ಕಾಪಿ ಎಂಬ ಪಾನೀಯ.
ಚರಿತ್ರೆಯು ವಿಸ್ಮೃತವಾಗಿರುವುದನ್ನೂ, ಪುನಃ ಜ್ಞಾತವಾಗಾಗಬೇಕಾದ ಕಾಲ ಸನ್ನಿಹಿತವಾದದ್ದನ್ನೂ ಆ ವಿಶ್ವಚೇತನ ಅರಿಯದೆ ಹೋದೀತೇ? ಅದು ಸುಮೇರು ಪರ್ವತದ ಸಮೀಪದ ಪ್ರದೇಶದಲ್ಲಿ ಬುಡನ್ ಎಂಬ ಹೆಸರಿನಿಂದ ಹುಟ್ಟಿ, ದ್ರೋಣ ಪರ್ವತಕ್ಕೆ ಬಂದಿತು. ಅಲ್ಲಿ ತಾನು ತಂದಿದ್ದ ಕಾಪಿ ಬೀಜಗಳನ್ನು ನೆಟ್ಟು ಬೆಳೆಸಿತು.  ಅದು ಘಟ್ಟದ ಮೇಲಿನ ಸಾಗರ-ಹೊಸನಗರ-ತೀರ್ಥಹಳ್ಳಿ-ಸಕಲೇಶಪುರ-ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ನೆಲೆಸಿದ್ದ ಹವ್ಯಕರ ಪಾಲಿನ ರಾಷ್ಟ್ರೀಯ ಪಾನೀಯವಾಗಿತ್ತು.  ಇದು ಸಮೀಪದಲ್ಲಿ ದೊರೆಯುತ್ತಿದ್ದುದು ಮತ್ತು ಟೀ ಪಿತ್ತಗುಣ ಹೊಂದಿದ್ದುದು ಇದಕ್ಕೆ ಕಾರಣವಾಗಿತ್ತು. ಟೀ ಬಿಡಿಸಿದ ಕಾಪಿ ಎಂದೇ ಅವರು ಈ ಪಾನೀಯವನ್ನು ಸ್ವೀಕರಿಸಿದ್ದರು

ಟೀ ಬ್ರಹ್ಮನಿಂದಲೆ ಆದಿ ಭಾಗದಲ್ಲಿ ಸೃಜಿತವಾದದ್ದು ಮತ್ತು ಟಿಪ್ಪುವಿನ ಜನನಕ್ಕೆ ಆಧಾರವಾದದ್ದು ತಿಳಿದಿದೆಯಲ್ಲ. ಈ ಟೀ ಕೂಡಾ ಹವ್ಯಕರ ರಾಷ್ಟ್ರೀಯ ಪಾನೀಯ. ಎಷ್ಟೆಂದರೆ ಉತ್ತರ ಕನ್ನ್ನಡದಲ್ಲಿ ಇದೇ ಸೇವಿಸಲ್ಪಡುತ್ತದೆ. ಕಾಪಿ ಇಲ್ಲವೇ ಇಲ್ಲ ಎನ್ನಬಹುದು.

ದಕ್ಷಿಣ ಕನ್ನಡ ಭಾಗದಲ್ಲಿ ನೆಲೆನಿಂತ ಹವ್ಯಕರು ಈ ಕಾಪಿ ಟೀ ಎರಾದನ್ನೂ ಸಮಾನವಾಗಿ ಸ್ವೀಕರಿಸಿದರು. ಹೀಗೆ ಹವ್ಯಕರು ಟಿಪ್ಪುವಿನ ಮೊದಲಕ್ಷರವನ್ನು ನೆನಪಿನಲ್ಲಿಟ್ಟರು.

ಇನ್ನು ಹವ್ಯಕರ ತ್ರಿಗುಣಗಳಲ್ಲಿ ವೀಳ್ಯಭಕ್ಷಣವೂ ಒಂದೆಂದು ಬಲ್ಲೆಯಲ್ಲ ನೀನು. ಹಾಗೆ ವೀಳ್ಯ ಭಕ್ಷಿಸಿ ಅದು ಸಾಕಾದಾಗ ಅದನ್ನು ಫೂ ಎಂದು ತುಪ್ಪಿ ಟಿಪ್ಪುವಿನ ಎರಡನೇ ಅಕ್ಷರವನ್ನು ನೆನಪಿನಲ್ಲಿಟ್ಟರು. ಅವರು ಟೀ ಕೇಳುತ್ತಿದ್ದ ಬಗೆಯೇ ಹಾಗಿತ್ತು. ಹೆಂಡತಿಯನ್ನು ಕುರಿತು ಅಥವಾ ಅಮ್ಮನನ್ನು ಕುರಿತು, "ಏ ಇವಳೇ, ಟೀ-ಫೂ " ಎನ್ನುತ್ತಿದ್ದರು, ಅರ್ಥಾತ್ ಟೀಯನ್ನು ಬಯಸಿ ತಾಂಬೂಲ ಉಗಿಯುತ್ತಿದ್ದರು.

ಟಿಪ್ಪು ಅವತಾರವನ್ನು ತಳೆದ ಮೇಲೆ, ಆತನಿಗೆ ಸನಾತನ ಧರ್ಮದ ಬಗೆಗಿದ್ದ ನಿಷ್ಠೆಯನ್ನು ಮನ್ನಿಸಿ ಲೋಕದಲ್ಲಿ ಅತಿ ನಿಷ್ಠಾವಂತವಾಗಿದ್ದ ಪ್ರಾಣಿಗೆ ಆ ಹೆಸರನ್ನಿಟ್ಟು ಸಾಕುತ್ತಿದ್ದರು. ಆ ಪ್ರಾಣಿ ಕೂಡಾ ಹೆಸರು ಕರೆದೊಡನೆ ಹತ್ತಿರ ಬಂದು ಟಿಪ್ಪುವಿನ ಹೆಚ್ಚುಗಾರಿಕೆಯನ್ನು ನೆನಪಿಸುವಲ್ಲಿ ಅಪಾರವಾದ ಕೊಡುಗೆಯನ್ನು ಕೊಟ್ಟಿದೆ.

ಚಂದ್ರಮನೆಂಬ ಬ್ರಾಹ್ಮಣನು ಶಶಾಂಕ ಎಂಬ ಹೆಸರಿನಿಂದ ಹುಟ್ಟಬೇಕೆಂದೂ, ಟಿಪ್ಪುವಿನ ಮಹತ್ವಿಕೆಯನ್ನು ಮತ್ತೆ ಸಾರಬೇಕೆಂದೂ ಇಂದ್ರದೇವನ ಅಣತಿ ಮೊದಲೇ ಇದ್ದದ್ದು ಈಗ ತಾನೇ ಹೇಳಿದೆನಲ್ಲ. ಆ ಶಶಾಂಕನು ಇಂಥಾ ಒಂದು ಹವ್ಯಕರ ಮನೆಯಲ್ಲೇ ಹುಟ್ಟಿದ್ದನು.

ದೇಹ ಬುದ್ಧಿಯನ್ನು ಹೊಂದಿ ಕರ್ತವ್ಯವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಕಿರಣ ಎನ್ನುವ ಇನ್ನೊಬ್ಬ ದ್ವಿಜನನ್ನು ಇಂದ್ರನು ಭೂಮಿಯಲ್ಲಿ ಹುಟ್ಟುವಂತೆ ಆದೇಶಿಸಿದ್ದನು. ಶಶಾಂಕನನ್ನು ಅನುಸರಿಸಿ ಹುಟ್ಟಿದ್ದರಿಂದ ಆತ ಶಶಿಕಿರಣ ಎಂದು ಹೆಸರಾಗಿದ್ದನು. ಆತನು ಯಾರೋ ಒಬ್ಬ ಆಡಿದ ಸುಳ್ಳು ಮಾತನ್ನು ಇಡೀ ಜಗತ್ತಿಗೆ ತಿಳಿಸಲಾಗಿ ಅದು ಶಶಾಂಕನ ಚಿತ್ತಕ್ಕೂ ತಿಳಿದು ಪೂರ್ವ ಜನಮದಲ್ಲಿ ಇಂದ್ರನು ತನಗೆ ಕೊಟ್ಟ ಆದೇಶದ ನೆನಪಾಗಿ ಈ ಪುರಾಣವನ್ನು ಪುನಃ ರಚಿಸಿದನು.

ಅನೇಕ ಮಂದಿಗಳ ಟಿಪ್ಪುಗಳು ಈ ಪುರಾಣವನ್ನು ರಚಿಸುವಲ್ಲಿ ನೆರವಾದ್ದರಿಂದ ಈ ಪುರಾಣವನ್ನು ಆತ ಟಿಪ್ಪುರಾಣ ಎಂದು ಕರೆದನು. ಮತ್ತು ಇದು ಬೆರಳುಗಳ ಟಿಪ್ ಮೇಲೆ ರಚಿಸಿದ್ದರಿಂದಲೂ, ಟಿಪ್ಪುವಿಗೆ ಸಂಬಂಧಿಸಿದ್ದರಿಂದಲೂ ಟಿಪ್ಪುರಾಣ ಎಂದು ಹೆಸರಾಯಿತು.

ಇತಿ ಟಿಪ್ಪುರಾಣೆ ಆದಿ ಸರ್ಗೇ ಪ್ರಚಾರ ನಾಮಕ ದ್ವಿತೀಯೋಧ್ಯಾಯಃ ಸಂಪೂರ್ಣಮ್.

#ಟಿಪ್ಪುರಾಣ

Tuesday, November 28, 2017

ಎನಿ ಒಬ್ಬರೂ.......

ಇಂಗ್ಲೀಷರ ಮೇಲೆ ಇಂಗ್ಲೀಷ್ ಮೇಲೆ ಅತೀವ ಪ್ರೀತಿ ಇಟ್ಟುಕೊಂಡು, ಅದನ್ನು ಇಂಚಿಂಚಾಗಿ ಇಂದಿಗೂ ಸಾಯಿಸಿ 'ಖನ್ಣಡ ಬಾಸೆಯ ಹಬಿಮಾನಿಗಳಿಗೆ' ಮಾತಾಡಿದಾಗಲೆಲ್ಲ ರಾಜೋಸ್ತದ ಆಚರಣೆ ನಡೆಸುತ್ತಿದ್ದ ಅನಿಸುತ್ತದೆ ಈ ಹಾಲ ನಾಯ್ಕ. ಮೊನ್ನೆ ಮೊನ್ನೆ ಊರಿಗೆ ಹೋದಾಗ ಸಿಕ್ಕ ಈ ಹಾಲ್. ಇವನನ್ನು ಮತ್ತೆ ರಾಮನಾಯ್ಕನನ್ನು ನೋಡಿದ ಕೂಡಲೇ ಏಕೋ ಏನೋ ನಾನು ನನ್ನನ್ನೇ ಮರೆತು ಮಾತಿಗಿಳಿದು ಬಿಡುತ್ತೇನೆ. ಇವರು ಪಾಪ ನಿರೀಕ್ಷೆಗೆ ತಕ್ಕಂತೆ, ನನಗೊಂದು ಬೈಟ್ ಕೊಡುತ್ತಾರೆ.

ಮೊನ್ನೆ ದೀಪಾವಳಿಗೆ ಊರಿಗೆ ಹೋದಾಗ ಬಲು ಚಂದವಾಗಿತ್ತು. ಈ ಇಬ್ಬರೂ ಪ್ರಭೃತಿಗಳೂ ಒಟ್ಟಿಗೆ ಬಂದರು. ಒಸ್ತೊಡಕಿನ ದಿನ ಕೂಡ ಆಗಿತ್ತು ಅಂದು. ಸಿಕ್ಕ ಇಬ್ಬರೂ, “ಅಯ್ಪಿ ಅರಾಮೈದಿಯ?" ಅಂದರು. ನಾನು ಕೂಡಾ ಅದೇ ವಿಶ್ವಾಸದಲ್ಲಿ "ಹೊ ಆರಾಮ. ನೀವಿಬ್ರೂ ಎಂತ ಈ ಕಡಿಗೆ? ಆವಿನಹಳ್ಳಿಗೆ ಹೋಗಿದ್ರಾ ಒಸ್ತೊಡಕು ಅಂತ." ಎಂದೆ.

"ಎಂತಾ ಒಸ್ತೊಡಕು ಮಾಯ್ಡದೆನ ಅಯ್ಪಿ. ಕಯ್ದ್ರೆ ಯುಲ್ಲ." ಎಂದ ರಾಮ ನಾಯ್ಕ. (ಭತ್ತದ ಕದಿರೇ ಇಲ್ಲ. ಒಸ್ತೊಡಕು ಎಂತ ಮಾಡದು?)

ನನಗೆ ಒಂದು ಸಲ ಒಳಗಿಂದ ಉರಿ ಎದ್ದಿತು. ಕಳ್ಳ ನನ್ನ ಮಕ್ಕಳು. ಒಂದು ಕಾಲದಲ್ಲಿ, "ದುಡಿದರೂ ಒಡೆತನ ಇಲ್ಲ. ಡುಡಿದು ಅರೆ ಹೊಟೆ ಉಂಡು ಧಣಿಗಳ ಹೊಟ್ಟೆ ತುಂಬಿಸಲು ನಾವಿರಬೇಕೆ?ಉಳುವವನೇ ಹೊಲದೊಡೆಯ. ಭೂಮಿ ನೈಸರ್ಗಿಕ ಸಂಪತ್ತು. ಅದರ ಮೇಲೆ ಎಲ್ಲರಿಗೂ ಒಡೆತನ ಉಂಟು." ಎಂಬಿತ್ಯಾದಿ ಸಮಾಜವಾದದ ವಾಕ್ಯಗಳನ್ನು  ಉದ್ಘೋಷಿಸುತ್ತಾ ಗದ್ದೆಯಲ್ಲಿ ಭತ್ತದ ಹೊಟ್ಟು ಬಿತ್ತಿ ಹೋರಾಟ ಮಾಡಿದವರು. ಎಂದನಿಸಿದ್ದು ಸುಳ್ಳಲ್ಲ. ತತ್ ಕ್ಷಣ ನೆನಪಾಗಿದ್ದು, ಈ ವರ್ಷ ಮಳೆ ಇಲ್ಲ ಎನ್ನುವುದು.

ಆದರೂ ಕೇಳಿದೆ. "ಎಂತ? ಗದ್ದೆ ಮಾಡದಿಲ್ಲನ್ರಈಗ? ಎಂತ ಆತ್ರಾ? ಮಳೆ ಇಲ್ಲ ಅಂತ್ಲಾ?"

"ಅಲ್ಲಿ ಆಯ್ಪೀ ಸುಂಟಿ ಹಾಕಿದಿವು" ಅಂದ ರಾಮ.

"ಅಲ್ಲಾ ರಾಮ, ಒಬ್ಬೋಬ್ರಿಗೂ ಇರದು ಹಾಳಿ ಲೆಕ್ಕದಾಗೆ ಗದ್ದೆ. ಬೇರೆ ಎಲ್ಲೂ ಕೆಲಸಕ್ಕೆ ಹೋಗದಿಲ್ಲ ನೀವು. ಸರಕಾರದ ಲೆಕ್ಕದಾಗೆ ನಿಮಗೆ ಸಬ್ಸಿಡಿ ಭಾಗ್ಯ ಎಲ್ಲಾ ಸಿಗದಿಲ್ಲ. ಭತ್ತ ಇದ್ದಿದ್ರೆ ಉಣ್ಣಕ್ಕೆ ತೊಂದ್ರೆ ತಪ್ತಿತ್ತು. ಮಳೆ ಬೇರೆ ಕಮ್ಮಿ. ಸುಂಟಿ ಹಾಕಿರೆ ಕಷ್ಟ ಅಲನ?" ಎಂದೆ.

ಈಗ ಹಾಲ ಅಂದ." ಆಯ್ಪೀ ನಿಮಗ್ಗೊತ್ತಿಲ್ಲ. ಈ ವರ್ಷ ಮಳೆ ತಡ ಆತು. ಭಯ್ತ ಹಾಕುದ್ರೆ ಯಲ್ಲಾ ವಣಗಿಯೇ ಹೋಗ್ತುತ್ತು. ಆದುಕ್ಕೆ ಹಾಯ್ಕ್ಲೆ ಯುಲ್ಲ. ಬರ ವರ್ಷ ಅಕ್ಕಿ ಸಿಗಕಲ್ಲ ನೋಡ್ರೆ. ಎಂತ ಎನಿ ಒಬ್ರೂ ಗದ್ದೆ ಮಾಡುಲ್ಲ. ಎಲ್ಲ ಸುಂಟಿ ಹಾಕ್ಯಾರೆ.ಎನಿ ಒಬ್ರನ್ನ ಕೇಳಿ ನಾ ಗದ್ದೆ ಮಾಡೀನಿ ಅನ್ನವಿಲ್ಲ. ಎನಿ ಒಬ್ರನ್ನ ನೋಡಿ ಸುಂಟಿ"

ರಾಮ, " ಎಂತಾ ಮಾಡ್ತುಯಾ ಮಯ್ತೆ? ಸುಂಟಿ ಹಾಕದೆಯ. ಗೆದ್ದೆ ಖಾಲಿ ಬಿಡಕ್ಕಾಗ್ತೈತೆ? ಇರ ಜಾಗದಾಗೆ ಎಂತಾರು ಬೆಳ್ಕಬೊಕು. ಇಲ್ಡಿದ್ದ್ರೆ, ಹೊಯ್ಟೆ ತುಯ್ಮ್ಬದು ಬ್ಯಾಡೆ? ನಿಂಗೆಂತೊ ಬೋರೆಲ್ಲ್ ಐತೆ ಭೈತ್ತ ಹಾಕ್ರೆ ನಡೀತಾವೆ. ನಮ್ಗಾಗಕ್ಕುಲ್ಲ" ಎಂದ.

ಹಾಲ, " ನಾ ಏನು ರೆಸ್ಟೆಲ್ಲ ಬೋರೆಲ್ ತೆಗೆಸದು ಬ್ಯಾಡ ಅಂದ್ನೇ? ಯುಲ್ಲ. ಬೋರೆಲ್ ತೆಗಸ್ಬೊಕು ಅದಲ್ದೆ ಎನೀ ಒಬ್ರೂ ಸುಂಟಿ ಹಾಕ್ರೆ ಅನಾಹ್ತಾಕಾವೆ. ಎನೀ ಒಬ್ರೂ ಸುಂಟಿ. ಎನೀ ಒಬ್ರೂ ಸುಂಟಿ. ಎನೀ ಒಬ್ರನ್ನ ಕೇಳು ಮಳೆ ಯುಲ್ಲ ಅಂತ ಸುಂಟಿ. ರೇಟು ಬರಕಲ್ಲ ಈ ನಮ್ನೀ ಎನಿ ಒಬ್ರೂ ಸುಂಟಿ ಹಾಕ್ರೆ. ಕೊನಿಗೆ ಎನಿ ಒಬ್ರೂ ಹೇಳದು ಸು೦ಟಿಗೆ ರೇಟ್ ಸಾಲ ಅಂತ"

ಇಷ್ಟು ಹೊತ್ತಿಗೆ ಮತ್ಯಾರೋ ಬಂದರು. ನಾನು ಅವರ ಹತ್ತಿರ ಹೋಗಿ ಬರುತ್ತೇನೆಂದು ಹೇಳಿ ಹೊರಟೆ.

ಹಾಲ, ನನಗೆ ಕೇಳುವಂತೆ ರಾಮನಿಗೆ ಹೇಳುತ್ತಿದ್ದ. "ಬೆಂಗಳೂರು ಪ್ಯಾಟೆಲಿದ್ದವ್ಕೆ ಮಾತ್ರ ಇಂಗ್ಳಿಸು ಮಾಡ್ಕಂಡಾರೆ. ಹೇಂಗೆ ಕೊಯ್ಟೆ ನೋಡು ಎಲ್ಡು"

ಈಗ ನನಗೆ ಅವ ಕೊಟ್ಟ ಎಲ್ಡು ಯಾವುದು ಅಂತ ಯೋಚನೆ ಬಂತು. ಒಂದು "ಎನಿ ಒಬ್ರು" ಅಂದರೆ ಯಾರೊಬ್ಬರೂ ಅಂತ ಗೊತ್ತಾಯಿತು. "ರೆಸ್ಟೆಲ್ಲಾ" ಅಂದರೆ ಏನಿರಬಹುದು ಎಂದು ಯೋಚಿಸುತ್ತಿದ್ದಾಗ "ಉಳಿದವರು ಕಂಡಂತೆ" ಸಿನಿಮಾದ ಟ್ಯಾಗ್ ನೆನಪಾಗಿ ಉತ್ತರ ಗೊತ್ತಾಯಿತು- "ರೆಸ್ಟೆಲ್ಲಾ" ಅಂದರೆ ಉಳಿದವರೆಲ್ಲಾ ಅಂತ.

Wednesday, November 22, 2017

ಟಿಪ್ಪುರಾಣ-1

ಒಂದು ದಿನ ನೈಮಷಾರಣ್ಯದಲ್ಲಿ ಸನಕಾದಿ ಮುನಿಗಳು ತಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಅನುಷ್ಠಾನವನ್ನು ಪೂರೈಸಿ, ಉಪನಿಷತ್ತು-ಪುರಾಣ-ಪುಣ್ಯಕತೆಗಳನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಾ, ಅವರೊಡನೆ ಚರ್ಚಿಸುತ್ತಾ ಇದ್ದ ಹೊತ್ತು, ಆ ಪುಣ್ಯವೂ ರಮ್ಯವೂ ದಿವ್ಯವೂ ಆದ ಕ್ಷೇತ್ರಕ್ಕೆ ಸೀದ ಪುರಾಣಿಕರು ಆಗಮಿಸಿದರು.

ಆಶ್ರಮ ಧರ್ಮದಂತೆ, ಸನಾತನ ಪರಂಪರೆಯಂತೆ, ಅಲ್ಲಿದ್ದ ಮುನಿಗಳು ಪುರಾಣೀಕರಿಗೆ ಷೋಡಶೋಪಚಾರಗಳಿಂದ ಸಂತುಷ್ಟಿಯನ್ನು ನೀಡಿ, ಉಚಿತಾಸಾನವನ್ನು ಸಮರ್ಪಿಸಿ ಅವರ ಪದತಲದಲ್ಲಿ ಕುಳಿತರು.

ಆಗ ಆಶ್ರಮವಾಸಿಗಳಲ್ಲಿ ಅತ್ಯಂತ ತೇಜಸ್ವಿಯೂ, ಎಲ್ಲರಿಗಿಂತ ಹಿರಿಯನೂ ಆದ ಉಲೂಕ ಎನ್ನುವ ಮಹರ್ಷಿಯು ಎದ್ದು ನಿಂತು, ವಿನಯದಿಂದ ವಂದಿಸಿ, ದೇಹವನ್ನು ಬಗ್ಗಿಸಿ ಮೃದು ಮಧುರವಚನಗಳಿಂದ ಸೀದನನ್ನು ಕುರಿತು ಹೀಗೆಂದನು. "ಸೀದನೇ, ಜ್ಞಾನಿಯೇ, ಸ್ವಾಮಿಯೇ, ವಿವೇಕಿಯೇ, ಅಂತರ್ಯಾಮಿಯೇ, ಪುರುಷನೇ ಅಲ್ಲದಿರುವವನೆ, ಮಹಾ ಪುರುಷನೇ, ಈ ಹಿಂದೆ ನೀನು ನಮ್ಮಲ್ಲಿಗೆ ಬಂದಾಗಲೆಲ್ಲಾ ಪುಣ್ಯ ಚರಿತರ ವಿಚಾರಗಳನ್ನು ಹೇಳಿ ನಮ್ಮ ಕರ್ಣಗಳನ್ನು ಪುನೀತಗೊಳಿಸಿರುವೆ. ಇಂದು ಕೂಡಾ ನೀನು ಒಂದು ಮಹಾನ್ ವ್ಯಕ್ತಿಯ ಚರಿತ್ರೆಯನ್ನು ಹೇಳು."

ಉಲೂಕನ ಮಾತುಗಳನ್ನು ಕೇಳಿ ನಸುನಕ್ಕು ಸೀದನು, "ಮುನಿವರ್ಯಾ!! ಇಂದು ನಾನು ಹೇಳಲೇಬೇಕು ಎಂದು ತೀರ್ಮಾನಿಸಿಯೇ ಇಲ್ಲಿಗೆ ಬಂದಿರುವೆನು. ಇಷ್ಟು ದಿನಗಳ ಕಾಲ ನಾನು ಹೇಳದ, ನೀವು ಕೇಳದ ಕೇಳಿ ತಿಳಿಯದ ಒಬ್ಬ ಮಹಾನ್ ವ್ಯಕ್ತಿಯ ಚರಿತ್ರೆಯನ್ನು ಕೇಳಲು ಉತ್ಸುಕನಾಗು."

" ಈತನು ಮನುಷ್ಯರಲ್ಲಿ ಶ್ರೇಷ್ಠನೂ ಗುಣದಲ್ಲಿ ಹೆಗ್ಗುಣನೂ ಆಗಿದ್ದಾನೆ. ಸೂರ್ಯನಲ್ಲಿ ಕಿರಣವೂ, ಚಂದ್ರನಲ್ಲಿ ಕಾಂತಿಯೂ, ನೀರಿನಲ್ಲಿ ತಂಪು, ಗಾಳಿಯಲ್ಲಿ ಕಂಪು, ಗಂಧದಲ್ಲಿ ಘ್ರಾಣ, ಶರೀರದಲ್ಲಿ ತ್ರಾಣ, ಉಸಿರಿನಲ್ಲಿ ಪ್ರಾಣವೂ ಆಗಿದ್ದಾನೆ. ಈತ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಹುಲಿಯೂ ಆಗಿದ್ದಾನೆ. ರಾತ್ರಿ ಕತ್ತಲಾಗುವುದಕ್ಕೂ, ಹಗಲು ತೇಜೋಮಯವಾಗಿರುವುದಕ್ಕೂ ಈತನ ಗುಣಗಳೇ ಕಾರಣ. "

"ಯುಗ ಯುಗಾಂತರಗಳಿಂದ ಅವ್ಯಕ್ತನೂ ಅವ್ಯಯನೂ ಆಗಿರುವ ಈತ ಕಲಿಯುಗದ ಒಂದು ಹಂತದಲ್ಲಿ, ಪುಣ್ಯಮಯವಾದ ಭಾರತವರ್ಷವು ಮ್ಲೇಚ್ಛ ದುಷ್ಟರ ಆಳ್ವಿಕೆಗೆ ಒಳಪಟ್ಟು ನಲುಗುತ್ತಿರುವಾಗ, ಭಗವನ್ತನೂ ಅವತಾರ ತಳೆಯಲು ಅಶಕ್ತನಾದಾಗ ತಾನೇ ಮ್ಲೇಚ್ಛ ಯೋನಿಯಲ್ಲಿ ಹುಟ್ಟಿ, ಮ್ಲೇಚ್ಛ ದಮನವನ್ನು ಮಾಡಿದನು."

"ಈತನು ಸರ್ವ ವ್ಯಾಪ್ತನೂ, ಸರ್ವಾಂತರ್ಯಾಮಿಯೂ, ಬ್ರಹ್ಮ ಸಮ ಜ್ಞಾನಿಯೂ, ವಸಿಷ್ಟ ಸಮ ಮೇಧಾವಿಯೂ ಆದ ಈ ವ್ಯಕ್ತಿಯ ಚರಿತ್ರೆಯನ್ನು ಕಲಿಯುಗದಲ್ಲಿ ಜನರು ತಮಗರಿವಿಲ್ಲದೆಯೇ ಆಡಿಕೊಂಡು, ಪರ ವಿರೋಧಗಳನ್ನು ಮಾಡಿ ಪುಣ್ಯ ಸಂಚಯನವನ್ನು ಮಾಡಿಕೊಂಡರು. ಈತನ ಬಗ್ಗೆ ಅರಿತಿದ್ದ ಮಹಾ ಜ್ಞಾನಿಯೊಬ್ಬ ಇತಿಹಾಸಕಾರನಾಗಿ ಹುಟ್ಟಿ ಈತನನ್ನು ಕೊಂಡಾಡಿದ್ದಕ್ಕೆ, ಭಾಷೆಯೇ ಬಾರದಿದ್ದರೂ ಪ್ರಶಸ್ತಿ ಪಡೆದನು. ಇನ್ನೊಬ್ಬನು ಈತನ ಕುರಿತು ನಾಟಕವನ್ನು ರಚಿಸಿ ಜ್ನಾನಪೀಠವನ್ನು ಪಡೆದನು."

"ಕಲಿಯುಗದಲ್ಲಿ ಜನರು ಪ್ರಾಪಂಚಿಕ ಕಾರ್ಯಗಳು ಮತ್ತು ಸುಖೊಪಭೋಗಗಳಲ್ಲೇ ನಿರತರಾಗಿರುತ್ತಾರೆ ಎಂದು ನಿನಗೆ ಈ ಮೊದಲೇ ತಿಳಿಸಿದ್ದನಷ್ಟೆ? ಈ ಸುಖಗಳು ಕೂಡಾ ಬೇಜಾರವನ್ನು ಏಕತಾನತೆಯನ್ನೂ ಉಂಟುಮಾಡಿ ಅವರಿಗೆ ಭ್ರಮ ನಿರಸನವೂ ದುಃಖವೂ ಉಂಟಾದಾಗ ಎಷ್ಟೋ ಜನ ತಂತ್ರಜ್ಞರಿಗೆ ಯೋಚನೆಗಳನ್ನು ಕೊಟ್ಟು  ಹೊಸ ಆವಿಷ್ಕಾರಗಳಿಗೆ ಕಾರಣನಾದನು."

"ಇಂಥಾ ಸುಖವನ್ನು ಕಲಿಯುಗದಲ್ಲಿ ಮಜಾ ಎಂದು ಕರೆದರು. ಇಂಥಾ ಮಜವೇ ಜೀವನ ಎಂದು ಭಾವಿಸಿ ಸದಾ ಅದರ ಜೊತೆಗೆ ಕೂಡಿ ಇರುವವರಿಗೆ ಸಮಾಜವಾಸಿಗಳು ಎಂದು ಹೆಸರಾಯಿತು. ಅವರೂ ಕೂಡಾ, ಮಜವನ್ನು ಉಂಟು ಮಾಡುವ ಈ ಚೇತನವನ್ನು ಸ್ತುತಿಸುತ್ತಾ ಭಜಿಸುತ್ತಾ ಜೀವನವನ್ನು ಪಾವನವಾಗಿಸಿಕೊಂಡರು."

"ಈತನ ಚರಿತ್ರೆಯನ್ನು ಹೇಗೂ ವಿವರಿಸಿ ಹೇಳುವವನೇ ಇದ್ದೇನೆ. ಈಗ ಈ ಚರಿತ್ರೆಯ ಚರಿತ್ರೆಯನ್ನು ಹೇಳುತ್ತೇನೆ ಕೇಳು. ಹಿಂದೆ ಸ್ವರ್ಗದಲ್ಲಿ ಈ ಚರಿತ್ರೆಯ ಪಾರಾಯಣ ನಡೆಯುತ್ತಿರುವಾಗ ಚಂದ್ರಮನೆಂಬ ಬ್ರಾಹ್ಮಣನು ಅನಾಸಕ್ತನಾದನು. ಅದಕ್ಕೆ ಪಾಠಕನು ಅವನಿಗೆ ಕಲಿಯುಗದಲ್ಲಿ ಭೂಲೋಕದಲ್ಲಿ ಜನಿಸುವಂತೆ ಆದೇಶಿಸಿದನು. ಪ್ರತಿಯಾಗಿ ಚಂದ್ರಮನು ಈ ಚರಿತ್ರೆಯನ್ನು ಅನಾಸಕ್ತಿ ಉಂಟಾಗುವಂತೆ ಬೋಧಿಸಿದ್ದರಿಂದ ಈ ಚರಿತ್ರೆಯು ಲೋಕದಲ್ಲಿ ವಿಸ್ಮೃತವಾಗಲಿ ಎಂದು ಶಾಪ ಕೊಟ್ಟನು. ಅದಕ್ಕೆ ಇಂದ್ರನು ಈ ಚರಿತ್ರೆಯನ್ನು ನೀನೇ ಬರೆದು, ಪ್ರಚುರಪಡಿಸುವಾತಾಗಲಿ ಎಂದು ಬಿಟ್ಟನು ಸಿಟ್ಟಿನ ಭರದಲ್ಲಿ. ಆ ಬ್ರಾಹ್ಮಣನೇ ಈ ಚರಿತ್ರೆಯನ್ನು ಬರೆದ ಶಶಾಂಕನು."

"ಓ ಪಾವನಶ್ರವಣ, ಈ ಮಹಾನ್ ಚೇತನವು ಕಲಿಯುಗದಲ್ಲಿ ಟಿಪ್ಪು ಎಂಬ ಹೆಸರಿನಿಂದ ಖ್ಯಾತವಾಯಿತು. ಈಗ ಈ ಚೇತನದ ಸೃಜನದ ಕಥೆಯನ್ನು ಹೇಳುತ್ತೇನೆ ಕೇಳು."

"ಸೃಷ್ಟಿಯ ಆದಿ ಭಾಗದಲ್ಲಿ ಪದ್ಮಸಂಭಾವನಾದ ವಿರಂಚಿ ಎಂದು ಖ್ಯಾತನಾದ ಚತುರ್ಮುಖ ಬ್ರಹ್ಮನು, ಸೃಷ್ಟಿ ಕಾರ್ಯದಿಂದ ಬಹು ಬಳಲಿ, ಉಲ್ಲಾಸಕ್ಕೆಂದು ತಾನೇ ಸೃಷ್ಟಿಸಿದ ಟೀ ಎಂಬ ಪಾನೀಯವನ್ನು ಕುಡಿಯಲು ಮುಂದಾದನು. ಅದೇ ಸಮಯಕ್ಕೆ ಸರಿಯಾಗಿ ದಾರಿ ತಪ್ಪಿ ಸತ್ಯಲೋಕವನ್ನು ಸೇರಿದ್ದ ಸರ್ಪವೊಂದು ಫೂತ್ಕರಿಸಿತು. ಒಮ್ಮೆಲೆ ಕೇಳಿದ ಫೂತ್ಕರಣದಿಂದ ಬ್ರಹ್ಮನು ಬೆವರಿದನು. ಆ ಬೆವರು ಟೀ ಇದ್ದ ಪಾತ್ರೆಯನ್ನು ಸೇರಿತು. ಆಗ ಈ ಚೇತನದ ಸೃಷ್ಟಿಯಾಯಿತು. ‘ಟೀ’ ಪಾತ್ರೆ ಇಂದ ಬಂದದ್ದಕ್ಕೂ, ‘ಫೂ’ತ್ಕಾರಣವೂ ಅದಕ್ಕೆ ಕಾರಣವಾಗಿದ್ದರಿಂದ ಬ್ರಹ್ಮದೇವನು ಈ ಚೇತನಕ್ಕೆ ಟಿಪ್ಪು ಎಂದು ನಾಮಕರಣ ಮಾಡಿದನು."

"ತಿಳಿಯದೆ ತಪ್ಪಾಗುವುದು ಸಹಜ. ಆದರೆ ಕಾರ್ಯವೊಂದು ಘಟಿಸಿದ ಮೇಲೆ ಮುಂದಿನ ನಡೆಯನ್ನು ವಿಚಾರಿಸದೆ ಇರುವುದು ಸಜ್ಜನರಿಗೆ ಸಮ್ಮತವಲ್ಲ. ಅಂತೆಯೇ ಬ್ರಹ್ಮದೇವನು ಈ ಚೇತನದ ಪೂರ್ವಾಪರವನ್ನು ಅವಲೋಕಿಸಿದಾಗ ಟಿಪ್ಪುವೆ ವಿಶ್ವ ಚೇತನ. ಇದು ಸುಲಭಕ್ಕೆ ಜನರಿಗೆ ಅರ್ಥವಾಗಬಾರದು ಆದರೆ ಪ್ರಪಂಚ ಪರಮಾರ್ಥಗಳನ್ನು ಬೆಸೆದ ದಿವ್ಯ ಭವ್ಯ ರಹಸ್ಯ ಜನರಿಗೆ ಗೊತ್ತಾಗುತ್ತದೆ. ಇದು ಗೊತ್ತಾದಲ್ಲಿ ಪ್ರಪಂಚವು ಪರಮಾರ್ಥವಾಗಿ ಪರಮಾರ್ಥವೂ ಪ್ರಪಂಚವಾಗಿ ಬದಲಾಗುವುದರಿಂದ ಆ ಚೇತನಕ್ಕೆ ಅದೃಶ್ಯವಾಗಿ ಇರುವಂತೆ ಮತ್ತು ಅರಿಯದೆ ಉಪಕರಿಸುವಂತೆ ವಿನಂತಿಸಿದನು. ಟಿಪ್ಪು ಇದಕ್ಕೆ ಸಮ್ಮತಿಸಿದನು. ವಿನಂತಿಯನ್ನು ಪುರಸ್ಕರಿಸುವುದು ಮಹಾಂತರ ಲಕ್ಷಣ ಎಂದು ಈ ಮೂಲಕ ಬ್ರಹ್ಮನಿಗೂ ಅರಿವು ಮೂಡಿಸಿದನು.

ಇತಿ ಟಿಪ್ಪುರಾಣೆ ಆದಿ ಸರ್ಗೆ ಪ್ರವೇಶ ನಾಮಕ ಪ್ರಥಮೊಧ್ಯಾಯಃ ಸಂಪೂರ್ಣಮ್.

# ಟಿಪ್ಪುರಾಣ

Tuesday, November 21, 2017

ವಿಶ್ವಣ್ಣನ ಪಾಸ್ ವರ್ಡ್

ಮತ್ತೆ ವಿಶ್ವನ ತಲೆಯಲ್ಲಿ ಯೋಚನೆಗಳು ಗಿರಕಿ ಹೊಡೆಯತೊಡಗಿದವು, ತೆಂಕುತಿಟ್ಟಿನ ಪುಂಡುವೇಷದ ತರಹ. "ಅಲ್ಲ ಈ ನಾಣು ಮಾಣಿ ಕಥೆಯೇ. ಅವತ್ತು ಆನು ಕಥೆ ಹೇಳಿದ್ದಾಗ ಏನು ಬರೀತಿ ಅಂತ್ಲೋ ಅಥವಾ ಬರಿತ್ನಲ್ಲೆ ಅಂತ್ಲೋ ಹೇಳಲಾಗಿತ್ತು. ಹೇಳಲೇ ಇಲ್ಲೆ ಪುಣ್ಯಾತ್ಮ. ಈಗ ನೋಡಿರೆ ಬರ್ದೆ ಬುಟ. ಹಾಳಾಗ್ಲಿ. ಅಲ್ಲ ಹಾಂಗಾರೆ, ದಿನಾ ಡೈರಿಲಿ ಸಿಗ್ತ. ಒಂದು ಮಾತು ಹೇಳಿದ್ರೆ ಬರ್ತಿರ್ಲ್ಯಾ ಅವಂಗೆ. ಗಜಾನನ ಹೇಂಗೂ ಯನ್ನ ಶನ್ನಕಿದ್ದಾಗಿಂದ ನೋಡಿದವ. ಮರೆವು ಅಂತ ಬಿಟ್ಟು ಹಾಕ್ತ. ಅದೇ ಉಳಿದವರ ಹತ್ರ ಆನು ಈ ತರ ಮಾತಾಡಿದ್ರೆ, ಕಥೆ ಎಂತ ಆಗ್ತಿತ್ತು? ಹುಡ್ರಿಗೆ ಪಾಸಿಟಿವ್ ತಿಂಕಿಂಗೆ ಇಲ್ಲೆ. ಅವತ್ತು ತುಘಲಕ್ಕನ ಸುದ್ದಿ ಹೇಳಿದ್ದಕ್ಕೇ ಇವ ಹೀಂಗೆ ಮಾಡಿದ್ದ."

"ಅಲ್ಲಾ ಮತ್ತೆ!! ನಾ ಎಂತ ಮಾಡಿರೂ ಹೀಂಗೆ ಆಗ್ತಲ. ಇವಕ್ಕೆಲ್ಲಾ ಆನೊಬ್ಬವ ಇದ್ದಿ ಅಂತ ಗೊತ್ತೇ ಆಗ್ತಲ್ಲೇ. ಹಾಂಗಾರೆ ನಾಣುಗೆ, ಮುಂಚೇನೇ ಹೇಳಿದ್ರೆ ಎಂತ ಮಣ್ಣು ಖಾಲಿ ಆಗ್ತಿತ್ತು ಬ್ಯಾಡದಾ? ಹಾಳಾಗಿ ಹೋಗ್ಲಿ. ಇವಕ್ಕೆಲ್ಲಾ ಮುಕ್ಳಿ ಸೊಕ್ಕು. ತಮಗೆ ಗೊತ್ತಿದ್ದೂ ಅಂತ.  ಯಂಗೆ ವಯಸ್ಸು ೫೦ ರ ಹತ್ರ ಬಂತು. ಮರೆವು ಬೇರೆ. ಈ ಅಡಿಕೆ ತ್ವಾಟ ನಂಬಿ ಇದ್ರೆ ನಮ್ಮ ಮನೆ ದಾರಿ ನಮಗೆ ಮರಿದೆ ಹೋದ್ರೆ ದೊಡ್ಡದು. ಒಟ್ಟೂ ಇಲ್ಲಿ ಇರಕ್ಕೆ ಸಾಧ್ಯ ಇಲ್ಲೆ. ಈ ತ್ವಾಟ ಮನೆ ಎಲ್ಲಾ ಹುಟ್ಟಿದಷ್ಟಕ್ಕೆ ಮಾರಿ ಎಲ್ಲಾದ್ರೂ ದೂರ ಅಲ್ಲ ಪ್ಯಾಟೆ ಕಡೆ ಹೋಪದು ಒಳ್ಳೆದು. ಸಾಗರಾದಾಗೆ ಮನೆ ಮಾಡಿರೆ? ಬ್ಯಾಡ ನಮಗೆ ಬ್ಯಾಡ ಅಂದವರಿಂದ ದೂರನೆ ಇರಕ್ಕು. ಇವ್ವು ಇಲ್ಲಿ ಮಾತಾಡ್ಕಂಡ್ರೆ,' ವಿಶ್ವ ಎಂತದೂ ಮಾಡ್ಕಳ್ದೆ, ಬರೀ ಎಂತೆಂತದೋ ಮಾಡಿ ಹಾಳಾಗಿ ಕೆಟ್ಟು ಪ್ಯಾಟೆ ಸೇರಿದ' ಅಂತ ಮಾತಾಡ್ಕತ್ತ. ಅದೂ ಅಲ್ದೆ ಸಾಗರ ಇಲ್ಲಿಂದ ದೂರ ಅಲ್ಲ. ಹಾಂಗಾಗಿ ಅಲ್ಲೂ ಅಪ ಪ್ರಚಾರ ಆಗ್ತು. ಮತ್ತೆ ಅಲ್ಲಿ ಬೆಲೆ ಸಂಪಾದನೆ ಮಾಡದು ಕಷ್ಟ ಆಗ್ತು. ಬೆಲೆ ಏನಿದ್ರೂ ಹುಟ್ಟಿದ ಊರಲ್ಲಿ ಗಳಿಸಕ್ಕು. ಅದಕ್ಕೆ ಒಂದೇ ದಾರಿ. ಆನು ಇಂಟರ್ನೆಟ್ ಮತ್ತೆ ದೊಡ್ಡ ಗ್ಲಾಸಿನ ಫೋನ್ ಇಟಗಂಡು, ವಾಸಪ್ಪು, ಫೇಸ್ ಬುಕ್ ಸಹವಾಸ ಮಾಡಕ್ಕು. ಅದರಿಂದ ವಿಚಾರ ಎಲ್ಲಾ ತಿಳ್ಕಂಡು ಈ ಹುಡ್ರಿಗೆ ತೋರ್ಸಕ್ಕು."

ವಿಶ್ವನಿಗೆ ಇಲ್ಲೂ ಸಂಕಟ. ತಾನು ಇಂಟರ್ನೆಟ್ ಉಪಯೋಗಿಸಿ ತಿಳಿದರೆ ಉಳಿದವರಿಗೂ ತನಗೂ ವ್ಯತ್ಯಾಸವಿಲ್ಲ. ಉಪಯೋಗಿಸದೆ ತಿಳಿದದ್ದು ಸಾಕಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ತನಗೆ ಕಂಪ್ಯೂಟರ್ ಗೊತ್ತಿಲ್ಲ. ಅದನ್ನು ಬೇರೆಯವರು ಹೇಳಿಕೊಡುತ್ತಿಲ್ಲ ಎಂಬ ಸಂಕಟ ಬೇರೆ ಅವನಿಗೆ. ಅಷ್ಟರಲ್ಲಿ ಒಂದು ಮಹತ್ ಯೋಚನೆ ಮಾಡಿದ. "ಹೇಗೂ ಉಡುಪಿಯಲ್ಲಿ ಪಿ ಯು ಸಿ ಮಾಡುತ್ತಿರವ ಮಗಳು ಮುಂದಿನ ತಿಂಗಳು ಮನಿಗೆ ಬತ್ತಾ ಇದ್ದ. ಅವಳು ಬಂದಾಗ ಅವಳಿಗೆ ಅಂತ ಒಂದು ಕಂಪ್ಯೂಟರ್ ತರಸ್ತಿ ಬೆಂಗಳೂರಲ್ಲಿಪ್ಪ ಭಾವನ ಹತ್ತಿರ ಹೇಳಿ. ಅವಳು ಇಲ್ಲಿಂದ ಹೋಪದರ ಒಳಗೆ ಇಂಟರ್ನೆಟ್ಟಿಂದ ವಿಚಾರ ತಿಳಿಯದು ಹೇಂಗೆ ಅಂತ ಕಲ್ತಗತ್ತಿ. ಆಮೇಲೆ ಇದ್ದು ಇವಕ್ಕೆ. ಹಬ್ಬ ಆಗ್ಗು. ಏನು ಇವ್ವು ಒಂದೇ ಎಲ್ಲಾ ಕಲ್ತಿದ್ದಾ. ವಿದ್ಯೆ ಯಾರಪ್ಪನ ಮನೆ ಸೊತ್ತು?" ಎಂದು ಭರ್ಜರಿ ಪ್ಲಾನ್ ಹಾಕಿದ.

ಮಗಳು ಮನೆಗೆ ಬರುವ ದಿನ ಹತ್ತಿರ ಬರುತ್ತಿತ್ತು. ಅವಳು ಬರುವ ಮೊದಲೇ ಲ್ಯಾಪ್‌ಟಾಪ್ ಬಂದು ಡಬ್ಬದಲ್ಲಿ ಕುಳಿತಿತ್ತು. ಎಲ್ಲಿ "ವಿಶ್ವಣ್ಣ ಮಗಳ ಹತ್ರ ಕಂಪ್ಯೂಟರ್ ಕಲ್ತ" ಅಂತ ಊರೆಲ್ಲ ಡಿ ಗ್ರೇಡ್ ಮಾಡುತ್ತಾರೋ ಎಂಬ ಭಯದಿಂದ ಅದನ್ನು ಯಾರಿಗೂ ತೋರಿಸಿರಲಿಲ್ಲ. 

ಸ್ವಲ್ಪ ದಿನಕ್ಕೆ ಮಗಳು ಮನೆಗೆ ಬಂದಳು. ವಿಶ್ವನೂಕಂಪ್ಯೂಟರಿನ ಪೆಟ್ಟಿಗೆ ತೆರೆದು ಅಮಿತೋತ್ಸಾಹದಲ್ಲಿ, ನಾಣು ಮತ್ತಿತತರರನ್ನು ಮಣಿಸಿ ಮುಗಿಸಿದ ಖುಷಿಯಲ್ಲಿ ಕುಳಿತ.

ಮಗಳು ಕಂಪ್ಯೂಟರ್ ಹೇಳಿಕೊಡಲು ಶುರು ಮಾಡಿದ್ದಳು ಅಷ್ಟೇ. "ಅದೆಲ್ಲ ಬಿಡು. ಫೇಸ್ ಬುಕ್ ಹೇಳ್ಕೊಡು" ಅಂದ. ಮಗಳು ನಿರ್ಲಕ್ಷಿಸಿ ಬುಡದಿಂದ ಹೇಳಿಕೊಟ್ಟಳು. ತಲೆಗೆ ಹೋದರಲ್ಲವೇ, ಬೇಕಾಗಿದ್ದು ಫೇಸ್ ಬುಕ್ನಲ್ಲಿ ಹೇಗೆ ಬರೆಯಬೇಕು ಎಂದು ಕಲಿಯುವುದು ಅಷ್ಟೇ.

ದಿನಾ ಮಗಳು ಕಂಪ್ಯೂಟರ್ ಬೂಟ್ ಮಾಡಿಕೊಟ್ಟು, ಇಂಟರ್ ನೆಟ್ ಕನೆಕ್ಟ್ ಮಾಡಿ, ಅಪ್ಪನನ್ನು ತನ್ನಫೇಸ್ ಬುಕ್ಕಿಗೆ ತಂದು ಕಲಿಸಿಕೊಡುತ್ತಿದ್ದಳು.. ಈ ಪ್ರಾಣಿಗೆ ಒಂದು ಸಲ ಫೇಸ್ ಬುಕ್ ದರ್ಶನವಾದ ಕೂಡಲೇ  ಭಕ್ತನಿಗೆ ದೇವರು ಕಂಡಂತಾಗುತ್ತಿತ್ತು. ಕಂಪ್ಯೂಟರ್ ಉಪ್ಯೋಗಿಸಿ ಬರೆಯುವುದನ್ನು ಕಲಿಯಬೇಕೆಂಬ ಆಸೆ ಮರೆತು ಹೋಗುತ್ತಿತ್ತು. ಮತ್ತೆ ರಾತ್ರಿ ಮಲಗುವಾಗ ಯೋಚನೆಯಾಗಿ, ಅದೇ ಕವಳದ ಸಾಂಗತ್ಯ, ನಿದ್ದೆಯೊಂದಿಗೆ ವಿರಸ, ನಾಳೆ ಕಲಿಯಲೇ ಬೇಕೆನ್ನುವ ಹಠ.

ಕೊನೆಗೊಂದು ದಿನ ತೀರ್ಮಾನ ಮಾಡಿದ. " ಇವತ್ತು ಫೇಸ್ ಬುಕ್ ಓಪನ್ ಮಾಡಸ್ತ್ನೆ ಇಲ್ಲೆ. ಬರೆಯದು ಹೇಂಗೆ ಅಂತಷ್ಟೇ ಕಲಿತಿ." ಎಂದು. ಅಂತೆಯೇ ಮಾಡಿದ ಕೂಡ. ಪುಣ್ಯ. ಬರಹದ ಬರವಣಿಗೆ ಸುಲಭವಾಗಿತ್ತು. ಮಗಳಿಗೆ ಹೇಳಿಕೊಡುವುದು ಕಷ್ಟವಾಗಲಿಲ್ಲ.

ಒಂದು ದಿನ ವಿಶ್ವ, ಹೀಗೇ ಬರೆಯುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದ. ಅಷ್ಟರಲ್ಲಿ ಪಕ್ಕದ ಮನೆಯ ಕೃಷ್ಣಭಟ್ಟರು "ಹೊ ವಿಶ್ವ ಎಂತ ಮಾಡ್ತಿದ್ಯೊ? ಒಂದು ಸಮಸ್ಯೆ ಆಗಿ ಹೊಯ್ದು ಮಾರಾಯ" ಎನ್ನುತ್ತಾ ಬಂದು ಅವ್ನ ಪಕ್ಕದಲ್ಲೇ ಕುಳಿತು, ಕಂಪ್ಯೂಟರಿನಲ್ಲಿ ಹಣಕಿದರು.

ಭಟ್ಟರೇನೊ, ತಮ್ಮ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಪಡೆದು ಹೋದರು. ಆದರೆ ವಿಶ್ವನ ತಲೆಗೆ ಹೊಸ ಹುಳ ಹೊಕ್ಕಿತ್ತು. ತಾನು ಅರ್ಧಮರ್ಧ ಬರೆದಿದ್ದನ್ನು ಯಾರಾದರೂ ನೋಡಿ, ಅದನ್ನು ಪ್ರಕಟಪಡಿಸುವ ಮೊದಲೇ ತಮ್ಮದಾಗಿಸಿಕೊಂಡರೆ ಎಂದು.

ಮಗಳಲ್ಲಿ ಪರಿಹಾರ ಕೇಳಿದ. ಅವಳು ಸಿಟ್ಟಾಗಿ," ಅದಕ್ಕೆ ಹೇಳದು. ಬುಡದಿಂದ ಕಲಿಯಕ್ಕು ಅಂತ. ಆನು ದಿನಾ ಆನ್ ಮಾಡಕ್ಕಿದ್ರೆ ಪಾಸ್ ವರ್ಡ್ ಎಲ್ಲಾ ಕೊಡ್ತಿ. ನೀನು ಅದು ನೋಡ್ಕತ್ತಲ್ಲೇ. ಈಗ ತಲೆ ತಿಂತೆ" ಎಂದಳು.

ಕಲಿಯುವುದು ಅನಿವಾರ್ಯ ಎಂದುಕೊಂಡಿದ್ದ ವಿಶ್ವ ಬಾಯಿ ಮುಚ್ಚಿ ಮಗಳು ಕಲಿಸಿದ್ದನ್ನು ನೋಡಿದ. ಮಗಳು, "ಅಪ್ಪಾ!! ಪಾಸ್ ವರ್ಡ್ ಬರಕ. ಸ್ಪೆಲಿಂಗ್ ಹೇಳ್ತಿ." ಅಂದಳು.

ಸ್ವಭಾವದಂತೆ ವಿಶ್ವ," ನೀ ಎಂತ ಶಬ್ದ ಕೊಟ್ಟಿದ್ದೆ ಹೇಳು. ಯಂಗೆ ಎಸ್ ಎಸ್ ಎಲ್ ಸಿ ಆಯ್ದು. ಸ್ಪೆಲಿಂಗ್ ಎಲ್ಲಾ ಗೊತ್ತಾಗ್ತು" ಅಂದ. ಮಗಳು "ಗಣಪತಿ" ಎಂದಷ್ಟೇ ಹೇಳಿದಳು.

ಕಂಪ್ಯೂಟರ್ ಶಟ್ ಡೌನ್ ಮಾಡಿ, ಅಪ್ಪನಲ್ಲಿ ಲಾಗಿನ್ ಮಾಡುವುದಕ್ಕೆ ಹೇಳಿ, ಪಕ್ಕದ ಮನೆಗೆ ಹೋಗಿ ಒಂದು ಗಂಟೆ ಬಿಟ್ಟು ಬಂದಳು. ವಿಶ್ವ ಲಾಗಿನ್ ಮಾಡಿರಲಿಲ್ಲ. ತಿಣುಕುತ್ತಲೆ ಇದ್ದ. ಮಗಳ ಮೇಲೆ ಹರಿಹಾಯ್ದ."ಮಳ್ಳು ಕೂಸೇ!! ಎಂತ ಕೊಟ್ಟಿದ್ಯೆ ಪಾಸ್ ವರ್ಡ್? ತಾಗ್ತ್ತಾನೆ ಇಲ್ಲೆ."

"ಕೊಡಿಲ್ಲಿ" ಎನ್ನುತ್ತಾ ಪಾಸ್ ವರ್ಡ್ ಕೊಟ್ಟಳು. ಲಾಗಿನ್ ಆಯಿತು.

"ಆನು ಕೊಟ್ಟಾಗ ಎಂತಕ್ಕೆ ಆಗ್ಲೇ?" ಎಂದ

"ತಪ್ಪು ಕೊಟ್ಟಿದ್ದೆ ಅದಕ್ಕೆ"

"ಎಂತ ತಪ್ಪು.   G-A-N-A-P-A-T-I     ಅಂತ ಅಂದ್ರೆ ಗಣಪತಿ ಅಲ್ದಾ?

"ಅದಕ್ಕೆ ಹೇಳಿದ್ದು ಸ್ಪೆಲಿಂಗ್ ಬರ್ಕ ಅಂತ.  G-A-N-P-A-T-H-I  ಅಂದ್ರೂ ಅದೇಯ."

ಪಟ್ಟು ಬಿಡಲೊಲ್ಲದೆ ಅಲ್ಲ, ಮಗಳೆದುರು ತನ್ನದು ತಪ್ಪು ಅಂತಾದರೆ ಮರ್ಯಾದೆ ಉಳಿಯಲಿಕ್ಕಿಲ್ಲ ಅಂತ ವಿಶ್ವ " ನಿಂಗಕ್ಕೆ ಪಾಸಿಟಿವ್ ಥಿಂಕಿಂಗ್ ಇಲ್ಲೆ. ನೀ ಸರಿ ಹೇಳಲ್ಲೆ ಯಂಗೆ" ಎನ್ನಬೇಕೆ?

  # ವಿಶಾರದ ವಿಶ್ವನಾಥ- 4

Tuesday, November 14, 2017

ವಿಶ್ವನಾಥನ ಹೆಸರು ಬಂತು......

ಹೀಗೆ ನಾಣು ಮಾಣಿಯನ್ನು ನೇರವಾಗಿ ಅಲ್ಲದಿದ್ದಾರೂ ಸುತ್ತಿ ಬಳಸಿ ಇಕ್ಕಟ್ಟಿನಲ್ಲಿ ಸಿಕ್ಕಿಸಿ, ತನಗೆ ಅವ ನಿದ್ದೆ ಕೆಡಿಸಿದ್ದಕ್ಕೆ ಸೇಡು ತೀರಿಸಿಕೊಂಡು ನೆಮ್ಮದಿ ಕಂಡ ವಿಶ್ವನಾಥ. ಆದರೆ ಈ ನೆಮ್ಮದಿಯೂ ಅವನ ಪಾಲಿಗೆ ಶಾಶ್ವತವಾಗಲಿಲ್ಲ. ಮತ್ತೊಬ್ಬರನ್ನು ಪರೀಕ್ಷಿಸಿ ಅವರಿಗೆ ಗೊತ್ತಿಲ್ಲದಿದ್ದರೆ ಮಾತ್ರ ಇವನಿಗೆ ಒಂದು ಸಮಾಧಾನವಾಗುತ್ತಿತ್ತು. ಆದರೆ ಫೇಸ್ ಬುಕ್ ಟ್ವಿಟ್ಟರ್, ಟೆಡ್ ಟಾಕ್ ಗಳ ಈ ಯುಗ, ಒಂದೇ ದಿನ ಎಲ್ಲಾ ಪೇಪರುಗಳನ್ನೂ ಒಂದೇ ಕಿಟಕಿಯಲ್ಲಿ ತೋರುವ ಈ ಮಾಹಿತಿ ಯುಗ ಅದನ್ನು ಸುಲಭಸಾಧ್ಯವಾಗಿಸಲಿಲ್ಲ.
ಚಿಂತೆ ಯೋಚನೆಗಳ ದೆಸೆಯಿಂದ ವಿಶ್ವಣ್ಣ ಅನುಭವಿಸಿದ ಪಾಡು ಪಾಪ ಅವನಿಗೆ ಗೊತ್ತು. ರಾತ್ರಿ ನಿದ್ದೆ ಇಲ್ಲ. ಯೋಚೆನೆಗಳು ಹೋಗಲೊಲ್ಲವು. ಬಂದ ಯೋಚನೆಗಳನ್ನು ಹೊರಕಲಿಸೆ, ಹೊಸ ಯೋಚನೆಗಳನ್ನು ಪಡೆಯಲು ಅವನಿಗಿದ್ದ ಏಕೈಕ ಆಯುಧ ಕವಳ. ಪರಿಣಾಮ ಪಿತ್ತ ಹೆಚ್ಚಿತು. ನಿದ್ದೆ ಬಿಟ್ಟ ಕಾರಣದಿಂದ ಬುದ್ಧಿ ಮೊನಚು ಕಳೆದುಕೊಂಡಿತು. ಆಯಾಸ ಬೇರೆ. ದೈನಂದಿನ ಕೆಲಸಗಳನ್ನು ಮಾಡಲು ಉತ್ಸಾಹವಾಗಲೀ ಚೈತನ್ಯವಾಗಲಿ ಇಲ್ಲ. ಫಲಿತಾಂಶ, ಕೆಲಸಗಳು ಕೆಟ್ಟವು. ಕೆಟ್ಟ ಕೆಲಸದಿಂದ ತಲೆ ಇನ್ನಷ್ಟು ಕೆಟ್ಟಿತು.
ಇದನ್ನೆಲ್ಲಾ ನೋಡಿದ ನಾಣುವಿಗೆ ಅನ್ನಿಸತೊಡಗಿತು."ವಿಶ್ವಣ್ಣ ಜನ ಒಳ್ಳೆಯವನೇ. ಆದರೆ ಪಾಪ. ಹೆಸರು ಮಾಡಕ್ಕು. ಅದರಲ್ಲೂ ಬೇರೆಯವರು ತನ್ನ ಮಾತು ಕೇಳ್ತ ಅಂತಾಗಕ್ಕು ಎಂಬ ಆಸೆ ಇವನಿಗೆ. ಮುಂದಿನ ಸಲ ಲೇಖನ ಬರೆದಾಗ ಅಥವಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದಾಗ ಅವನಿಗೆ ಒಂದು ಕೃತಜ್ಞತೆ ಸಲ್ಲಿಸಕ್ಕು." ಎಂದುಕೊಂಡ. ಅಂತೆಯೇ ಮಾಡಿದ ಕೂಡ. ಎಲ್ಲೋ ಒಂದು ಸಾರಿ ಕೆಳದಿ ಚೆನ್ನಮ್ಮ ಔರಂಗಜೇಬನನ್ನು ಸೋಲಿಸಿದ ಬಗೆಯನ್ನು ವಿಶ್ವನಾಥನೂ ಸೇರಿದಂತೆ ಅನೇಕರ ಬಾಯಿಯಿಂದ ಕೇಳಿ ತಿಳಿದುಕೊಂಡಿದ್ದ ನಾಣು ಅದೇ ವಿಷಯದ ಮೇಲೆ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಿದ. ಕೊನೆಯ ಸಾಲಿನಲ್ಲಿ ಬರೆದ, " ನಮ್ಮೂರಿನ ಚರಿತ್ರೆಯನ್ನು ಇಂದಿಗೂ ಢಾಳಾಗಿ ನೆನಪಿಟ್ಟುಕೊಂಡು ನಮ್ಮ ಮುಂದೆ ಇದನ್ನು ಕಣ್ಕಟ್ಟುವಂತೆ ವರ್ಣಿಸುವ ವಿಶ್ವನಾಥನ್ನನೇ ಈ ಲೇಖನದ ನಿಜವಾದ ಲೇಖಕ" ಎಂದು.
ಅದನ್ನು ಈ ನಾಣು ವಿಶ್ವನಿಗೆ ಹೇಳಲೇ ಇಲ್ಲ. ಹೇಳಿದರೆ ಮತ್ತೆ ಇವನ ಹತ್ತಿರ ಪಾಸಿಟಿವ್ ಥಿಂಕಿಂಗ್ ಹೆಸರಿನಲ್ಲಿ ಬೈರಿಗೆ ಗತಿ ಅಂತಲೋ ಏನೋ. ದೈವ ಲೀಲೆಯೋ ಎಂಬಂತೆ ಆ ಲೇಖನ ಪತ್ರಿಕೆಯಲ್ಲೂ ಅಚ್ಚಾಯಿತು. ನಿದ್ದೆಗೆಟ್ಟು ಚಿಂತೆಯಿಂದ ಬಸವಳಿದಿದ್ದ ವಿಶ್ವ ಸ್ವಲ್ಪ ದಿನ ರೆಸ್ಟ್ ಬೇಕು ಅಂತ ಲೈಬ್ರರಿಗೆ ಹೋಗಿರಲಿಲ್ಲ. ಅವತ್ತು ಸಂಜೆ ಹಾಲು ಕೊಡಲು ಡೈರಿಗೆ ಹೋದಾಗ ಮೇಲಿನ ಕೇರಿ ಗಜಾನನ ಭಟ್ಟರು, " ಏ ವಿಶ್ವ!! ನೀನು ಹೇಳಿದ ಚೆನ್ನಮ್ಮನ ಕತೆಯಡ. ನಾಣು ಬರದ್ದ. ಇವತ್ತಿನ ಪೇಪರ್‌ನಲ್ಲಿ ಬೈಂದು. ಚನಾಗಿದ್ದ ಕತೆ." ಅಂದ. ಒಳಗೊಳಗೇ ಹಿರಿ ಹಿರಿ ಹಿಗ್ಗಿದ ವಿಶ್ವನಿಗೆ ನಾನುವಿನ ಮೇಲಿನ ಕೋಪ ಎಷ್ಟೋ ದಿನಗಳಿಂದ ತಲೆಯ ಮೇಲಿದ್ದ ಚಿಂತೆಯ ಭಾರ ಎಲ್ಲವೂ ಒಂದೇ ಸರಿ ಇಳಿಯಿತು. ಬಹುಷಃ ಜಾಪಾಳು ಮಾತ್ರೆಗೂ ಆ ವೇಗದಲ್ಲಿ ಹೊಟ್ಟೆ ಭಾರ ಇಳಿಯಲಿಕ್ಕಿಲ್ಲ.
ಆದ ಸಂತೋಷದಲ್ಲಿ, ವಿಶ್ವ ಮಾತು ಶುರುವಿಟ್ಟುಕೊಂಡ.
"ಆನೂ ಓದಿದ್ನಾ. ಮಾಣೀ ಭಾರೀ ಚನಾಗಿ ಬರದ್ದ. ಅಷ್ಟು ಚನಾಗಿ ಬರಿತ ಅಂತ ಯಂಗೆ ಗ್ಯಾರಂಟಿ ಇರಲೆ. ವಿಚಾರ ಹಾಂಗಿದ್ದ ಅದು. ಅದೇ ಬರಸ್ಕತ್ತು. ಹೂಂ ಮತ್ತೆ. ಅವಳು ಹೆಂಗಸಲ್ದಾ. ನಿಜವಾಗಿ ಗಂಡಸುತನ ಅಂದ್ರೆ ಅವಳಿಗೆ ಇದ್ದಿದ್ದು. ಇಲ್ದೆ ಇದ್ರೆ ರಾಜ್ಯದ ಒಳಗೆ ಶತ್ರುಗಳಿದ್ದ. ಅಂತಾದ್ರಲ್ಲೂ ಆ ಬ್ರಿಟಿಷರನ್ನ ಎದುರು ಯುದ್ಧ ಮಾಡಿದ. ರಾಜ್ಯ ಸಂರಕ್ಷಣೆಗೆ ಮುಂದಾದ. ನಾವು ಕಿತ್ತೂರು ಸಂಸ್ಥಾನದಲ್ಲಿ ಇಲ್ಲದೆ ಕೆಟ್ವಾ!! ಇಲ್ಲಿ ಆ ಹೈದರಾಲಿ ಟಿಪ್ಪು ಇಬ್ಬರು ಬಾರದೆ ಹೋಗಿದ್ರೆ, ಯಂಗಕ್ಕೆ ಅಂದ್ರೆ......"

ಹೀಗೆ ವಿಶ್ವಣ್ಣನ ವಾಗ್ಝರಿ ಸಾಗುತ್ತಲೇ ಇದ್ದಾಗ ಗಜಾನನ ಭಟ್ಟರು "ಅಲ್ದಾ" ಎಂಬ ಉದ್ಗಾರ ತೆಗೆದರು. ನಿಲ್ಲು ಎನ್ನುವಂತೆ ಕೈ ತೋರಿಸಿದ ವಿಶ್ವ ಮತ್ತೆ ಮುಂದುವರೆಸಿದ.
"ಎಂತ ಹೇಳ್ತಿದ್ದಿ, ಮೈಸೂರು ಸಂಸ್ಥಾನದಾಗೆ ಅಂತಾ ಒಬ್ಬಳು ಹೆಂಗಸಿದ್ದಿದ್ರೆ, ಟಿಪ್ಪು ಹೈದರಾಲಿ ಬರ್ತನೆ ಇರ್ಲೆ. ಈ ನಮ್ಮ ಕೆಳದಿ ಸಂಸ್ಥಾನಾದವ್ವು ಅವತ್ತು......."
"ಅಲ್ದಾ!!!" ಎನ್ನುತ್ತಾ ಮತ್ತೆ ತಡೆದರು.
ಸಿಟ್ಟಾದ ವಿಶ್ವ," ನಿನಗೆ ಪೂರ್ತಿ ಮಾತು ಕೆಳಕ್ಕೆ ಎಂತ ಖಾಯಿಲೆ. ಮಾತಾಡದೆ ಯೋಚನೆ ಹೊರಗಡೆ ಹೋಗ್ತಲ್ಲೇ. ಹೊರಗಡೆ ಹೋಗದೆ ಹೊಸದು ಒಳಗಡೆ ಬತಲ್ಲೆ. ಆವಾಗ ನೆಗೆಟಿವ್ ಥಿಂಕಿಂಗ್ ಶುರು ಆಗ್ತು. ನಿಂಗಕ್ಕೆಲ್ಲಾ ಅದೇ ಆಯ್ದು. ............."
ಓತಪ್ರೋತವಾಗಿ ಹೀಗೆ ವಿಶ್ವಣ್ಣ ವಿಶ್ವ ವಾಣಿ ಹೇಳುತ್ತಿದ್ದಾಗ ಅಲ್ಲಿಗೆ ನಾಣು ಬಂದ.  ಅವ ಬಂದ ಕೂಡಲೇ ಅವನ ಕಡೆ ತಿರುಗಿ, ಗಜಾನನ ಭಟ್ಟರು, "ಮಾಣಿ, ಕೆಳದಿ ಚನ್ನಮ್ಮನ ಬಗ್ಗೆ ಒಳ್ಳೆ ಲೇಖನ ಬರದ್ದೆ" ಎಂದರು.
"ಯಂದು ಎಂತದೂ ಇಲ್ಯಾ ಅದರಾಗೆ; ಎಲ್ಲಾ ವಿಶ್ವಣ್ಣ ಹೇಳಿದ್ದು." ಅಂದು ಬಿಟ್ಟ.

ವಿಶ್ವ ಪುಸಕ್ಕನೆ, ಗಜಾನನ ಭಟ್ಟನ ಮೇಲೆ ಹರಿಹಾಯ್ದ, "ಭಟ, ಸರಿ ಹೇಳಕ್ಕೂ ಯಾವ್ದಾರು ಒಂದ. ನಿನಗೆ ಬಿಡಿಸಿ ಹೇಳಕ್ಕೆ ಎಂತ ರೋಗ, ಕೆಳದಿ ಚನ್ನಮ್ಮ ಅಂತ. ಸರಿ ಕೇಳ್ಕಂಬ  ಅಭ್ಯಾಸ ಇಲ್ಲೆ. ಮತ್ತೆಂತ ಸರಿ ಮಾತಾಡ್ತಿ ನಿಂಗ. ನೆಗೆಟಿವ್ ಥಿಂಕಿಂಗ್ ತುಂಬಿ ಹೋದ್ರೆ ತಲೆ ಒಳಗೆ ಹೀಂಗೆ ಆಪದೆ ಸೈ. ತಂದೆಲ್ಲಿಡ್ಲಿ ಅಂತ ಮಾತು." ಎಂದು ಗುರುಗುಟ್ಟಿ ಹೊರಟ ಅಲ್ಲಿಂದ. ವಿಶ್ವನನ್ನು ಎಳವೆಯಿಂದ ಬಲ್ಲವರು ಗಜಾನನ ಭಟ್ಟರು. ಹಾಗಾಗಿ ಅವರೇನೋ ಅನ್ಯಥಾ ಭಾವಿಸಲಿಲ್ಲ.
ಆದರೆ ವಿಶ್ವ, ತನ್ನ ತಲೆಯಿಂದ ಇಳಿದ ಯೋಚನೆಗಳಿಗೆ ಬಡ್ಡಿ ಚಕ್ರಬಡ್ಡಿ ಸೇರಿಸಿ ತಲೆಗೇರಿಸಿಕೊಂಡ ಮತ್ತೆ.

# ವಿಶಾರದ ವಿಶ್ವನಾಥ-3