Friday, May 28, 2021

ವಾಲಿಪ್ರಕರಣ ಅಧ್ಯಾಯ-6 ಕೂಟಕಾಳಗ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ.)

"ಎಲಾ ಸುಗ್ರೀವ" ಎನ್ನುತ್ತಾ ಹೊರಬಿದ್ದ ವಾಲಿ. ಹೊರಬಿದ್ದವನ ಕಣ್ಣಿಗೆ ಕಂಡ ದೃಷ್ಯಗಳು ನಂಬಲಸಾಧ್ಯವಾಗಿದ್ದವು. ವಾಲಿಯ ಮನೆಯ ಅಡುಗೆಮನೆಯಲ್ಲಿ ತಯಾರಿಸಿದ ಸುಗ್ರಾಸ ಭೋಜನವನ್ನುಂಡು ಕೈ ತೊಳೆದು ಮಧು ಸೇವಿಸಿ, ವಾಲಿಯ ವೀರತನ ಆತನ ನಿಲುವುಗಳನ್ನು ಕೊಂಡಾಡಿ ತಾಂಬೂಲ ಸೇವಿಸಿ ವಾಲಿಯ ಅರಮನೆಯ ಹಜಾರದ ಮೇಲೆ ಹಾಸಿಗೆ ಹಾಸಿಕೊಂಡು ಹೊದ್ದು ಮಲಗಿದ್ದ ವಾಲಿಗೆ ನಿಷ್ಠರಾಗಿದ್ದ ಅದೆಷ್ಟೋ ವಾನರ ವೀರರು ಕಾಣುತ್ತಿಲ್ಲ. ತನ್ನ ಪರವಾಗಿಯೇ ಇವರೂ ಯುದ್ಧ ಸನ್ನದ್ಧರಾಗಿ ಹೊರಟವರಾಗಿದ್ದರೆ ಆಯುಧ ಹಿಡಿದು ತನ್ನನ್ನು ಇದಿರುನೋಡುತ್ತಿದ್ದರು. ಆದರೆ ತನಗೆ ಕಾಣದಂತೆ ಎಲ್ಲಿಯೋ ಸಾಗಿದ್ದಾರೆಯೇ? ಅಥವಾ ಯುದ್ಧಕ್ಕೆ ಹೆದರಿ ಅಡಗಿದ್ದಾರೆಯೇ? ಇಲ್ಲ ಇವರೆಲ್ಲವೂ ಸುಗ್ರೀವನನ್ನು ಸೇರಿದ್ದಾರೆ ಎಂದು ತತ್ ಕ್ಷಣದಲ್ಲಿ ಅರಿತ ವಾಲಿ. ಶತಮಾನಗಳ ಕಾಲದ ರಾಜಕೀಯದ ಅನುಭವ ಅದು.
ಇದನ್ನು ಮತ್ತೆ ಎತ್ತಿ ಹಿಡಿದಿದ್ದು, ಈ ಘಟನೆಗೆ ಇಂಬು ಕೊಟ್ಟಿದ್ದು ಕೋಟೆಯಲ್ಲಿ ಕಂಡ ಬಿರುಕು, ಬೀಳುತ್ತಿದ್ದ ಕಲ್ಲುಗಳು. ಎಲ್ಲರೂ ಪರಸ್ಪರರಲ್ಲಿ ಕಲ್ಲೆಸೆದುಕೊಳ್ಳುತ್ತಿದ್ದರು. ವಾಲಿಗೆ ಎಸೆಯುವ ಧೈರ್ಯ ಯಾರಿಗೂ ಇರಲೂ ಇಲ್ಲ, ಈಗಲೂ ಇಲ್ಲ.

ವಾಲಿಯ ಮನದಾಳದಲ್ಲಿ ಎಂದೋ ಮೂಡಿ ಮರೆಯಾಗಿದ್ದ ಯೋಚನೆ ಮತ್ತೆ ಛಂಗನೆ ಹೊಳೆದು ಮರೆಯಾಯಿತು. ಸುಗ್ರೀವ ರಾಜ್ಯದ ಮೇಲಿನ ಅಧಿಕಾರದ ಆಸೆಯಿಂದಲೇ ವಾಲಿ ಸತ್ತ ಕಥೆಯನ್ನು ಹೇಳಿದ್ದು. ಆ ಹೆಡ್ಡನ ಕೈನಲ್ಲಿ ಅಧಿಕಾರವಿದ್ದರೆ ತಮ್ಮ ಸುಖಮಯ ಬದುಕು ಸುಗಮವಾಗಿ ಸಾಗುತ್ತದೆ ಎಂದು ವಿಭ್ರಮಿಸಿದ್ದ ವಾನರರು ಅದನ್ನು ನಂಬಿದ್ದು. ಅಂಥವರ ಸಂಖ್ಯೆ ಹೆಚ್ಚಿದ್ದಿದ್ದರಿಂದ ತನ್ನ ಬಗ್ಗೆ ತಿಳಿದಿದ್ದ ತನ್ನ ಪರಮ ನಿಷ್ಠರು ಸುಮ್ಮನಿದ್ದರು. ಸತ್ಯ ಶೀಘ್ರದಲ್ಲಿ ಹೊರಬೀಳುವ ನಂಬಿಕೆ ಅವರಿಗಿತ್ತು. ಇಲ್ಲವಾದರೆ ಇಂದೀಗ ಈ ಕೂಟಯುದ್ಧ, ಈ ಪರಸ್ಪರ ಕಲ್ಲೆಸೆತ ಸಾಧ್ಯವಿರಲಿಲ್ಲ.

ಸುಗ್ರೀವನನ್ನು ಮನಸ್ಸಿನಲ್ಲಿಯೇ ನಿಂದಿಸುತ್ತಾ ಸಾಗಿದವನಿಗೆ ಸುಗ್ರೀವ ಎದುರಾದ. ವಾಲಿಯನ್ನು ಕಂಡ ಕ್ಷಣ ಕೋಟೆಯ ಮೇಲೆ ಹಾರಿ ಕಿಷ್ಕಿಂಧೆಯ ಕೋಟೆಯ ಹಿಂಬಾಗಿಲಿನತ್ತ ಸಾಗಿದ್ದ. ಅವನಿಗಿಂತಲೂ ವೇಗವಾಗಿ ನೆಗೆದು ಕೋಟೆಯ ಆಚೆ ಅವನ ದಾರಿ ಕಾಯುತ್ತಿದ್ದ ವಾಲಿ. ಸಿಟ್ಟಿನಿಂದ ಹಲ್ಲು ಕಡೆಯುತ್ತಾ, ಸುಗ್ರೀವನನ್ನು ಎದುರುಗೊಂಡ. ಸಿಟ್ಟಿನಿಂದಲೇ ಪ್ರಶ್ನಿಸಿದ. "ಪೆಟ್ಟು ತಿಂದು ಶತಮಾನ ಕಳೆದ ಮೇಲೆ ಬರುವ ನಿನಗೆ ಮಧ್ಯಾಹ್ನವೇ ಪೆಟ್ಟು ತಿಂದು ರಾತ್ರಿ ಕಾಲದಲ್ಲಿ ತಿರುಗಿ ನನ್ನನ್ನು ಯುದ್ಧಕ್ಕೆ ಕರೆಯಲು, ಅದೂ ನಾನು ತಾರೆಯ ಆಲಿಂಗನದಲ್ಲಿ ಆನಂದವನ್ನನುಭವಿಸುತ್ತಿದ್ದ ಹೊತ್ತಿನಲ್ಲಿ ನನ್ನ ಸಜ್ಜೆ ಮನೆಯ ಕಿಟಕಿಯಲ್ಲಿ ಮುಖವಿಟ್ಟು ಕೂಗಲು ಅದೆಷ್ಟು ಧೈರ್ಯ? ಎಲ್ಲಿಂದ ಪಡೆದೆ ಈ ಧೈರ್ಯ? ತಪಸ್ಸಿನಿಂದ ಸಾಧಿಸಲು ನಿನಗೆ ಸಾಧ್ಯವಿಲ್ಲ. ಏಕೆಂದರೆ ಲಾಲಸೆಯೇ ಮೈವೆತ್ತವ ನೀನು. ಇನ್ನು ಯಜ್ಞ ಯಾಗಾದಿಗಳು, ಅದಕ್ಕೆ ಬೇಕಾದ ದ್ರವ್ಯಗಳೂ ನಿನ್ನಲ್ಲಿಲ್ಲ. ಅದು ಹೇಗೆ ಪಡೆದೆ ಇಷ್ಟು ಧೈರ್ಯ"

ಸುಗ್ರೀವನೂ ಕೃದ್ಧನಾಗಿ ಉತ್ತರಿಸಿದ್ದ. "ನನ್ನ ಹೆಂಡತಿ ರುಮೆ ಮಾನಿನಿ. ಅವಳನ್ನು ಬಿಟ್ಟಿರಲು ಸಾಧ್ಯವಿಲ್ಲ. ನಿನ್ನಿಂದ ಅವಳ ಮಾನಭಂಗವನ್ನು ಅವಳಿಗೆ ನಿನ್ನಿಂದಾಗುತ್ತಿರುವ ಹಿಂಸೆಯನ್ನು ತಾಳಲಾರದೇ ಧೈರ್ಯ ಒಗ್ಗೂಡಿಸಿಕೊಂಡು ಬಂದಿದ್ದೇನೆ, ಮರ್ಯಾದೆಯಿಂದ ನನ್ನ ಹೆಂಡತಿಯನ್ನು ಮತ್ತೆ ನನ್ನೊಡನೆ ಕಳಿಸು. ದಾಯಭಾಗದಲ್ಲಿ ಈ ಸುಗ್ರೀವನ ಪಾಲಿಗೆ ಸೇರಬೇಕಾದ ರಾಜ್ಯವನ್ನು ಸಲ್ಲಿಸು. ಈಗಲೂ ನಾನು ಸಾಗಲಿಕ್ಕೆ ಸಿದ್ಧನಿದ್ದೇನೆ."

"ಭಲೇ ಭಲೇ ಸುಗ್ರೀವ. ಈಗ ತಾನೇ ಯುದ್ಧಕ್ಕೆ ಆಹ್ವಾನ ಕೊಟ್ಟು ಯುದ್ಧದಿಂದ ಹಿಂದೆ ಸರಿಯುವ ಮಾತುಗಳನ್ನಾಡುತ್ತಿದ್ದೀಯೆ. ಈ ನಿನ್ನ ಜಾಣ ಹೇಡಿತನದ ಪ್ರದರ್ಶನವನ್ನು ಅರಿಯಲಾಗದವನಲ್ಲ ವಾಲಿ. ಈಗ ನನ್ನವಳಾಗಿರುವ ನಿನ್ನ ರುಮೆಯನ್ನು ನಾನು ಕಳುಹಿಸಲಾರೆ. ನನಗೆ ನೀನು ಮತ್ತು ಅವಳು ಇಬ್ಬರೂ ಸೇರಿ ಮಾಡಿದ ದ್ರೋಹಕ್ಕೆ ವಂಚನೆಗೆ ಈ ಶಿಕ್ಷೆ. ಅವಳ ತಪ್ಪೇನು ಎಂದು ನೀನು ಕೇಳಬಹುದು. ನೀನು ಸಿಂಹಾಸನವನ್ನು ಏರುವಾಗ, ಅಥವಾ ತಾರೆಯನ್ನು ಸೇರುವಾಗ ನೀತಿ ಮಾತುಗಳನ್ನು ಹೇಳಿ ತಡೆಯಬೇಕಾಗಿತ್ತು. ಅದು ಬಿಟ್ಟು ಮಹಾರಾಣಿ ಎನ್ನುವ ಪಟ್ಟದ ದುರಾಸೆಗೆ ಬಿದ್ದು, ನಿನ್ನಿಂದ ನಡೆಯುತ್ತಿದ ತಪ್ಪಿಗಳಿಗೆಲ್ಲ ಮೌನ ಸಮ್ಮತಿ ಕೊಟ್ಟು ಪ್ರೋತ್ಸಾಹಿಸಿದಳು. ಅದಕ್ಕೇ ನಿನ್ನೊಡನೆ ಅವಳನ್ನೂ ಶಿಕ್ಷಿಸುತ್ತಿದ್ದೇನೆ."

"ನನ್ನ ಪಕ್ಕದಲ್ಲಿ ನಿನ್ನ ಹೆಂಡತಿ ತಾನಾಗಿ ಬಂದು ಕುಳಿತಳು. ಅವಳು ತಾನಾಗಿ ನನ್ನನ್ನು ಸೇರಿದಳು. ಅದೂ ಶಾಸ್ತ್ರವಾಕ್ಯಕ್ಕೆ ಅನುಸಾರವಾಗಿ. ನೀನು ಇದರಲ್ಲಿ ನನ್ನ ತಪ್ಪನ್ನು ಮಾತ್ರ ಗ್ರಹಿಸುತ್ತಿದ್ದೀ. ನಿನ್ನ ಹೆಂಡತಿಯ ತಪ್ಪನ್ನು ನಿರ್ಲಕ್ಷಿಸಿ ಪಕ್ಷಪಾತ ಧೋರಣೆಯಿಂದ ನನ್ನನ್ನೂ ನನ್ನ ಹೆಂಡತಿಯನ್ನೂ ಹಿಂಸಿಸುತ್ತಿದ್ದೀಯೆ. ಒಬ್ಬ ರಾಜನಾಗಿ, ನ್ಯಾಯಾಧಿಕಾರಿಯಾಗಿ ನೀನು ಈ ರೀತಿ ಮಾಡುವುದು ಸಮಂಜಸವಲ್ಲ. ನಿನ್ನ ಹೆಂಡತಿಗೂ ಶಿಕ್ಷೆ ಕೊಡಬೇಕಿತ್ತಲ್ಲ. ಕೊಡಲಿಲ್ಲವಲ್ಲ"

ನಿನ್ನಂಥ ದುರ್ಬಲನ ತೋಳಿನಲ್ಲಿ ತಾರೆಯಂಥಾ ರತಿ ಸಮಾನಳಿಗೆ ಕರಗುವುದು ಶಿಕ್ಷೆಯಲ್ಲದೇ ಇನ್ನೇನು. ನಿನ್ನ ಧೂರ್ತತನವನ್ನು ತಿಳಿದಿದ್ದ ತಾರೆ ಎಲ್ಲಿ ಅಂಗದನಿಗೆ ನೀನು ವಿಷವಿಕ್ಕುತ್ತೀಯೋ ಎನ್ನುವ ಭಯದಲ್ಲಿ ಈ ಕಾರ್ಯವನ್ನು ಮಾಡಿದಳು. ವಾಲಿಯ ಹೆಂಡತಿಯಾಗಿ ಭಯಗ್ರಸ್ಥಳಾಗಿ ಬದುಕುವುದು, ನಿನ್ನಂಥವನ ಜೊತೆ ಮಲಗುವುದಕ್ಕಿಂತ ದೊಡ್ಡ ಶಿಕ್ಷೆ  ಬೇರೆ ಏನು ಸಾಧ್ಯ. ಧೂರ್ತತನದಿಂದ ಮತ್ತೇರಿಸಿಕೊಂಡ ನೀನು ಮತ್ತೆ ಮತ್ತೆ ಕಾಡುತ್ತಿದ್ದೀ. ಈ ಕಾಡುವಿಕೆ ನನಗೆ ಸಾಕು ಸಾಕಾಗಿದೆ. ಈ ಕಾಡುವಿಕೆ ನಿಲ್ಲಬೇಕಿದ್ದರೆ ನಿನ್ನ ಉಸಿರು ನಿಲ್ಲಬೇಕು. ನಿಲ್ಲಿಸುತ್ತೇನೆ ಎನ್ನುತ್ತಾ ಮುಷ್ಟಿ ಪ್ರಹಾರಕ್ಕೆ ಮುಂದಾದ ವಾಲಿ.

ಸುಗ್ರೀವ ಪಕ್ಕದಲ್ಲಿಯೇ ಇದ್ದ ಮರವನ್ನು ಅಡ್ಡಲಾಗಿ ಹಿಡಿದು ಆ ಪ್ರಹಾರದಿಂದ ತಪ್ಪಿಸಿಕೊಂಡ. ವಾಲಿಯೂ ಮರವೋಮ್ದನ್ನು ಕಿತ್ತು ಸುಗ್ರೀವನತ್ತ ಎಸೆದ. ಸುಗ್ರೀವ ಬಂಡೆಯೊಂದನ್ನೆಸೆದ. ಬಂಡೆ ಚೂರಾಯ್ತು ಅಷ್ಟೇ. ಮತ್ತೊಂದು ಬಂಡೆಯನ್ನು ಸುಗ್ರೀವ ವಾಲಿಯತ್ತ ಎಸೆದ ವಾಲಿ ಅದಕ್ಕೆ ಪ್ರಹಾರವನ್ನು ಮಾಡಿದ. ಹೀಗೆ ಮರಕ್ಕೆ ಮರ, ಮುಷ್ಟಿಗೆ ಮುಷ್ಟಿ ಗುಡ್ಡಕ್ಕೆ ಗುಡ್ಡ ಬಂಡೆಗೆ ಬಂಡೆ ಅಡ್ಡಲಾಗಿಟ್ಟು ಯುದ್ಧ ಮಾಡುತ್ತಿದ್ದರು ಇಬ್ಬರೂ. ಸುಗ್ರೀವ ಚಾಣಾಕ್ಷ ತನದಿಂದ ಹೆಜ್ಜೆಗಳನ್ನಿಡುತ್ತಾ ವಾಲಿಯನ್ನು ಕಿಷ್ಕಿಂಧೆಯ ಗಡಿಯ ಅರಣ್ಯದತ್ತ ತಂದಿದ್ದ. ವಾಲಿಗೆ ಈ ಕಲ್ಲೆಸೆಯುವುದು, ಮರ ಮುರಿಯುವುದು ಎಲ್ಲವೂ ಬೇಡವಾಗಿತ್ತು. ಆತ ಯುದ್ಧಕ್ಕೆ ಮುಂದಾಗಿದ್ದು ಸುಗ್ರೀವನನ್ನು ಕೊಲ್ಲುವ ಉದ್ದೇಶದಿಂದಲೇ ಹೊರತು ಪರಾಕ್ರಮ ಪ್ರದರ್ಶನಕ್ಕಲ್ಲ. ದಾಪುಗಾಲನಿಟ್ಟು ಸುಗ್ರೀವನ ಭುಜಗಳನ್ನು ಅಮುಕಿ ನೆಲಕ್ಕೆ ಒತ್ತುತ್ತಿದ್ದ ವಾಲಿ. ಆರ್ತ ಭಾವದಿಂದ ಸುಗ್ರೀವ ಒಮ್ಮೆ ಅರಣ್ಯದತ್ತ ಕಣ್ಣು ಹಾಯಿಸಿದ. ಧನುಷ್ಠೇಂಕಾರ ಮೊಳಗಿತ್ತು. ಹಕ್ಕಿಗಳೆಲ್ಲಾ ಹೆದರಿ ಗೂಡು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಹಾರಾಡಿದ್ದವು. ಸುಗ್ರೀವನ ಮುಖದ ಮೇಲೊಂದು ಗೆಲುವಿನ ನಗು ಸಣ್ನದಾಗಿ ಮೂಡಿತ್ತು. ಸುಗ್ರೀವನನ್ನು ಕೊಲ್ಲುವ ಕಡೆಯೇ ಗಮನ ಹರಿಸಿದ್ದ ವಾಲಿಗೆ ಇದ್ಯಾವುದೂ ಕಾಣಿಸಲಿಲ್ಲ. ಅಷ್ಟರಲ್ಲಿ....

ವಾಲಿಯ ಎದೆಯ ಎಡಭಾಗವನ್ನು ರಭಸದಿಂದ ಬಂದು ತಾಕಿತ್ತು ಒಂದು ಬಾಣ. ಇನ್ನೂ ಒಳಕ್ಕಿಳಿಯದಂತೆ ತನ್ನ ಎಲ್ಲಾ ಬಲವನ್ನು ಉಪಯೋಗಿಸಿ ಆ ಬಾಣವನ್ನು ಹಿಡಿದು ಕುಸಿದು ಬಿದ್ದ ವಾಲಿ, ಹಾಗೆಯೇ ಆಶ್ಚರ್ಯ, ದುಃಖ, ಅವಮಾನ, ಬೇಸರ ಸೋಲಿನ ಸಮ್ಮಿಶ್ರಣದಿಂದ ಪ್ರಯಾಸದಿಂದ ಕುತ್ತಿಗೆ ತಿರುಗಿಸಿ ನೋಡುತ್ತಿದ್ದ. ಆಗ ಕಂಡಿತು ಆ ಆಕೃತಿ.
 
(ಸಶೇಷ)

No comments:

Post a Comment