Tuesday, August 28, 2018

ಆರ್ಯ ದೌರ್ಜನ್ಯ ಮತ್ತು ತೆಂಗಿನಕಾಯಿ ಎನ್ನುವ ವಿಷ- ಒಂದು ಸಂಶೋಧನಾತ್ಮಕ ಲೇಖನ

ಭಾರತ ಬೌದ್ಧರ ನೆಲೆವೀಡಾಗಿತ್ತು. ಇಲ್ಲೊಂದು ಸಹಬಾಳ್ವೆಯ ಸೌಹಾರ್ದ ಭರಿತ ಸಂಸ್ಕೃತಿ ಇತ್ತು. ಜಾತಿ ಪದ್ಧತಿ ಇರಲಿಲ್ಲ. ಯಜ್ಞ ಯಾಗಾದಿಗಳಿಗೆ ಬೇಕಾಗಿ ಪ್ರಾಣಿ ಬಲಿ ಕೊಡುವ ಪದ್ಧತಿ ಇರಲಿಲ್ಲ. ಹವಿಸ್ಸಿಗಾಗಿ ತುಪ್ಪ ಮತ್ತು ಆಹಾರಧಾನ್ಯಗಳನ್ನು ಸುಡುವ ಪದ್ಧತಿ ಇಲ್ಲಿ ಇರಲೇ ಇಲ್ಲ. ಬೌದ್ಧ ಮತಾನುಯಾಯಿಗಳಾಗಿದ್ದ ಬಲಶಾಲಿ ಜನಾಂಗವೊಂದು ಇಲ್ಲಿ ವಾಸವಾಗಿತ್ತು. ನೆಲದ ಸಂಸ್ಕೃತಿಗೆ ದೈತ್ಯರ ಸಾಂಸ್ಕೃತಿಕ ನಡೆಗೆ ಧಕ್ಕೆ ತರುವ ಜನರೇ ದೈತ್ಯರ ಪ್ರಮುಖ ಆಹಾರವಾಗಿದ್ದರು. ಮತ್ತೆ, ಪ್ರಾಣಿಗಳೂ ಕೂಡಾ ತಮ್ಮ ಸಂಖ್ಯೆ ಅತಿಯಾದಾಗ ತಾವಾಗಿ ಬಂದು ಮನುಷ್ಯರ ಜನವಸತಿ ಇದ್ದಲ್ಲಿ ಬಂದು ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದವು. ಬೌದ್ಧಾನುಯಾಯಿಗಳಾದ ಕಾರಣ ಇಲ್ಲಿ ಬೇಟೆ ಎನ್ನುವುದು ಇರಲೇ ಇಲ್ಲ. ಪ್ರಾಣಿಗಳೂ ಮೋಕ್ಷವನ್ನು ಬಯಸಿ ದೇಹವನ್ನು ಇಲ್ಲಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದ ಅಸುರ-ದೈತ್ಯ-ದಾನವ-ಕಾಲಕೇಯ ಮೊದಲಾದ ಬೌದ್ಧಾನುಯಾಯಿ ಪಂಗಡಗಳಿಗೆ ಸಮರ್ಪಿಸಿಕೊಳ್ಳುತ್ತಿದ್ದವು. ಶಾಂತತೆ ಪ್ರಶಾಂತತೆ ಇಲ್ಲಿನವರ ಬದುಕಿನ ಗುರುತಾಗಿತ್ತು.

ಈ ಬೌದ್ಧಾನುಯಾಯಿ ದೈತ್ಯಾದಿ ಬುಡಕಟ್ಟುಗಳಲ್ಲಿ ಕೂಡಾ ಆತ್ಮ ಸಮರ್ಪಣೆಯ ಪದ್ಧತಿ ಇತ್ತು. ದುರ್ಬಲ ದೈತ್ಯರು ತಮ್ಮನ್ನು ತಾವೇ ಆಹಾರವಾಗಿ ಬಲಶಾಲಿ ದೈತ್ಯರಿಗೆ ಸಮರ್ಪಿಸುತ್ತಿದ್ದರು. ದೈತ್ಯರು ದಿನವೆಲ್ಲ ಶ್ರಮದಿಂದ ದುಡಿಯುತ್ತಿದ್ದರು. ಮೊದಲೇ ಬಲಿಷ್ಠವಾಗಿದ್ದ ದೈತ್ಯರ ದೇಹ ಈ ದುಡಿಮೆಯಿಂದ ಇನ್ನಷ್ಟು ಬಲಶಾಲಿಯಾಗುತ್ತಿತ್ತು. ಆದರೆ ಈ ದೈತ್ಯರು ತಮ್ಮ ಬಲಬನ್ನು ಎಂದಿಗೂ ಹಾಳು ಮಾಡುತ್ತಿರಲಿಲ್ಲ. ಇವರು ದುಡಿದು ಉತ್ಪಾದಿಸುತ್ತಿದ್ದ ಸ್ವರ್ಣ-ರತ್ನ-ರಜತ ಮೊದಲಾದ ಲೋಹಗಳನ್ನು ಪಶ್ಚಿಮ ಸಮುದ್ರದಲ್ಲಿ ಎಸೆದು ಬಿಡುತ್ತಿದ್ದರು. ಬುದ್ಧನ ಬೋಧೆಯಾದ ಆಸೆಯೇ ದುಃಖಕ್ಕೆ ಮೂಲ ಎನ್ನುವ ಒಂದೇ ಮಾತಿನ ಪ್ರಭಾವ ಆ ಜನಾಂಗದ ಮೇಲೆ ಈ ಪರಿಯಲ್ಲಾಗಿತ್ತು ಎಂದರೆ ಇಲ್ಲಿ ಬೌದ್ಧ ಧರ್ಮ ಯಾವ ಪರಿಯಲ್ಲಿ ರಾರಾಜಿಸುತ್ತಿತ್ತು ಎನ್ನುವ ಊಹೆ ಸಾಧ್ಯವಾಗುತ್ತದೆ.

ಮತ್ತೆ ಈ ದೈತ್ಯರು ಸದಾಕಾಲ ವೈಜ್ಞಾನಿಕ ಚಿಂತನೆಯಲ್ಲಿ ತೊಡಗಿದ್ದರು. ಆದರೆ ಈ ದೈತ್ಯರು ತಮ್ಮ ಶ್ರಮವನ್ನೆಲ್ಲಾ ನೀರಿಗೆ ಎಸೆಯುತ್ತಿದ್ದ ಕಾರಣದಿಂದ ಇವರಿಗೆ ಸಂಶೋಧನೆಯಲ್ಲಿ ಮುಂದುವರೆಯಲಾಗಲಿಲ್ಲ. ಕೃತಕ ವಿಷವೊಂದನ್ನು ಕಂಡು ಹಿಡಿಯಬೇಕು ಎನ್ನುವ ಇವರ ಆಸೆ ಈಡೇರಲೇ ಇಲ್ಲ. ಮೊದಲೇ ಹೇಳಿದಂತೆ ಇವರು ಬುದ್ಧನ ವಾಕ್ಯವಾದ ಆಸೆಯೇ ದುಃಖಕ್ಕೆ ಮೂಲ ಎನ್ನುವುದನ್ನು ಚಾಚೂ ತಪ್ಪದೆಯೇ ಅನುಸರಿಸುತ್ತಿದ್ದರು. ಅದರೆ ಇವರಲ್ಲಿಯೂ ಜನಸಂಖ್ಯೆ ಬೆಳೆಯಿತು. ಪ್ರಕೃತಿ ವಿಕೋಪದ ಕಾರಣದಿಂದ ಇಲ್ಲಿಯೂ ಆಹಾರ ಸಮಸ್ಯೆ ಶುರುವಾಯಿತು. ಆಗ ಕೆಲವು ದೈತ್ಯರು ಚೀನಾದ ಕಡೆ ಮುಖ ಮಾಡಿ ಹೊರಟು ಅಲ್ಲಿಯೂ ತಮ್ಮ ಶ್ರಮ ಜೀವನವನ್ನು ಮುಂದುವರೆಸಿ ಬೌದ್ಧಾನುಯಾಯಿಯಾಗಿಯೇ ಉಳಿದರು. ಅಲ್ಲಿನ ಚಳಿಯ ವಾತಾವರಣದಲ್ಲಿ ಪ್ರಾಣಿಗಳು ಅಷ್ಟಾಗಿ ಸಿಗದ ಕಾರಣ ಸರೀಸೃಪ, ಕೀಟ ಮೊದಲಾದವು ಇವುಗಳ ಆಹಾರವಾಗಿ ಮುಂದುವರೆದವು.

ಕೆಲವು ದೈತ್ಯರು ಪಶ್ಚಿಮಾಭಿಮುಖವಾಗಿ ಹೊರಟರು. ಇನ್ನೂ ಕೆಲವು ದೈತ್ಯರು ನೆಲದ ಮೇಲಿನ ಅಭಿಮಾನದಿಂದ, ತಮ್ಮ ದೌರ್ಬಲ್ಯದ ಕಾರಣದಿಂದ ಇಲ್ಲಿಯೇ ನೆಲೆನಿಂತರು. ಮೊದಲೇ ಹೇಳಿದ ಹಾಗೆ ದೈತ್ಯರು ತಮ್ಮ ದುಡಿಮೆಯನ್ನೆಲ್ಲಾ ಸಮುದ್ರಕ್ಕೆ ಎಸೆದುಬಿಡುತ್ತಿದ್ದರು. ಅವುಗಳನ್ನು ಜಲಚರಗಳು ತಿಂದು ಉರಿ ತಾಳಲಾಗದೆ ದಡದ ಕಡೆ ಹೋಗಿ ಸಾಯುತ್ತಿದ್ದವು. ಆ ಜಲಚರಗಳನ್ನು ಸಮುದ್ರದ ಆಚೆ ತಡಿಯಲಿದ್ದ ಆರ್ಯರೆನ್ನುವ ಸೋಂಬೇರಿ ಜನಾಂಗವೊಂದರ ಬುಡಕಟ್ಟೊಂದು ಸೇವಿಸುತ್ತಿತ್ತು. ಆ ಜಲಚರಗಳಲ್ಲಿ ಸಿಗುತ್ತಿದ್ದ ರತ್ನ ಸ್ವರ್ಣಗಳನ್ನು ಆರ್ಯರಲ್ಲಿಯೇ ಒಂದು ಜಾತಿಯಾಗಿದ್ದ ಬ್ರಾಹ್ಮಣರು ಬೆದರಿಸಿ ತಮ್ಮದಾಗಿಸಿಕೊಂಡು ಅವುಗಳಿಂದ ಆಭರಣಗಳನ್ನು ಮಾಡಿಸಿಕೊಂಡು ತೊಡುತ್ತಿದ್ದರು. ಈ ಬ್ರಾಹ್ಮಣರು ಮಾಡುವ ಉದ್ಯೋಗಗಳ ಆಧಾರದ ಮೇಲೆ ಸಮಾಜವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಒಡೆದಿದ್ದರು. ಉಳಿದ ಜನಾಂಗಗಳಲ್ಲಿ ತಮ್ಮ ಕುರಿತಾದ ಭಯ ಸದಾಕಾಲ ಇರಬೇಕು ಎನ್ನುವ ಕಾರಣದಿಂದ ದೇವರು ಎನ್ನುವ ಅಶುದ್ಧ ಹಾಗೂ ಅನೇಕಾಂತವಾದದ ವಿರುದ್ಧದ ಕಲ್ಪನೆಯನ್ನು ಬಿತ್ತಿ ಭಯವನ್ನು ಹುಟ್ಟಿಸಿ ತಮ್ಮ ಉನ್ನತ ಸ್ಥಾನವನ್ನು ಕಾಪಿಟ್ಟುಕೊಂಡಿದ್ದರು. ಇವರು ಮತ್ತೊಬ್ಬರ ಮೇಲಿನ ದಬ್ಬಾಳಿಕೆಯಿಂದ ಸಂಪಾದಿಸಿದ್ದ ಧನಕನಕಗಳನ್ನು ರಕ್ಷಿಸಿಕೊಳ್ಳಲು ಇಡುತ್ತಿದ್ದ ಜಾಗಗಳೇ ಮುಂದೆ ದೇವಾಲಯಗಳಾಗಿದ್ದು. ಹಣಕ್ಕೆ ಸದಾಕಾಲ ಲಕ್ಷ್ಯ ಕೊಡುತ್ತಿದ್ದರು. ಸದಾ ಇವರ ಲಕ್ಷ್ಯವನ್ನು ಪಡೆಯುತ್ತಿದ್ದುದರಿಂದ ಧನಕ್ಕೆ ಲಕ್ಷ್ಮೀ ಎನ್ನುವ ಹೆಸರಿಟ್ಟು ಅದನ್ನು ದೇವರಾಗಿಸಿದರು.

ಇದೇ ಬ್ರಾಹ್ಮಣರು ತಮ್ಮ ಧನಕನಕಗಳನ್ನು ರಕ್ಷಿಸಿಕೊಳ್ಳಲೋಸುಗ ಬಲಶಾಲಿ ಜನರನ್ನು ಸಂಘಟಿಸಿ ಅವರನ್ನು ಕ್ಷತ್ರಿಯರೆಂದು ಕರೆದರು. ತಮ್ಮ ಧನಕನಕಗಳ ವಿಕ್ರಯಕ್ಕೆ ಬೇಕಾಗಿ ವ್ಯವಹಾರ ಚಾತುರ್ಯ ಹೊಂದಿದ್ದವರನ್ನು ಆರಿಸಿ ಇನ್ನೂ ಪಶ್ಚಿಮದತ್ತ ವ್ಯಾಪಾರಕ್ಕೆ ಕಳುಹಿಸುತ್ತಿದ್ದರು. ಆಹಾರಧಾನ್ಯಗಳು ಅವಶ್ಯಕತೆ ಮೀರಿ ಶೇಖರಿಸಲ್ಪಟ್ಟಾಗ ಎಲ್ಲರೂ ಸೇರಿ ಅದನ್ನು ದಹನ ಮಾಡುತ್ತಿದ್ದರು. ಈ ಕಾರ್ಯಕ್ಕೆ ಯಜ್ಞ ಎನ್ನುವ ಹೆಸರಿತ್ತು.

ಬ್ರಾಹ್ಮಣರು ಕ್ಷತ್ರಿಯರಿಗೆ ಯುದ್ಧದ ತರಬೇತಿಯನ್ನು ನೀಡುತ್ತಿದ್ದರು. ಬ್ರಾಹ್ಮಣರಿಗೆ ಇವರ ಕುತಂತ್ರದ ಭಾಗವಾದ ಮಂತ್ರ-ತಂತ್ರಗಳನ್ನು ಬೋಧಿಸುತ್ತಿದ್ದರು. ವೈಶ್ಯರಿಗೆ ವ್ಯಾಪಾರವನ್ನೂ ಶೂದ್ರರಿಗೆ ಶ್ರಮವನ್ನೂ ಬೋಧಿಸುತ್ತಿದ್ದರು. ಈ ಬೋಧನೆ ತರ್ಬೇತಿ ನಡೆಯುತ್ತಿದ್ದ ಸ್ಥಳಗಳನ್ನು ಗುರುಕುಲ ಎಂದು ಕರೆಯುತ್ತಿದ್ದರು. ಇಲ್ಲಿ ಒಬ್ಬರ ತರಬೇತಿಗೆ ಮತ್ತೊಬ್ಬ ಹೋಗುವಂತಿರಲಿಲ್ಲ. ಹೀಗೆ ವಿದ್ಯೆ ಕಲಿಸುವಲ್ಲೂ ಬ್ರಾಹ್ಮಣರು ಬೇಧ ಭಾವ ತೋರಿಸುತ್ತಿದ್ದರು. ಶೂದ್ರರನ್ನು ಸದಾಕಾಲ ದುಡಿಯುತ್ತಲೇ ಇರಬೇಕು ಎಂದು ದಂಡಿಸುತ್ತಿದ್ದರು. ಶೂದ್ರರು ಪ್ರತಿಭಟನೆಗೆ ಮುಂದಾಗುವುದನ್ನು ತಿಳಿದುಕೊಳ್ಳಲು ಗೂಢಚಾರರ ಪಡೆಯೇ ಇತ್ತು. ಈ ಗೂಢಚಾರರ ಪಡೆ ಅದೆಷ್ಟು ಗೂಢವಾಗಿತ್ತು ಎಂದರೆ ಅದನ್ನು ಯಾರೂ ನೋಡಿರಲಿಲ್ಲ. ಆ ಗೂಢಚಾರರ ಪಡೆಗೆ ದಿವ್ಯದೃಷ್ಟಿ ಎನ್ನುವ ಹೆಸರಿತ್ತು.

ಬ್ರಾಹ್ಮಣರಲ್ಲಿಯೂ ಎರಡು ವಿಧಗಳಿದ್ದವು. ಒಂದು ಲೌಕಿಕ ಬ್ರಾಹ್ಮಣರು ಮತ್ತೊಂದು ವೈದಿಕ ಬ್ರಾಹ್ಮಣರು. ಸ್ವಲ್ಪವೂ ದುಡಿಯಲಾಗದೇ, ಬುದ್ಧಿಯೂ ಕಡಿಮೆಯಿದ್ದ ಬ್ರಾಹ್ಮಣರನ್ನು ವೈದಿಕ ಬ್ರಾಹ್ಮಣರು ಎಂದು ಕರೆಯಲಾಗುತ್ತಿತ್ತು. ಈ ಬ್ರಾಹ್ಮಣರು ಕಾಡಿನಲ್ಲಿ ಸದಾಕಾಲ ಮಡಿವಸ್ತ್ರವುಟ್ಟು ಮಮ್ತ್ರಗಳನ್ನು ಪಠಿಸುತ್ತಾ ಕೂರುತ್ತಿದ್ದರು. ಇವರು ಹೇಳಿದ್ದ ಮಾತುಗಳನ್ನು ನಡೆಸುತ್ತಾ, ಇವರು ಕಂಡು ಹಿಡಿದ ಮಂತ್ರಗಳನ್ನು ಉಪಯೋಗಿಸಿ ಸಮಾಜದಲ್ಲಿ ಮೌಢ್ಯವನ್ನು ಬಿತ್ತುತ್ತ ವೈಜ್ಞಾನಿಕ ಚಿಂತನೆಗಳನ್ನು ಲೌಕಿಕ ಬ್ರಾಹ್ಮಣರು ಕೊಲ್ಲುತ್ತಿದ್ದರು. ವೈದಿಕ ಬ್ರಾಹ್ಮಣರನ್ನು ಋಷಿಗಳು ಎಂದೂ ಕರೆಯುತ್ತಿದ್ದರು. ಶ್ರಮಿಕ ಸಮಾಜದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಲು ಬ್ರಾಹ್ಮಣರು ಜ್ಯೋತಿಷ್ಯ ಎನ್ನುವ ತರ್ಕಹೀನ ವಿಚಾರದ ಮೂಲಕ ಬೆಳೆ ಮಳೆಗಳನ್ನು ನಿರ್ಧರಿಸುತ್ತಿದ್ದರು.

ಈ ಎಲ್ಲಾ ಕ್ರಿಯೆಗಳಿಂದ ಆರ್ಯರ ಮಧ್ಯೆ ಅಸಹನೆಯೊಂದು ಹೊಗೆಯಾಡುತ್ತಿತ್ತು. ಇಷ್ಟರಲ್ಲಿ ಆಹಾರ ಧಾನ್ಯಗಳನ್ನು ಬೆಂಕಿಗೆ ಎಸೆದ ಪರಿಣಾಮ ಆಹಾರದ ಕೊರತೆ ಉಂಟಾಯಿತು. ಇದನ್ನೆಲ್ಲಾ ನೋಡಿದ ಬೌದ್ಧ ದೈತ್ಯರ ಮನಸ್ಸು ಕರಗಿತು. ತಮ್ಮ ಸುಭಿಕ್ಷ ಭರಿತ ಭೂಮಿಯಾದ ಭಾರತಕ್ಕೆ ಆರ್ಯರನ್ನು ಕರೆತರಲು ಮುಂದಾದರು. ಆದರೆ ಆರ್ಯರು ಹೊರಗಿನಿಂದ ಬಂದಿದ್ದ ದೈತ್ಯರನ್ನು ನಂಬಲಿಲ್ಲ. ಅನೇಕ ಸುತ್ತಿನ ಮಾತುಕತೆಗಳಾಗಿ, ನಂತರದಲ್ಲಿ ಋಷಿ ಜೀವನವನ್ನು ನಡೆಸುತ್ತಿದ್ದ ಏಳು ವೈದಿಕ ಬ್ರಾಹ್ಮಣರನ್ನು ಆಯ್ದ ಕೆಲವು ದೈತ್ಯರೊಂದಿಗೆ ಭಾರತಕ್ಕೆ ಕಳುಹಿಸಲಾಯಿತು.

ಇಲ್ಲಿನ ಶಾಂತತೆ ಪ್ರಶಾಂತತೆಗಳು ಆ ಬ್ರಾಹ್ಮಣರಿಗೆ ಪಥ್ಯವಾಗಲಿಲ್ಲ. ಇದನ್ನು ಹದಗೆಡಿಸಲು ಮುಂದಾದರು. ಈ ಮಧ್ಯೆ ಆರ್ಯರ ಇನ್ನೊಂದು ಗುಂಪು ಭಾರತಕ್ಕೆ ಬಂತು. ನಂತರ ಅನೇಕ ಗುಂಪುಗಳೂ ಬಂದವು. ಅವರನ್ನು ಉಪಯೋಗಿಸಿಕೊಂಡು ಸ್ವಭಾವತಃ ಶಾಂತಿಪ್ರಿಯರಾಗಿದ್ದ ದೈತ್ಯ ಬೌದ್ಧರ ಸಂಸ್ಕೃತಿಯನ್ನು ಹಾಳುಮಾಡತೊಡಗಿದರು. ಶಾಂತಿ ಪ್ರಿಯರಾಗಿದ್ದ ದೈತ್ಯರಲ್ಲಿ ಕೆಲವರು ಆರ್ಯರ ಸಾರ್ವಭೌಮತ್ವವನ್ನೊಪ್ಪಿದರೆ ಇನ್ನು ಕೆಲವರು ನಿರ್ಲಿಪ್ತರಾಗಿ ಕುಳಿತರು. ಆದರೆ ಕೆಲವರು ಸಹಿಸಲಸಾಧ್ಯವಾದ ದಬ್ಬಾಳಿಕೆಯನ್ನು ಪ್ರತಿಭಟಿಸಿದರು. ಇದು ಅಸಹಿಷ್ಣುತೆಯಲ್ಲ. ಅದು ಏನಿದ್ದರೂ ಆರ್ಯರ ಮನೋಭಾವ. ದೈತ್ಯರು ಮಾಡಿದ್ದು ಅಸತ್ಯ-ಅಸಮಾನತೆ-ಅಪಮಾನಗಳ ವಿರುದ್ಧದ ಹೋರಾಟ. ಆದರೆ, ಯುದ್ಧ ಎಂದರೆ ಏನು ಎಂದೇ ತಿಳಿಯದ ದೈತ್ಯರು ಆರ್ಯರ ಎದುರು ಸೋಲಲೇ ಬೇಕಾಯಿತು. ಗೆದ್ದ ಆರ್ಯರು ತಮ್ಮ ಹೋಮ ಹವನ ಪೂಜೆ ಪುನಸ್ಕಾರ ಮೊದಲಾದ ಅರ್ಥಹೀನ ಆಚರಣೆಗಳನ್ನು ಇಲ್ಲಿಯೂ ಮುಂದುವರೆಸಿದರು.

ಅತಿ ಅಹಂಕಾರಿಗಳೂ ಅಭಿಮಾನಿಗಳೂ ಆಗಿದ್ದ ಆರ್ಯರು ಇಲ್ಲಿನ ಆಹಾರ ಪದ್ಧತಿಯನ್ನು ಒಪ್ಪಲಿಲ್ಲ. ಮೇಲಾಗಿ ಇಲ್ಲಿ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಿದ್ದ ಪ್ರಾಣಿಗಳನ್ನು ಸೇವಿಸಿ ದೈತ್ಯರು ಬಲಾಢ್ಯರಾಗಿದ್ದನ್ನು ಆರ್ಯರು ತಿಳಿದರು. ಅದರಲ್ಲಿಯೂ ಗೋ ಮಾಂಸ ಭಕ್ಷಣೆ ಇವರ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಅರಿತ ಬ್ರಾಹ್ಮಣರು ಸ್ಮೃತಿ ಎನ್ನುವ ಶಾಸನದಿಂದ ದೈತ್ಯರ ಆಹಾರ ಪದ್ಧತಿಯ ಮೇಲೆ ಸಾಂಸ್ಕೃತಿಕ ಪ್ರಹಾರವನ್ನು ಮಾಡಿದರು. ಗೋ ಮಾಂಸವನ್ನು ಸೇವಿಸುವುದು ಅಪರಾಧ ಎನ್ನುವ ಕಾನೂನು ಮಾಡಿದರು. ಹಿಂಸಾ ಪ್ರವೃತ್ತಿಯವರಾಗಿದ್ದ ಆರ್ಯರು ಗೋವನ್ನು ಹಿಂಸಿಸಲಾಗಿಯೇ ಅದರ ಹಾಲನ್ನು ದೇವರಿಗೆ ಅಭಿಷೇಕ ಮಾಡುವ ಮತ್ತು ಅದನ್ನು ಸೇವಿಸುವ ಪದ್ಧತಿಯನ್ನು ಅನುಸರಿಸಿದರು.

ಆರ್ಯರು ಇಲ್ಲಿಗೆ ಬರುವಾಗ, ತಮ್ಮ ನೆಲವಾದ ಪಾಶ್ಚಾತ್ಯ ಭೂ ಖಂಡದಲ್ಲಿ ಬೆಳೆಯುತ್ತಿದ್ದ ಖರ್ಜೂರದಂತಹ ಹಣ್ಣೊಂದರ ಬೀಜವನ್ನು ತಮ್ಮ ಜೊತೆಗೆ ತಂದಿದ್ದರು. ಆ ಬೀಜವನ್ನು ಉತ್ತರ ಭಾಗದಲ್ಲಿ ಬಿತ್ತಿದಾಗ ಅದು ಅಷ್ಟಾಗಿ ಬೆಳೆಯಲಿಲ್ಲ. ಆಗಾಗಲೇ ದಕ್ಷಿಣದ ಕಡೆ ಮುಖ ಮಾಡಿದ್ದ ಆರ್ಯರಿಗೆ ದಕ್ಷಿಣದ ಪ್ರಸ್ಥಭೂಮಿ ವರವಾಗಿ ಪರಿಣಮಿಸಿತು. ಬಂದಿದ್ದ ಸಪ್ತರ್ಷಿಗಳಲ್ಲಿ ಒಬ್ಬನಾಗಿದ್ದ ಜಮದಗ್ನಿ ಎನ್ನುವವನ ಮಗ ರಾಮ ಎನ್ನುವವ ಇಲ್ಲಿದ್ದ ಬೌದ್ಧರನ್ನೆಲ್ಲಾ ಹುಡುಕಿ ಹುಡುಕಿ ಕೊಂದು ಆ ಕ್ಷೇತ್ರವನ್ನು ತನ್ನದಾಗಿಸಿಕೊಂಡನು. ಆತನು ಮಹಾ ಜಾತಿಪ್ರೇಮಿ ಬ್ರಾಹ್ಮಣನಾಗಿದ್ದ. ಕೈನಲ್ಲಿ ಸದಾ ಕೊಡಲಿಯನ್ನು ಹಿಡಿದು ಬೌದ್ಧರನ್ನು ಕೊಲ್ಲುತ್ತಾ ಸಾಗುತ್ತಿದ್ದ. ಆತನ ಉಪಕಾರವನ್ನು ನೆನೆಸಿ ಆರ್ಯರು ಕಥೆಗಳನ್ನು ಕಟ್ಟಿ ಆ ಕ್ಷೇತ್ರವನ್ನು ಪರಶುರಾಮ ಕ್ಷೇತ್ರ ಎಂದು ಕರೆದರು.

ಆ ಪರಶುರಾಮ ಕ್ಷೇತ್ರದಲ್ಲಿ ತಂದಿದ್ದ ಆ ಕಾಯಿಗಳನ್ನು ನೆಟ್ಟರು. ಆದರೆ ಆ ಕಾಯಿಗಳು ಗಾತ್ರದಲ್ಲಿ ಬಹಳವಾಗಿ ಬೆಳೆದವು. ಸಸ್ಯಗಳೂ ಕೂಡ ಆರ್ಯರ ಕೈನಲ್ಲಿ ಸಿಕ್ಕಿ ನಲುಗಿದ್ದರ ಪರಿಣಾಮ ಇದು. ಅದರ ಅಗಾಧ ಗಾತ್ರದ ಬೆಳವಣಿಗೆಯನ್ನು ಕಂಡು ದಂಗಾದ ಆರ್ಯರು ಅದನ್ನು ದಂಗು ಫಲ ಎಂದು ಕರೆದರು. ಮುಂದೆ ಇದೇ ತಂಗಿನ ಫಲ ಎಂದಾಯಿತು. ಇಷ್ಟಕ್ಕೇ ಸುಮ್ಮನಾಗದ ಆರ್ಯರು ಆ ಸಸ್ಯದ ಮೇಲೆ ಜೈವಿಕ ಪ್ರಯೋಗಗಳನ್ನು ನಡೆಸಿದರು. ಜೊತೆಯಲ್ಲಿಯೇ ನಡೆಯುತ್ತಿದ್ದ ಹೋಮ ಹವನ ಮೊದಲಾದ ಅನಾಗರಿಕ ಆಚರಣೆಗಳಿಂದ ಈ ಕಾಯಿ ವಿಷವಾಗಿ ಪರಿಣಮಿಸಿತು. ಶಿವ ಎನ್ನುವ ಅಲೆಮಾರಿ ಆರ್ಯನೊಬ್ಬ ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುವುದಕ್ಕಾಗಿ ಒಮ್ಮೆ ಈ ಕಾಯಿಗಳನ್ನು ತಿಂದನು. ಆದರೆ ಅದರಲ್ಲಿದ್ದ ವಿಷದ ಪರಿಣಾಮ, ಆತ ಅತಿಯಾದ ವಿಷದ ಬಾಧೆಗೆ ಈಡಾದ. ಬಾಧೆಯನ್ನು ತಾಳಲಾಗದೆ ಹಿಮವತ್ಪರ್ವತದಲ್ಲಿ ವಾಸಿಸತೊಡಗಿದ.

ಆರ್ಯರು ತಮ್ಮ ಷಡ್ಯಂತ್ರ ಮತ್ತು ಕುತಂತ್ರಗಳನ್ನು ಸಾಧಿಸುವುದಕ್ಕಾಗಿ ಈ ಘಟನೆಯನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡರು. ಹಿಮವತ್ಪರ್ವತವನ್ನು ಸೇರಿದ ಶಿವ ವಿಷ ಬಾಧೆಗೆ ಒಳಗಾಗಿದ್ದು ಎಲ್ಲ ಬೌದ್ಧ ಅಸುರರಿಗೂ ತಿಳಿದಿತ್ತು. ಆದರೆ ಅವರಿಗೆ ವಿಷದ ಮೂಲ ಗೊತ್ತಿರಲಿಲ್ಲ. ಬೌದ್ಧರ ಈ ಮುಗ್ಶತೆಯನ್ನು ಅನೇಕಾಂತವಾದದ ನೆಲೆಯಲ್ಲಿ ನೋಡದ ಆರ್ಯರು, ಸಮಾಜವಾದ ಮತ್ತು ಸಮತಾವಾದದ ನೆಲೆಯಲ್ಲಿ, ಕಾರ್ಲ್ ಮಾರ್ಕ್ಸ್, ಬುದ್ಧ ಬಸವಣ್ಣ, ಸರ್ವಜ್ಞ, ಗಾಂಧೀಜಿ, ಲೋಹಿಯಾ,ಅಂಬೇಡ್ಕರ್, ಕ್ರಿಸ್ತ, ಕ್ಯಾಸ್ಟ್ರೋ ಮೊದಲಾದ ಬುದ್ಧಿಜೀವಿಗಳ ಚಿಂತನೆಯನ್ನು ಹೊರಗಿಟ್ಟು ತಮ್ಮ ಬಂಡವಾಳಷಾಹಿ ಪ್ರವೃತ್ತಿಗೆ ಚೆನ್ನಾಗಿ ಬಳಸಿಕೊಂಡರು. ಶಿವನನ್ನು ನಂಜುಂಡ, ವಿಷ ಕಂಠ ಎಂದು ಕರೆದರು. ಅವನನ್ನು ದೇವರನ್ನಾಗಿಸಿದರು. ಆದರೆ ಸತ್ಯ ಹೊರ ಬಂದೀತು ಎನ್ನುವ ಹೆದರಿಕೆಯಿಂದ ಶಿವನ ಸುತ್ತ ತಮ್ಮ ನುಮಾಯಿಂದರನ್ನು ಇಟ್ಟರು. ಅವರನ್ನೇ ಹರಗಣ ಎಂದು ಕರೆದರು. ಭೂತ ಪ್ರೇತ ಮೊದಲಾದ ಮೌಢ್ಯವನ್ನು ಬೆಳೆಸಲು ಶಿವನು ಸ್ಮಶಾನವಾಸಿ ಎಂದೂ ಕರೆದರು. ಮಧ್ಯೆ ತಡೆಯಾಗಲು ಕೆಲವು ಋಷಿಗಳನ್ನೂ ಹಿಮವತ್ಪರ್ವತಕ್ಕೆ ಕಳಿಸಿಕೊಟ್ಟರು.

ಈ ಕಡೆಯಲ್ಲಿ ದೇವರಿಗೆ ತೆಂಗಿನ ಕಾಯಿ ಅರ್ಪಿಸುವುದು ಶ್ರೇಷ್ಠ ಎಂದು ಬಿಂಬಿಸಲು ಪುರಾಣದ ಕತೆ, ಶಾಸ್ತ್ರ ಸ್ಮೃತಿಗಳನ್ನು ರಚಿಸಿದರು. ತಾವು ಬೆಳೆದ ತೆಂಗಿನಕಾಯಿಯನ್ನು ಮಾರಾಟ ಮಾಡಲು ದೇವರನ್ನು ಬಳಸಿಕೊಂಡರು ಆರ್ಯರು. ಇಲ್ಲಿ ಆರ್ಯರ ಎರಡು ಷಡ್ಯಂತ್ರಗಳಿದ್ದವು. ಒಂದು ತಾವು ಬೆಳೆದ ತೆಂಗಿನಕಾಯಿಯನ್ನು ಮಾರುವುದು ಮತ್ತೊಂದು ಅದನ್ನು ಸೇವಿಸಿದ ಬೌದ್ಧ-ದೈತ್ಯ-ಅಸುರ-ರಕ್ಕಸ-ದಾನವ-ಕಾಲಕೇಯ ಸಮಾಜದವರು ಇಲ್ಲದಂತೆ ಮಾಡುವುದು. ವಿಷ ಸೇವಿಸಿದವರು ಮತ್ತೆ ಬದುಕುವುದಕ್ಕುಂಟೇ? ಇಲ್ಲವಲ್ಲ. ಆದರೆ ಅರೆಬೆಂದ ಆರ್ಯರಿಗೆ ಬೌದ್ಧರ ಆಹಾರ ಪದ್ಧತಿ ತೆಂಗಿನಕಾಯಿಯಲ್ಲಿದ್ದ ವಿಷವನ್ನು ಶಮಿಸುವ ಸಾಮರ್ಥ್ಯ ಹೊಂದಿರುವುದು ತಿಳಿದಿರಲಿಲ್ಲ. ಹಾಗಾಗಿ ಬೌದ್ಧರು ಉಳಿದುಕೊಂಡರು, ತಮ್ಮ ಜೀವನ ಶೈಲಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದರಿಂದ ಮತ್ತು ಆರ್ಯರ ಜೈವಿಕ ಪ್ರಯೋಗಗಳು, ಹೋಮ ಹವನಗಳಿಂದಾದ ವಾಯು ಮಾಲಿನ್ಯದಿಂದ ದೊಡ್ಡ ದೇಹವನ್ನು ಹೊಂದಿದ್ದ ದೈತ್ಯರು ಕುಬ್ಜರಾದರು. ಆರ್ಯರು ಅವರನ್ನು ತುಳಿದರು. ತುಳಿಯುತ್ತಲೇ ಇದ್ದಾರೆ.

ಆದರೆ ಬೌದ್ಧ ಬಾಂಧವರೇ, ಈಗ ಈ ಆರ್ಯರ ಷಡ್ಯಂತ್ರ ಬಯಲಾಗಿದೆ. ಅದೂ ಮತ್ತೊಂದು ಬಂಡವಾಳಷಾಹಿ ದೇಶವಾದ ಅಮೆರಿಕದ ಮೂಲಕ. ಭಾರತದ ಭಕ್ತರೆಲ್ಲರ ಪ್ರೀತಿಯ ಪ್ರಧಾನಿ ಈ ವಿಚಾರವನ್ನು ಗುಪ್ತವಾಗಿಡಲು ಅಮೆರಿಕಾದ ಜೊತೆ ಮಾತಾಡಲೆಂದೇ ಇಷ್ಟೆಲ್ಲಾ ವಿದೇಶ ಯಾತ್ರೆ ಮಾಡಿದ್ದು. ಅಮೆರಿಕಾದ ವಿಜ್ಞಾನಿ ಮಾಡಿದ್ದ ಈ ಸಂಶೋಧನೆ ನಿಜವಾಗಿ ರಷಿಯಾ ದೇಶದ್ದು. ಮಹಾಕಾಲಿ ಕೈಕಾಲ್ ನೋವ್ ಎನ್ನುವ ರಷಿಯಾದ ವಿಜ್ಞಾನಿ ಇದನ್ನು ಕಂಡು ಹಿಡಿದು ಕೊರಿಯಾ ಯುದ್ಧದಲ್ಲಿ ಅಮೆರಿಕಾ ವಿರುದ್ಧ ಜೈವಿಕ ಅಸ್ತ್ರವಾಗಿ ಬಳಸಲು ನೋಡಿದ್ದ, ಆದರೆ ಹೇಗೋ ಸುಳಿವು ಪಡೆದ ಅಮೆರಿಕಾ ಆತನನ್ನು ಗೂಢಚಾರಿಗಳ ಮೂಲಕ ಕೊಲ್ಲಿಸಿತ್ತು, ನಂತರ ರಷಿಯಾಕ್ಕೆ ಕೆರಳದಲ್ಲಿ ಇದನ್ನು ಬೆಳೆಯುತ್ತಿರುವುದು ಮತ್ತು ಕೇರಳ ಸಮಾಜವಾದದ ನೆಲೆಯಲ್ಲಿ ಸಮತಾವಾದವನ್ನು ಅನೇಕಾಂತವಾದದ ಹಿನ್ನೆಲೆಯಲ್ಲಿ ಆಚರಿಸುತ್ತಾ ಬಂಡವಾಳಶಾಹಿಗಳನ್ನು ದೂರ ಇಡುತ್ತಿರುವುದು ತಿಳಿದು, ಅಲ್ಲಿನ ಶ್ರಮ ಸಂಸ್ಕೃತಿಗೆ ಗೌರವ ಕೊಟ್ಟು ಈ ಸಂಗತಿಯನ್ನು ಅಲ್ಲಿದ್ದವರ ಬದುಕಿಗೆ ಅನುಕೂಲವಾಗಲಿ ಎಂದು ಮುಚ್ಚಿಟ್ಟಿದ್ದರು.

ಆದರೆ ಬೌದ್ಧ ಬಂಧುಗಳೆ ನಮಗೀಗ ಆ ಶುಭಕಾಲ ಬಂದಿದೆ. ತಲತಲಾಂತರದಿಂದ ನಮ್ಮನ್ನು ಶೋಷಿಸಿದ ಈ ತೆಂಗಿನಕಾಯಿ ವಿಷ ಎನ್ನುವುದು ಜಗಜ್ಜಾಹೀರಾಗಿದೆ. ನಾವೆಲ್ಲರೂ ದೇವಸ್ಥಾನಗಳಿಗೆ ಹೋಗುವುದನ್ನು ಬಿಟ್ಟಾಗಿದೆ. ಇನ್ನು ಈ ತೆಂಗಿನಕಾಯಿ ಎನ್ನುವ ಆರ್ಯ ನಿರ್ಮಿತ ವಿಷವನ್ನೂ ವರ್ಜಿಸೋಣ. ತೆಂಗಿನಕಾಯಿ ವಿಷ. ಅದನ್ನು ಬಳಸದೇ ಸಾವಿರಾರು ವರ್ಷಗಳಿಂದ ಆರ್ಯರು ನಮ್ಮ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳೋಣ. ರಸ್ತೆಯಲ್ಲಿರುವ ತೆಂಗಿನ ಕಾಯಿಗಳನ್ನೆಲ್ಲ ಭಗವದ್ಗೀತೆ ಸುಟ್ಟಂತೆಯೇ ಸುಟ್ಟು ಆರ್ಯರಿಗೆ ಆಹಾರವಿಲ್ಲದಂತೆ ಮಾಡೋಣ. ನಮ್ಮನ್ನು ಶೋಷಿಸಿದ ಬ್ರಹ್ಮಣರು ಪೂಜೆಗೆ ತೆಂಗಿನ ಕಾಯಿ ಕೊಡುವವರಿಲ್ಲದೆ ಒದ್ದಾಡುವಂತೆ ಮಾಡೋಣ.

ಅಂದು ಇಕ್ರಲಾ ವದಿರ್ಲಾ
ಇಂದು ಎತ್ಕಳ್ರಲಾ ಬಿಸಾಡ್ರಲಾ

ನಾನು ಕೆಂಪಂಗಿ ಬಿಚ್ಚಿಟ್ಟು ಬಹಳ ಕಾಲವಾಗಿದೆ. ಅದನ್ನು ಮತ್ತೆ ತೊಡುವುದೂ ಇಲ್ಲ. ಆದರೆ ತೆಂಗಿನಕಾಯಿ ವಿಷ ಎನ್ನುವ ಮೂಢ ಸಂಶೋಧನೆಯನ್ನು ಸೈಟು ಅಥವಾ ಮತ್ತೇನಾದರೂ ಬೇಕಾದ ಗಂಜಿ ಪಾಷಂಡಿ ಹೇಗೆಲ್ಲಾ ಬಳಸಬಹುದು ಅಂತ ಯೋಚನೆ ಬಂದಾಗ ಮೂಡಿದ ಕಲ್ಪನೆಗಳು ಇವು.

Monday, August 27, 2018

ಬಿಳಿಬಾತು


ನಿತ್ಯವೂ ಎದುರಾಗುವ ಅದೆಷ್ಟೋ ಸಂಗತಿಗಳು ನಮಗರಿವಿಲ್ಲದೆಯೇ ನಮ್ಮ ಪಾಲಿಗೆ ಆಕರ್ಷಣೀಯವೂ ಅಪ್ಯಾಯಮಾನವೂ ಆಗುತ್ತವೆ. ನಮಗೇ ಅರಿವಿಲ್ಲದಂತೆ ಒಂದು ರೀತಿಯ ಅಬ್ಸೆಷನ್ ಒಂದು ರೀತಿಯ ಅಡಿಕ್ಷನ್ ಹುಟ್ಟಿಬಿಡುತ್ತದೆ. ನನಗೆ ಈ ರೀತಿಯ ಅಬ್ಸೆಷನ್ ಬೆಳೆದಿದ್ದು ಚಿಪ್ಪಳಿ ಕೆರೆಯ ಬಗ್ಗೆ. ಅದೇನು ಯಾಕೆ ಎನ್ನುವ ಪ್ರಷ್ನೆ ನನ್ನನ್ನು ಎಂದಿಗೂ ಕಾಡಲಿಲ್ಲ ಆದರೆ ಅದಕ್ಕೆ ಉತ್ತರ ಸಿಕ್ಕಿತು. ವಿಶೇಷದ ಸಂಗತಿ ಎಂದರೆ ಆ ಉತ್ತರ ನನಗೆ ಸಿಕ್ಕಿದೆ ಎನ್ನುವುದರ ಅರಿವು ನನ್ನ ಪಾಲಿಗಾಗಿದ್ದು ನಾನು ಹಕ್ಕಿಗಳ ಬಗ್ಗೆ ಬರೆಯಹೊರಟಾಗಿನಿಂದ. ಚಿಪ್ಪಳಿ ಜೆರೆ ನನಗೆ ಆಕರ್ಷಣೀಯವಾಗಿದ್ದು ಅದರಲ್ಲಿ ಆಶ್ರಯ ಪಡೆದ ಹಕ್ಕಿಗಳಿಂದ. ನನಗೆ ಹಕ್ಕಿಗಳ ಚಿತ್ರಗಳ ಕಡೆ ಇದ್ದ ಚಟದಿಂದ.



ಇದೇ ಕೆರೆಯಲ್ಲಿ ಮೀಂಚುಳ್ಳಿ, ಕಳ್ಳಿಪೀರ, ನೀಲಬಕ, ಸಿಳ್ಳೆಬಾತು ಮತ್ತಿತರ ಹಕ್ಕಿಗಳ ಚಿತ್ರವನ್ನು ನಾನು ತೆಗೆಯುತ್ತಲೇ ಛಾಯಾಗ್ರಹಣವನ್ನು ಕಲಿಯುತ್ತಿದ್ದೇನೆ. ಬೇರೆ ಕಡೆಗಳಲ್ಲಿ ತೆಗೆದಿಲ್ಲ ಎಂದಿಲ್ಲ. ಆದರೆ ಇಲ್ಲಿ ಸಿಕ್ಕಷ್ಟು ಹಕ್ಕಿಗಳು ನನಗೆ ಬೇರೆಡೆಯಲ್ಲಿ ಸಿಗಲಿಲ್ಲ. ಮತ್ತೆ ನೀರ ಹಕ್ಕಿಗಳು ಎಂದರೆ ಅದರ ಆಕರ್ಷಣೆಯೇ ಬೇರೆ. ಹಕ್ಕಿಗಳ ಅದೆಷ್ಟು ಚಿತ್ರಗಳನ್ನು ತೆಗೆದರೂ ಹಕ್ಕಿಗಳು ಹಾರುತ್ತಿರುವ ಚಿತ್ರವನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಆದರೆ, ಹಕ್ಕಿಯ ಹಾರಾಟದೊಂದಿಗೆ ಅದರ ಪ್ರತಿಫಲನದ ಚಿತ್ರ ತೆಗೆಯಲು ಸಾಧ್ಯವಾದಾಗ ನನಗಾದ ಸಂತೋಷ ವರ್ಣಿಸಲಸದಳ.ಆ ಅವಕಾಶವನ್ನು ಕೊಟ್ಟಿದ್ದು ಬಿಳಿ ಪಟ್ಟೆ ಬಾತು. ಅದನ್ನೊಮ್ಮೆ ಮುಖಪುಸ್ತಕದಲ್ಲಿ ಹಾಕಿದ್ದೆ. ಆಮೇಲೆ ಹಕ್ಕಿಗಳ ಕುರಿತು ಬರೆಯಲೆಂದು ಮೊನ್ನೆ ಚಿತ್ರಗಳನ್ನು ತಡಕಾಡುತ್ತಿದ್ದಾಗ ಅದೇ ಚಿತ್ರ ಸಿಕ್ಕಿತು. ಕೊನೆಗೆ ಆ ಜಾತಿಯ ಎಲ್ಲಾ ಹಕ್ಕಿಗಳ ಎಲ್ಲಾ ಚಿತ್ರಗಳನ್ನು ಒಟ್ಟಾಗಿಸಿ ಆ ಹಕ್ಕಿಯ ಬಗೆಯೇ ಬರೆಯಲು ಮುಂದಾದೆ.



ಇಂಗ್ಲೀಷ್ ಭಾಷೆಯಲ್ಲಿ "Cotton Pigmy Goose" ಎನ್ನುವ ಈ ಹಕ್ಕಿಯನ್ನು ಕನ್ನಡದಲ್ಲಿ ಬಿಳಿಬಾತು, ಬಿಳಿ ಬಣ್ಣದ ಪಟ್ಟೆ ಬಾತು ಎಂದು ಕರೆಯುತ್ತಾರೆ. ಇದೊಂದು ಸಣ್ಣ ಹಕ್ಕಿ. ಇದರ ಉದ್ದ ಸುಮಾರು ೩೨ ಸೆಂಟಿ ಮೀಟರಿನಷ್ಟಿರುತ್ತದೆ. ಇದು ಭಾರತದಲ್ಲಿ ಕಂಡು ಬರುವ ಎಲ್ಲಾ ನೀರು ಹಕ್ಕಿಗಳಲ್ಲಿ ಅತೀ ಸಣ್ಣ ಹಕ್ಕಿ. ಇದರಲ್ಲಿ ಇರುವ ಎಲ್ಲಾ ಗಂಡು ಹಕ್ಕಿಗಳೂ ಸಂತಾನೋತ್ಪತ್ತಿ ಕ್ರಿಯೆಗೆ ಮುಂದಾಗುವುದಿಲ್ಲ. ಸಂತಾನೋತ್ಪತ್ತಿ ಕ್ರಿಯೆಗೆ ಮುಂದಾಗುವ ಗಂಡು ಹಕ್ಕಿಗೆ ಹಸಿರು-ಕಪ್ಪು ಬಣ್ಣದ ಬೆನ್ನಿರುತ್ತದೆ. ಒಳಭಾಗ ಬಿಳಿ ಇದ್ದು, ಎದೆ ಪಟ್ಟಿ ಮತ್ತು ತಿಳಿ ಬೂದು ಬಣ್ಣದ ಗರಿಗಳಿರುತ್ತವೆ. ಹೆಣ್ಣು ಹಕ್ಕಿಗಳು ಸಾಮಾನ್ಯವಾಗಿ ಕಪ್ಪು ಬೆನ್ನುಪಟ್ಟಿಗಳನ್ನು ಹೊಂದಿದ್ದು ರೆಕ್ಕೆಯ ಪಟ್ಟಿ ಹೊಂದಿರುವುದಿಲ್ಲ. ಗಂಡು ಹೆಣ್ಣು ಎರಡೂ ಹಕ್ಕಿಗಳ ಕೊಕ್ಕು ಬಹಳ ಸಣ್ಣ. ಈ ಗಂಡು ಹಕ್ಕಿಗಳು ಹಾರಾಡುವಾಗ ರೆಕ್ಕೆಯ ಬಿಳಿ ಪಟ್ಟೆಗಳನ್ನು ನೋಡಬಹುದು. ಅದೇ ರೀತಿ ಸಂತಾನೋತ್ಪತ್ತಿಗೆ ಮುಂದಾಗದ ಗಂಡು ಹಕ್ಕಿಗಳು ರೆಕ್ಕೆಯ ಮೇಲಿನ ಬಿಳಿ ಪಟ್ಟಿಯೊಂದನ್ನು ಬಿಟ್ಟು ಹೆಣ್ಣು ಹಕ್ಕಿಗಳನ್ನು ಹೋಲುತ್ತವೆ. ಗಂಡು ಹಕ್ಕಿಗಳು ಹೆಣ್ಣನ್ನು ಪಟಾಯಿಸಲು ಮನುಷ್ಯರಂತೆಯೇ ಸರ್ಕಸ್ ಮಾಡುತ್ತವೆ. ನಾವು ಪಿಜ್ಜಾ, ಮೊಬೈಲ್ ಬರ್ಗರ್ ಪಾರ್ಕು, ಸಿನಿಮಾ ಹೀಗೆಲ್ಲಾ ಸುತ್ತಾಡಿದರೆ, ಈ ಹಕ್ಕಿಗಳಲ್ಲಿ ಗಂಡು ಹಕ್ಕಿಗಳು ಗಲಾಟೆ ಮಾಡುತ್ತಾ, ಹಾರಾಡುತ್ತಾ ಹೆಣ್ಣುಗಳ ಬೆನ್ನತ್ತುತ್ತವೆ. ಹಾರಾಡುತ್ತಲೇ ಹೆಣ್ಣಿನ ಸುತ್ತ ಗುಂಪಿನಲ್ಲಿ ಸುತ್ತುತ್ತಲೇ ಇರುತ್ತವೆ, ಕೆಲವು ನಿಮಿಷಗಳ ಕಾಲ, ಯಕ್ಷಗಾನದಲ್ಲಿ ಶೃಂಗಾರ ಸನ್ನಿವೆಶದ ಪದ್ಯಗಳಲ್ಲಿ ಪಾತ್ರಧಾರಿಗಳೂ ಕೆಲವೊಮ್ಮೆ ಹೀಗೆಯೇ ನರ್ತಿಸುತ್ತಾರೆ, ಅಲ್ಲವೇ. ಒಟ್ಟಿನಲ್ಲಿ ಗಂಡುಗಳಿಗೆ ಹೆಣ್ಣುಗಳನ್ನು ಪಟಾಯಿಸಲು ಬಲು ಕಷ್ಟ-ಮನುಷ್ಯರೇ ಇರಲಿ ಹಕ್ಕಿಗಳೇ ಇರಲಿ. ಮತ್ತೆ ಮನುಷ್ಯ ಮತ್ತು ಹಕ್ಕಿಗಳಲ್ಲಿ ಬಹುಷಃ ಇದೊಂದೇ ಸಾಮ್ಯತೆ.



ಕೆಲವೊಮ್ಮೆ ಜೋಡಿಯಾಗಿ ಕೆಲವೊಮ್ಮೆ ಗುಂಪಿನಲ್ಲಿ ಈ ಹಕ್ಕಿಗಳು ನಿಧಾನವಾಗಿ ನೀರಿನಲ್ಲಿ ಈಜಾಡುತ್ತಾ, ತಲೆಯನ್ನು ನೀರಿನಲ್ಲಿ ಮುಳುಗಿಸಿ ಎತ್ತುತ್ತಾ ಸಾಗುತ್ತವೆ. ಇವು ವೇಗದಲ್ಲಿ ಹಾರಾಡಿದರೂ ಎತ್ತರದಲ್ಲಿ ಹಾರದೆಯೇ ಭೂಮಿಗೆ ಸ್ವಲ್ಪ ಸಮೀಪದಲ್ಲಿಯೇ ಹಾರಾಡುತ್ತವೆ. ಬೇರೆ ಹಕ್ಕಿಗಳೊಂದಿಗೆ ಗುಂಪಿನಲ್ಲಿ ಸೇರುವುದು ವಿರಳ. ಏರಿಳಿತಗಳಿಂದ ಕೂಡಿದ ಸಾಮೂಹಿಕ ಬೆನ್ನಟ್ಟುವಿಕೆ ಕೂಡಾ ಇವುಗಳ ವೈಶಿಷ್ಟ.



ಭಾರತೀಯ ಉಪಖಂಡದ ಸುತ್ತೆಲ್ಲ ಪಸರಿಸಿದೆ ಎಂದು ಇಂಟರ್ನೆಟ್ಟಿನ ಮಾಹಿತಿ ತಿಳಿಸುತ್ತದೆ. ಚಳಿಗಾಲದಲ್ಲಿ ಉತ್ತರಧ್ರುವದಿಂ ದಕ್ಷಿಣ ಧೃವಕೂ ಇವುಗಳ ಪಯಣ.ನಾನು ಕೂಡಾ ಚಿಪ್ಪಳಿ ಕೆರೆಯಲ್ಲಿ ಇವುಗಳನ್ನು ನೋಡಿದ್ದು ಅಕ್ಟೋಬರ್ ತಿಂಗಳಿನಿಂದ ಮೇ ಅಂತ್ಯದ ವರೆಗೆ ಮಾತ್ರ. ನಿಂತ ನೀರನ್ನೇ ತಮ್ಮ ವಾಸಕ್ಕೆ ಬಳಸುವುದು ಈ ಬಾತುಗಳ ಮತ್ತೊಂದು ಹಿರಿಮೆ. ಜಲ ಸಸ್ಯಗಳೇ ಇವುಗಳ ಮುಖ್ಯ ಆಹಾರ. ಆದರೆ ಆಗಾಗ ಜಲಚರಗಳನ್ನು ಕೂಡಾ ತಿನ್ನುತ್ತವೆ. ಇವು ಮರಗಳ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಇವುಗಳ ತೂಕವೇ ಕಡಿಮೆ. ಇದು ಇವುಗಳಿಗೆ ಒಂದು ವರದಾನ ಕೂಡಾ. ಮೊಟ್ಟೆ ಬಿರಿದು ಹೊರಬರುವ ಮರಿಗಳು ಇದೇ ಕಾರಣದಿಂದ, ಮೇಲಿನಿಂದ ಬಿದ್ದರೂ ಸಾಯುವುದಿಲ್ಲ.



ಕೆರೆಗಳಿಗೆ ಸುರಿವ ಕಸ ಕೆರೆಗಳನ್ನು ಬರಡು ಮಾಡೀತು. ಈ ಸಂತತಿಯ ಹಕ್ಕಿಗಳ ಬದುಕೂ ಬರಡಾದೀತು. ಈಗ "least Concern" ವಿಭಾಗದಲ್ಲಿರುವ ಈ ಬಾತುಗಳು ಕೆರೆಗಳು ಬರಡಾದರೆ, ಅಪಾಯಕ್ಕೀಡಾದ ಹಕ್ಕಿಗಳ ಸಾಲಿನಲ್ಲಿ ಸೇರುತ್ತವೆ. ನಾವು ಇವುಗಳ ಉಳಿವಿಗೆ ಹೆಚ್ಚಿನದ್ದನ್ನು ಮಾಡಬೇಕಿಲ್ಲ. ನಮ್ಮ ಉಳಿವಿನ ಕಡೆ ಗಮನ ಕೊಟ್ಟರೆ ಸಾಕು. ನಮ್ಮ ಕೆರೆಗಳನ್ನು ಚೆನ್ನಾಗಿ ರಕ್ಷಿಸಿಕೊಂದರೆ ನೋಡಿಕೊಂಡರೆ ನಮಗೂ ನೀರ ನಿಶ್ಚಿಂತೆ, ನಮಗೂ ಒಳ್ಳೆಯದು- ಈ ಹಕ್ಕಿಗಳ ಬದುಕೂ ನಿರಾಳ. ನಮ್ಮ ಬದುಕು ಕಟ್ಟುತ್ತಾ ಇವುಗಳ ಬದುಕನ್ನೂ ಕಾಪಿಡುವ ಸಾಧ್ಯತೆ ಇದೆ. ಕೆರೆಗಳು ಸುಧಾರಿಸಿದಲ್ಲಿ ಇವು ಇನ್ನಿತರ ಕೆರೆಗಳಿಗೂ ವಲಸೆ ಬಂದಾವು. ಇವುಗಳ ಚಂದದ ಪ್ರಣಯದುಡ್ದಯನದಿಂದ ನಯನ ಮನಗಳು ತುಂಬಬಹುದು. ಧರ್ಮ ಎಂದರೆ ಇದೇ ಅಲ್ಲವೇ? ಸ್ವ-ಪರ ಹಿತಗಳ ಸಾಧನೆ.

#ಪಕ್ಷಿ_ವಾಚನ


















Sunday, August 26, 2018

ಎಲ್ ಎಸ್ ಅವರಿಗೆ ಎಪ್ಪತ್ತೈದು

ಅಮೃತ- ನಮ್ಮ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಠ ಸ್ಥಾನವಿದೆ. ಇದರ ಪಾನದ ನಂತರವಷ್ಟೇ ದೇವತೆಗಳು ಅಮರರು-ನಿರ್ಜರರು ಎನ್ನಿಸಿಕೊಂಡಿದ್ದು. ಇದಕಾಗಿ ನಡೆದದ್ದು ಸಮುದ್ರ ಮಂಥನ. ಒಂದು ಕಡೆಯಲ್ಲಿ ಮಹಾದಾನಿ ಮಹಾಬಲಿ ಮತ್ತವನ ದೈತ್ಯ ಸೈನ್ಯ. ಇನ್ನೊಂದೆಡೆಯಲ್ಲಿ ಮಹೇಂದ್ರನ ದೇವಸೇನೆ. ಮಧ್ಯದಲ್ಲಿ ವನಸ್ಪತಿ ಭರಿತ ಮಂದರಾಚಲ. ಆಧಾರವಾಗಿ ನಿಂತದ್ದು, ಮಹಾಕೂರ್ಮನ ಮೇಲೆ. ಅದಕ್ಕೆ ಸುತ್ತಿದ್ದ ವಾಸುಕಿ ಎನ್ನುವ ಸರ್ಪರಾಜ. ಸುತ್ತಲೂ ಹಾರಡುತ್ತಿದ್ದ ಗರುಡ. ವನಸ್ಪತಿಗಳೆಲ್ಲ ಕರಗಿ ನೀರನ್ನು ಸೇರಿ ಕಡಲು ಹಾಲ್ಗಡಲಾಯಿತು. ಮಂಥನ ಮುಂದುವರೆಯಿತು. ಹಾಲಾಹಲವನ್ನು ನಂಜುಂಡ ಸೇವಿಸಿದ. ನಂತರ ಕೌಸ್ತುಭ ಮಣಿ, ಕಾಮಧೇನು, ಕಲ್ಪವೃಕ್ಷ, ಐರಾವತ ಎನ್ನುವ ಆನೆ, ಉಚ್ಛೈಶ್ರವಸ್ ಎನ್ನುವ ಕುದುರೆ, ಹೀಗೆ ಅನೇಕ ಸುವಸ್ತುಗಳು ಬಂದವು ಕೂಡಾ. ಕೊನೆಯಲ್ಲಿ ಬಂದದ್ದು ಅಮೃತ. ಧನ್ವಂತರಿ ಅದನ್ನು ಕೈನಲ್ಲಿ ಹಿಡಿದು ತಂದನಂತೆ.
ಪೀಠಿಕೆ ಏತಕ್ಕೆ ಹೇಳಿದ್ದೆಂದರೆ ಅಮೃತ ಎನ್ನುವುದು ಕೇವಲ ಒಂದು ದ್ರವವಲ್ಲ. ಅದೊಂದು ತತ್ವ. ಅದೊಂದು ಸಾಧನೆ-ತ್ಯಾಗ-ಶ್ರಮ ಮತ್ತು ಸಂಭ್ರಮ.

ನಮ್ಮ ಪುರಾಣ ಮತ್ತು ಶಾಸ್ತ್ರಗಳಿಂದ ಕೂಡಿದ ಪರಂಪರೆಅಲ್ಲಿ ಅಮೃತ ಎನ್ನುವುದನ್ನು ತತ್ವವಾಗಿ ಪರಿಗಣಿಸಿ ಅದನ್ನು ಒಂದು ಸಾಧು-ಸಾಧ್ಯ ಮತ್ತು ಸಾಧನೀಯ ವಿಷಯವಾಗಿ ಪರಿಗಣಿಸಿದ್ದಾರೆ. ಲೌಕಿಕದಿಂದ ಪಾರಮಾರ್ಥಿಕದ ಪಯಣವನ್ನೂ ಅಮೃತ ಎಂದು ಕರೆದಿದ್ದಾರೆ. ಅಮೃತ ಎಂದರೆ ಮರಣ ಇಲ್ಲದ್ದು ಎಂದರೆ ಅದು ಕೇವಲ ಬಾಲಿಶ ವ್ಯಾಖ್ಯಾನವಾದೀತು. ಅಮೃತ ಎಂದರೆ ಶಾಶ್ವತತೆ. ಉಪನಿಷತ್ತು ಹೇಳುತ್ತದೆ. " ನ ಕರ್ಮಣಾ ನ ಪ್ರಜಾ ಧನೇನ ತ್ಯಾಗೇನೈಕೇನಮೃತತ್ವಮಾನಷುಃ". ಅಮೃತತ್ವ ಕೇವಲ ತ್ಯಾಗದಿಂದ ಮಾತ್ರ ಸಾಧ್ಯ. ಸೋಜಿಗವೆಂದರೆ ತ್ಯಾಗವನ್ನು ಮಾಡಿದವ ಅದರ ಲೆಕ್ಕವಿಡುವುದಿಲ್ಲ ಮಾಡದವ ಅದನ್ನು ಹೆಡ್ದತನವಾಗಿ ಪರಿಗಣಿಸುತ್ತಾನೆ. ಪಡೆದವ ಸಜ್ಜನನಾದರೆ ಕೃತಜ್ಞತೆ ಹೊಂದುತ್ತಾನೆ. ಆದರೆ ಇದನ್ನೆಲ್ಲ ನೋಡಿದವ ಕೇವಲ ಕೃತಾರ್ಥ- ಸಾರ್ಥಕ್ಯವನ್ನು ಅನುಭವಿಸುತ್ತಾನೆ. ನಾನೂ ಈಗ ಇಂಥದ್ದೇ ಕೃತಾರ್ಥತೆ ಮತ್ತು ಸಾರ್ಥಕ್ಯವನ್ನು ಅನುಭವಿಸುತ್ತಿದ್ದೇನೆ. ಕಾರಣ ಇಂದು ನನ್ನ ಪ್ರೀತಿಯ ಶಾಸ್ತ್ರಿ ಮಾವನ ಅಮೃತ ಮಹೋತ್ಸವ. ನನಗೆ ಬರಹಗಳಿಗೆ ಪ್ರೆರಣೆಯಾಗಿದ್ದು ಇದೇ ಶಾಸ್ತ್ರಿ ಮಾವನ ಬರಹಗಳು, ಮಾತುಗಳು ಮತ್ತವರ ಭಾಷೆ.

ನಮ್ಮಿಬ್ಬರ ಭೆಟಿ ಬಹಳ ಕಡಿಮೆ ಸಲ ಆಗಿದ್ದು. ಮಾತಾಡಿದ್ದು ಕೂಡಾ ಕಡಿಮೆಯೇ. ಅವರ ಸರಳತೆಯೇ ಅದೊಂದು ರೀತಿಯ ಆಕರ್ಷಣೆ. ಅವರ ಮಾತು ಇನ್ನೊಂದು ರೀತಿಯ ಸೆಳೆತ. ಅವರ ಬರಹ ಬೇರೊಂದು ರೀತಿಯ ಸೆಳೆತ. ಅವರು ಮಾತಾಡುವಾಗ ಅದೆಷ್ಟು ಪುಸ್ತಕಗಳ ಹೆಸರನ್ನು ಹೇಳುತ್ತಾರೆ! ಅವರ ಸಾಹಿತಿಗಳೊಂದಿಗಿನ ಒಡನಾಟದ ಮಾತುಗಳು ಆ ಅನುಭವಗಳನ್ನು ಕೇಳುವುದು ಬಹಳ ಸೊಗಸು. ಶಾಸ್ತ್ರಿ ಮಾವನವರೊಡನೆ ಮಾತಾಡಲು ಕುಳಿತರೆ ಅದೆಷ್ಟೋ ವಿಷಯಗಳು ತಿಳಿಯುತ್ತವೆ. ಅವರು ಓದಿದ ವಿಚಾರಗಳನ್ನು ಹಂಚಿಕೊಂಡಾಗ ನಾವು ಅದನ್ನೇ ಓದಿದ್ದರೂ ಕೂಡಾ ನಮ್ಮ ಪಾಲಿಗೆ ಬೇರೆಯದೇ ಒಮ್ದು ಲೋಕ ತೆರ್ದುಕೊಮ್ಡು ಬಿಡುತ್ತದೆ. ಯಕ್ಷಗಾನ, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ ಹೀಗೆ ಎಲ್ಲದರ ಮೇಲೂ ಅಧಿಕಾರಯುತವಾಗಿ ಮಾತಾಡಬಲ್ಲಬರು ಶಾಸ್ತ್ರಿಮಾವ.

ಬಹುಷಃ ಬ್ರಹ್ಮ ಇವರನ್ನು ಸೃಜಿಸಿದ್ದೇ ಶರಾವತಿ ತೀರದ ಸಾಂಸ್ಕೃತಿಕ ವಿಶ್ವಕೋಶವಾಗಲಿ ಎಂದೋ ಎನ್ನುವ ಅನುಮಾನ ಬರುತ್ತದೆ. ತಂದೆ "ಧರ್ಮ ಸಿಂಧು" ಗ್ರಂಥದ ಕರ್ತೃ ನಾಜಗಾರ ಶಂಭು ಶಾಸ್ತ್ರಿ. ತಾಯಿ ಮಂಜೇಶ್ವರಿ. ಕೆರೆಮನೆ ಶಿವರಾಮ ಹೆಗಡೆಯವರು ಇವರ ಸೋದರ ಮಾವ. ಶಂಭು ಹೆಗಡೆ-ಮಹಾಬಲ ಹೆಗಡೆ-ಗಜಾನನ ಹೆಗಡೆಯವರು ಸೋದರ ಭಾವಂದಿರು. ಇದೆಲ್ಲದರ ಪ್ರಭಾವದಲ್ಲಿ ಬೆಳೆದ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ, (ಎಲ್ಲರ ಪ್ರೀತಿಯ ಎಲ್.ಎಸ್) ಇದೆಲ್ಲದರ ಪ್ರಭಾವದಲ್ಲಿ ಮೀಯುತ್ತಾ ತೋಯುತ್ತಾ ಸಾಹಿತ್ಯ ಸಂಸ್ಕೃತಿಗಳನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡರು. ಅದರ ಜೊತೆಗೇ ಬೆಳೆದ ಓದುವ ಹವ್ಯಾಸ. ಬರೆಯುವ ಕಲೆ. ಇವೆಲ್ಲವೂ ಸೇರಿ ಶರಾವತಿಯ ತಟದ ಬಾಲಕ ಲಕ್ಷ್ಮೀನಾರಾಯಣ ಶಾಸ್ತ್ರಿ ಎಲ್ಲರ ಪಾಲಿನ ಎಲ್ ಎಸ್ ಆಗಿ ಬೆಳೆದು ನಿಂತರು.

ಪತ್ರಕರ್ತ ಮತ್ತು ಸಾಹಿತಿ ಇವರಿಬ್ಬರೂ ಬರೆಯುತ್ತಾರೆ ನಿಜ. ಆದರೆ ಎರಡೂ ಪ್ರಕಾರದಲ್ಲಿ ವಿಶಿಷ್ಠ ಛಾಪು ಮೂಡಿಸಿದವರು ವಿರಳಾತಿವಿರಳ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಶಾಸ್ತ್ರಿ ಮಾವ. ಇವರ ಭಾಷೆ ತುಸು ತೀಕ್ಷ್ಣ. ಸಹಜವೇ ಅದು ಮಹಾಬಲ ಹೆಗಡೆಯವರ ಒಡನಾಟ-ಅವರ ಪ್ರಭಾವವಿದ್ದಮೇಲೆ ಆ ಭಾಷೆ ಬರಲೇ ಬೇಕು. ಆದರೂ ಆ ಭಾಷೆ ಯಾರಿಗೂ ಬೇಸರ ಉಂಟು ಮಾಡದೆ ವಿವಾದಕ್ಕೆ ಎಡೆ ಮಾಡದೆ ಎಲ್ಲರೂ ಒಪ್ಪುವಂತೆಯೇ ಇರುತ್ತದೆ. ಸತ್ಯವನ್ನು ಸಂಪೂರ್ಣ ಒಪ್ಪಿ ಬರೆದಾಗ ಮಾತ್ರ ಇದು ಸಾಧ್ಯ. ಸತ್ಯವನ್ನು ಒಪ್ಪುವುದಕ್ಕೂ ಒಂದು ಛಾತಿ ಬೇಕು. ಅದು ಇದ್ದುದರಿಂದಲೇ ಶಾಸ್ತ್ರಿ ಮಾವ ಈ ಪರಿ ಬೆಳೆದದ್ದು. ಸಂಗೀತದಲ್ಲೂ ಶಾಸ್ತ್ರಿ ಮಾವ ಕಡಿಮೆಯೇನಲ್ಲ.

ಎಲ್. ಎಸ್ ಅವರಿಗೆ ಎಪ್ಪತ್ತು ವರ್ಷ ತುಂಬಿದ್ದಾಗ ಶಂಭು ಹೆಗಡೆಯವರು ಹೇಳಿದ್ದರು. "ಗಜಾನನನ ಅರ್ಥಗಾರಿಕೆಯನ್ನು ಕೇಳಿದಾಗ ನನಗೆ ಅನುಮಾನ ಬರುತ್ತಿತ್ತು. ಲಕ್ಷ್ಮೀನಾರಾಯಣ ಅರ್ಥ ಬರೆದು ಕೊಡಿತ್ತಿದ್ದಾನೋ ಅಂತ. ಕೊನೆಗೊಂದು ದಿನ ಇಬ್ಬರೂ ಸಿಕ್ಕಿಬಿದ್ದರು." ಗಜಾನನ ಹೆಗಡೆಯವರು ಅಣ್ಣಮ್ದಿರನ್ನು ಬಿಟ್ಟು ಇವರಲ್ಲಿ ಮಾತುಗಾರಿಕೆಗೆ ಬೇಕಾದ ಬಂಡವಾಳ ಪಡೆಯುತ್ತಿದ್ದರು ಎಂದರೆ ತಿಳಿಯುತ್ತದೆ ಇವರ ಜ್ಞಾನದ ಅಗಾಧತೆ ಎಷ್ಟು ಎನ್ನುವುದು.

ಶಾಸ್ತ್ರಿಗಳು ಸಂಘತನಾ ಚತುರರೂ ಹೌದು. ಚುಟುಕು ಸಾಹಿತ್ಯ ಪರಿಷತ್ ಸ್ಥಾಪನೆಯಾಗುವಲ್ಲಿ ಇವರ ಶ್ರಮ ಅಪಾರ-ಅಗಾಧ. ಅದೆಷ್ಟೋ ನಾತಕ-ಯಕ್ಷಗಾನ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಶಾಸ್ತ್ರಿಗಳು. ಶಾಸ್ತ್ರಿಗಳು ಗದ್ಯ ಪದ್ಯ ಎರಡನ್ನೂ ಬರೆದ ಅಪರೂಪದ ಸಾಹಿತಿಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಐವತ್ತಕ್ಕೂ ಹೆಚ್ಚು ಪುತಕಗಳು, ಸಾವಿರಗಟ್ಟಲೇ ಲೇಖನಗಳು ಅದೆಷ್ಟು ಸಂಪಾದಕೀಯಗಳೋ ಲೆಕ್ಕವಿಲ್ಲ. ಇವರು ಬರೆದ ಮಹಾಬಲ ಹೆಗಡೆಯವರ ಜೀವನ ಚರಿತ್ರೆ ಉದಯೋನ್ಮುಖ ಕಲಾವಿದರಿಗೆ ಪಠ್ಯದಂತಿದೆ. ಹಿಂದೊಮ್ಮೆ ಕೆರೆಮನೆ ಮೇಳಕ್ಕೆ ಮಹಾಬಲ ಹೆಗಡೆಯವರ ಬಗ್ಗೆ ಬೇಕಾದ ಲೇಖವೊಂದನ್ನು ಬರೆದಿದ್ದರಂತೆ. ಅದೇ ಲೇಖಕ ಅದೇ ಕಲಾವಿದನ ಜೀವನದ ಚರಿತ್ರೆ ಬರೆದಿದ್ದು ಕೇವಲ ಯೋಗಾಯೋಗವಲ್ಲ. ಯಕ್ಷಗಾನದ ಮಹಾಬಲರ ಬಗ್ಗೆ ಬರೆಯುವುದು ಸುಲಭದ ಮಾತೂ ಅಲ್ಲ. ಅದನ್ನು ಬರೆಯುವುದು ಶಾಸ್ತ್ರಿಗಳಿಗೆ ಮಾತ್ರ ಸಾಧ್ಯವಿತ್ತು. ಓ ಸಿಯಾಂ ನಿನಗೆ ಸಲಾಂ ಎನ್ನುವ ಇವರ ಪ್ರವಾಸ ಕಥನ ಥಾಯ್ಲೆಂಡಿನ ಜಾಗಗಳನ್ನು ಮಾತ್ರವಲ್ಲ ಅಲ್ಲಿನ ಸಂಸ್ಕೃತಿಯನ್ನೂ ಪರಿಚಯಿಸುತ್ತದೆ. ಅನೇಕ ಪ್ರವಾಸಕಥನಗಳು ಇಲ್ಲಿ ಸೋಲುತ್ತಿರುವಾಗ ಈ ಕೃತಿ ವಿಭಿನ್ನವಾಗಿ ಕಾಣುತ್ತದೆ. ಪ್ರವಾಸ ಕಥನವನ್ನೋದಿದವ ಆ ಜಾಗವನ್ನು ನೋಡುವ ಆಸೆ ಹುಟ್ಟಿಸುವಂತೆ ಮಾಡುತ್ತದೆ.

ಢಂ ಢಂ ಡೀಗಾ ಡೀಗಾ ಶಾಸ್ತ್ರಿಗಳ ವಿಡಂಬನೆಯ ಅಂಕಣ. ಇದರಲ್ಲಿ ಶಾಸ್ತ್ರಿಗಳ ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ. ಅಪಹಾಸ್ಯದ ಸೋಂಕಿಲ್ಲದೆಯೇ ಪ್ರಚಲಿತ ವಿದ್ಯಮಾನಗಳನ್ನು ವಿಡಂಬನಾತ್ಮಕವಾಗಿ ಬರೆಯುವ ಶಾಸ್ತ್ರಿಗಳ ಹೆಚ್ಚುಗಾರಿಕೆ ಎಲ್ಲರಿಗೆ ಸಿದ್ಧಿಸಲಿಲ್ಲ. ಸ್ದ್ಭಾವ ತುಂಬಿದ ಹಾಸ್ಯದಲ್ಲೇ ಕಿವಿ ಹಿಂಡುತ್ತಾರೆ ಶಾಸ್ತ್ರಿ ಮಾವ.

ಪಂಚ ಭೂತಗಳೊಂದಾಗಿಸುವ ತತ್ವಕ್ಕೆ ನಾರಾಯಣ ಎನ್ನುವ ಹೆಸರಂತೆ. ಲಕ್ಷ್ಮೀ ನಾರಾಯಣರು ಹೆಸರಿಗೆ ಲಕ್ಷ್ಮೀನಾರಾಯಣನಾದರೂ ಅವರು ವಾಸ್ತವದಲ್ಲಿ ಶಾರದಾ ನಾರಾಯಣ. ಯಾಕೆಂದರೆ ಇವರ ಭಾಷಾ ಸಂಪತ್ತು ಜ್ಞಾನ ಸಂಪತ್ತು ಆ ಮಟ್ಟದಲ್ಲಿದೆ. ಇವರ ಅರ್ಧಾಂಗಿಯ ಹೆಸರೂ ಶಾರದೆ. ಮೇಧಾವಿನಿ, ಪೂರ್ಣಿಮಾ, ಅಂಬಿಕಾ ರಾಧಿಕಾ ಇವರ ಮಕ್ಕಳು.

ಶಾಸ್ತ್ರಿ ಮಾವ ಇದ್ದದ್ದು ಬೆಳಗಾವಿಯಲ್ಲಿ. ಅವರ ಲೇಖನಗಳು ಬಂದಿದ್ದು ಲೋಕಧ್ವನಿ ಪತ್ರಿಕೆಯಲ್ಲಿ. ಆದರೆ ನಾನು ಇವರ ಅನೇಕ ಲೇಖನಗಳನ್ನು ಓದಿದ್ದು ಫೇಸ್ ಬುಕ್ಕಿನಲ್ಲಿ. ಅದಕ್ಕೆ ಶಾಸ್ತ್ರಿಮಾವ ಮತ್ತು ಫೇಸ್ ಬುಕ್ ಎರಡಕ್ಕೂ ನಾನು ಕೃತಜ್ಞ.

ಶಾಸ್ತ್ರಿ ಮಾವನವರ ಬಗ್ಗೆ ಬರೆಯುವಷ್ಟು ದೊಡ್ದವ ನಾನಲ್ಲ. ಇರುವೆಯೊಮ್ದು ಪರ್ವತಾನ್ನು ವರ್ಣಿಸಿದಂತಾದೀತು ನಾನು ಬರೆದರೆ. ಆದರೆ, ಅಮೃತ ಮಹೋತ್ಸ್ವದ ಸಂಭ್ರಮದಿಂದ ದೂರಾಗಲೂ ಮನಸ್ಸಿಲ್ಲ. ಶಾಸ್ತ್ರಿ ಮಾವನವರ ಅಮೃತ ಮಹೋತ್ಸವವೂ ಅವರ ಜೀವನ್ವೂ ಕೂಡಾ ಅಮೃತದಂತೆ ಅದೆಷ್ಟೋ ತ್ಯಾಗ-ಸಾಧನೆ-ಶ್ರಮ-ಸಂಭ್ರಮಗಳಿಂದ ಕೂಡಿದೆ.