Monday, May 24, 2021

ವಾಲಿಪ್ರಕರಣ ಅಧ್ಯಾಯ-1 ತಾರಾಂತರಂಗ

ಕಿಷ್ಕಿಂಧೆಯ ದಿನ ಯಾಕೋ ಮುನ್ನಿನ ದಿನಗಳಂತಿಲ್ಲ ನ್ನಿಸುತ್ತಿದೆ ನನಗೆ. ಮುನ್ನಿನ ದಿನಗಳೆಂದರೆ ಯಾವುದು? ಏನು ಅಂತ ಹೇಳಲಿ ನಾನು? ಯಾವ ದಿನವನ್ನು ಮುನ್ನಿನ ದಿನದ ಆರಂಭವೆಂದು ಪರಿಗಣಿಸಲಿ? ಯಾವುದನ್ನೇ ಪರಿಗಣಿಸಿದರೂ ಅದು ಮತ್ತೆ ಮತ್ತೆ ಹೋಗಿ ನಿಲ್ಲುವುದು ನನ್ನ ಜನನದ ದಿನದಂದು. ಮತ್ತೆ ತೊಳಲಾಡಿ ಉರುಳಿ ವರ್ತಮಾನಕ್ಕೆ ಬಂದು ನಿಲ್ಲುತ್ತದೆ ನನ್ನ ಯೋಚನೆಗಳು. ಅಬ್ಬಾ ಮನಸ್ಸೆಂಬ ಮಾಯಾವಿಯೇ! ಅದೆಷ್ಟು ಬೇಗ ಶತಶತಮಾನಗಳ ಹಿಂದಕ್ಕೆ ನನ್ನನ್ನು ಕರೆದೊಯ್ದು ಮತ್ತೆ ಶರವೇಗದಲ್ಲಿ ವರ್ತಮಾನಕ್ಕೆ ತ್ರುವೆ ನೀನು. ಮನಸ್ಸಿನ ಹೊಯ್ದಾಟಕ್ಕೆ ಕಾರಣವಾದರೂ ಏನಿರಬಹುದು? ಮತ್ತೇನು ಸಾಧ್ಯ ಅಂದಿನ ದಿನಕ್ಕೂ ಇಂದಿಗೂ ಇರುವ ವೈರುಧ್ಯಗಳಲ್ಲವೇ. ಅಂದಿದ್ದ ಸುಖ ಸಮಾಧಾನಗಳು ಇಂದಿಗೆ ಕೇವಲ ನೆನಪು ಮಾತ್ರ. ಕೆಲವು ದಿನಗಳ ಹಿಂದೆ ನೆನಪುಗಳು ಸವಿ ನೆನಪುಗಳಾಗಿದ್ದವು. ನಂತರದಲ್ಲಿ ನೆನಪಿಗೆ ಕಾರಣವಾದ ಘಟನೆಗಳು ನಾಳಿನ ನಿರೀಕ್ಷೆಗಳಾದವು. ಒಂದು ಬದಲಾವಣೆ ಘಟಿಸೀತು ಎಂದು ಭಾವಿಸಿ ಬದುಕಿಗೆ ಒಂದು ಆಧಾರ ನಾಳಿನ ಕುರಿತಾದ  ನಿರೀಕ್ಷೆಯಾದವು. ಆದರೆ ಇಂದು.... ನಾಳೆ ಎನ್ನುವುದು ಇದೆಯೋ ಇಲ್ಲವೋ ಎಂದು ಅನಿಸುವಂತಾಗಿದೆ. ಭವಿತವ್ಯದ ಕುರಿತಾಗಿ ಯಾವುದೇ ನಿರೀಕ್ಷೆಯೂ ಭಯ ಹುಟ್ಟಿಸುವಂತಾಗುತ್ತಿರುವಾಗ ಹಳೆಯ ನೆನಪುಗಳು ಮತ್ತೆ ಮರುಕಳಿಸುತ್ತಿವೆ, ಆದರೆ ನಾಳಿನ ನಿರೀಕ್ಷೆಗಳಾಗಿ ಅಲ್ಲ. ಕನವರಿಕೆಗಳಾಗಿಆದರೂ ನೆನಪುಗಳಲ್ಲಿ ಏನೋ ಒಂದು ಸುಖವಿದೆ. ಹಾಗಾಗಿ ನೆನಪುಗಳನ್ನೀಗ ಮೆಲುಕು ಹಾಕುವೆ. ಹೊತ್ತು ಬಹಳವೇ ಇದೆ. ಮಧುವನ್ನು ಸೇವಿಸಿ, ರುಮೆಯ ಅಂತಃಪುರಕ್ಕೆ ನುಗ್ಗಿ ಅವಳನ್ನು ಹಿಂಸಿಸಿ, ಅವಳ ಆಕ್ರಂದನ ಋಷ್ಯಮೂಕವನ್ನು ತಲುಪುವಂತೆ ಅವಳನ್ನು ಕಿರುಚಾಡಿಸಿ ಮೇಲೆ ಅಲ್ಲವೇ ನನ್ನವರು ನನ್ನ ಮನೆಗೆ ಬರುವುದು. ಅಲ್ಲಿಯ ತನಕ ದಾರುಣ ಎನ್ನಿಸುವ ನಾಳಿನ ನಿರೀಕ್ಷೆಗಳನ್ನು ತೊರೆದು ಸುಖದಾಯಿಯಾದ ಹಳೆಯ ನೆನಪುಗಳನ್ನಾದರೂ ಅನುಭವಿಸುತ್ತೇನೆ.

 

ದೇವತೆಗಳು ಮತ್ತು ದೈತ್ಯರ ನಡುವಿನ ದಾಯಾದಿ ಮತ್ಸರ, ಸುಮನಸ ಮತ್ತು ಕುಮನಸರ ನಡುವಿನ ವೈರುಧ್ಯ ಭರಿತ ಕಂದರ ದ್ವೇಷವಾಗಿ ದಳ್ಳುರಿಯಾಗಿ ಜಗತ್ತಿಗೇ ಕಂಟಕವಾಗತೊಡಗಿದ್ದ ಕಾಲ. ಭಗವಂತ ತನ್ನ ದೈತ್ಯ ಕುಲದಲ್ಲಿ ಹುಟ್ಟಿದ ಒಬ್ಬನಿಗೆ ತನ್ನ ಕುರಿತಾದ ಭಕ್ತಿ ಮೂಡುವಂತೆ ಲೀಲೆ ಮಾಡಿದ. ಮಾಯೆ ಎನ್ನಲೇ?! ಕುಲದಲ್ಲಿ ಜನಿಸಿದ ಪ್ರಹ್ಲಾದನ ಮಗ ವಿರೋಚನ. ಆತನ ಮಗ ಇಂದ್ರಸೇನ, ಪರಮ ಧಾರ್ಮಿಕ. ದಾನಿ. ಅತಿ ಬಲಾನ್ವಿತ. ಬಲಿ ಎನ್ನುವುದಾಗಿ ಲೋಕವಿಖ್ಯಾತ.ಇಂಥಾ ಸಮಯದಲ್ಲಿ ಇಂದ್ರದೇವರು ಮಧುವನ್ನು ಸೇವಿಸಿ ಮತ್ತರಾಗಿ ಮದ ಬಂದ ಐರಾವತದ ಮೇಲೆ ಹತ್ತಿ ಸಂಚರಿಸುತ್ತಿದ್ದಾಗ ದುರ್ವಾಸರಿಂದ ದತ್ತವಾದ ಮಾಲೆಯನ್ನು ಆನೆಯ ಕೊರಳಿಗಿಕ್ಕಿದ್ದಕ್ಕೆ ಸಿಕ್ಕ ಪ್ರತಿಫಲ "ಸ್ವರ್ಗದ ಸಂಪತ್ತುಗಳೆಲ್ಲಾ ಸಮುದ್ರದ ಪಾಲಾಗಿ ಹೋಗಲಿ" ಎನ್ನುವ ಶಾಪ. ಶಾಪ ಕ್ರಿಯಾ ರೂಪಕ್ಕೆ ಬಂದಿದ್ದು ಬಲಿಯ ದೆಸೆಯಿಂದ. ಪರಿಣಾಮ ಸಮುದ್ರದ ಮಂಥನ. ಒಂದು ಕಡೆಯಲ್ಲಿ ಮೂವತ್ಮೂರು ಕೋಟಿ ದೇವತೆಗಳು. ಇನ್ನೊಂದು ಕಡೆಯಲ್ಲಿ ಅರವತ್ತಾರು ಕೋಟಿ ದೈತ್ಯರು. ಆದರೆ ಅವರಿಬ್ಬರೂ ಆಯಾಸಗೊಂಡು ಕಾರ್ಯವನ್ನು ಎಸಗಲು ಸಾಧ್ಯವಿಲ್ಲದ ಹೊತ್ತಿನಲ್ಲಿ ಅಲ್ಲಿಗೆ ಬಂದಿದ್ದು ಒಬ್ಬ ವಾನರ. ವಾಲ ಭಾಗದಿಂದ ಜನಿಸಿದ್ದರಿಂದ ವಾಲಿ ಎನ್ನುವ ಹೆಸರಾಯಿತಂತೆ. ವಾನರ ಏಕಾಂಗಿಯಾಗಿ ಕಡೆದ ಸಮುದ್ರವನ್ನು. ಪರಿಣಾಮವಾಗಿ ಜನಿಸಿದವಳು ತಾನು. ಅಪ್ಸರೆಯೋ ವಾನರೆಯೋ ಎನ್ನುವ ಗೊಂದಲದಲ್ಲಿದ್ದಾಗ ದೇವ ದಾನವರಿಬ್ಬರಿಗೂ ಸಮ್ಮತಿಯಾಗಿ ವಾನರನಿಗೆ ಹೆಂಡತಿಯಾಗಿ ಕೊಡಲ್ಪಟ್ಟವಳು ನಾನು, ತಾರೆ.

 

ತವರಿಲ್ಲದ ತನಗೆ ತಂದೆಯಾಗಿ ನಿಂತವ ವಾನರರ ವೈದ್ಯ ಸುಷೇಣ. ಇನ್ನು ಪತಿಯಾಗಿ ಪಡೆದಿದ್ದು- ಸ್ವಯಂ ಇಂದ್ರನಂದನನನ್ನು. ಶ್ರೀಹರಿ ತಾನಾಗಿ ಬಂದು "ನಿನ್ನ ಬಲಕ್ಕೆ ಮೆಚ್ಚಿದ್ದೇನೆ? ಏನು ವರ ಬೇಕು ಕೇಳಿಕೋ " ಎಂದಾಗ " ವಾಲಿ ಯಾರ ಮುಂದೆಯೂ ಕೈ ಚಾಚಲೊಲ್ಲ. ನಿನಗೇನು ಬೇಕು ಬೇಡಿಕೊ" ಎಂದ ಸ್ವಾಭಿಮಾನಿ. ಪ್ರತಿಯಾಗಿ ಶ್ರೀಹರಿ "ನಿನ್ನ ಪ್ರಾಣ ಬೇಕು" ಎಂದರೆ ಕೊಡಲು ಸಿದ್ಧನಾದ ಸಮರ್ಪಣಾ ಭಾವೋನ್ಮತ್ತತೆಯ ಭಕ್ತಾಗ್ರೇಸರ. ಆದರೆ ಹರಿ ಆತನಿಗೆ ಹೇಳಿದ್ದು "ಈಗ ನೀನಿಟ್ಟುಕೋ. ನನಗೆ ಬೇಕಾದಾಗ ಪಡೆವೆ. ನಿನ್ನ ಪ್ರಾಣ ಇನ್ನು ನನಗಿಟ್ಟ ಎರವಿನೊಡವೆ" ಎಂದು. ಹರಿಗೆರವಾದ ಪ್ರಾಣ ಹೊತ್ತವ ನನ್ನ ಪ್ರಾಣನಾಥ. ಮೇಲಿನಿಂದ ಕನಕ ಕಾಂಚನ ಮಾಲೆ. ಧರಿಸಿ ನಿಂತರೆ ಮೊದಲೇ ಬಲಾನ್ವಿತನಾಗಿದ್ದ ವಾಲಿಗೆ ಎದುರಿಗೆ ನಿಂತವನ ಅರ್ಧ ಬಲ ವಾಲಿಗೆ. ಮೈದುನನಾಗಿ ಸಿಕ್ಕ ಸೂರ್ಯಸುತ ಸುಗ್ರೀವ. ಸೂರ್ಯನ ವರದಿಂದ ಕುತ್ತಿಗೆಯಲ್ಲಿ ಜನಿಸಿದವ ಎನ್ನುವ ಕಾರಣಕ್ಕಾಗಿ ಹೆಸರಂತೆ. ಆದರೆ, ನಿಜದಲ್ಲಿ ಅದು ಆತನ ಅನ್ವರ್ಥ ನಾಮ. ಮಧುರ ಸ್ವರ. ಮಧುರವಾದ, ಹಿತವಾದ ಮಾತುಗಳು. ಅಣ್ಣ ಎಂದರೆ ದೇವರಂತೆ. ಅಣ್ಣ ತನ್ನ ಭ್ರಾತ ಮಾತ್ರನಲ್ಲ ತನ್ನನ್ನು ಸದಾಕಾಲ ಭರಿಸುವ ಭರ್ತಾರ ಎನ್ನುವ ಭಾವನೆಯಿಂದ ಬದುಕಿದ್ದವ. ಸೋದರಳಿಯ ಹನುಮಂತ.ಮಾಲ್ಯವಂತದ ವಾನರ ರಾಜಕುಮಾರ. ತಂಗಿಯಂಥಾ ನಾದಿನಿ ಅಂಜನಾದೇವಿ. ಸ್ವಂತ ಅಣ್ಣನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದ ಆಕೆಯ ಪತಿ ಕೇಸರಿ. ಮಾಲ್ಯವಂತದ ಅರಸ. ಕೆಲವೇ ಕಾಲದಲ್ಲಿ ಜನಿಸಿದ ಮಗ ಅಂಗದ. ಕಿಷ್ಕಿಂಧೆಯ ಪ್ರೀತಿಸುವ ಪ್ರಜೆಗಳು. ಇನ್ನೇನು ಬೇಕು? ಸ್ವರ್ಗದಧಿಪನ ಮಗನ ಮಡದಿಯಾಗಿ ಪ್ರತಿಸ್ವರ್ಗವನ್ನೇ ನಾನು ಅನುಭವಿಸುತ್ತಿದ್ದೆ ಕಿಷ್ಕಿಂಧೆಯಲ್ಲಿ. ಎಲ್ಲ ಸುಖ ಸಂತೋಷಗಳ ನಡುವೆ ಘಟಿಸಿದ್ದು ಒಂದು ಘಟನೆ. ಅದರಿಂದಲೇ ರುಮೆ ನಮ್ಮ ಮನೆ ಸೇರಿದ್ದಳು.

 

ವಾಲಿಯ ಸೋದರಮಾವ ದಧಿಮುಖ ಏದುಸಿರು ಬಿಡುತ್ತಾ ಓಡಿಬಂದು ತನ್ನ ಮಗಳಾದ ರುಮೆಯನ್ನು ಗೋಲಭ ಎನ್ನುವ ಗಂಧರ್ವಕರೆದೊಯ್ಯುತ್ತಿರುವ ಬಗ್ಗೆ ಹುಯಿಲಿಟ್ಟ. ಒಂದೇ ನೆಗೆತಕ್ಕೆ ನಭಕ್ಕೆಗರಿ ಆತನ ಮುಖವನ್ನು ಗುದ್ದಿ, ರುಮೆಯನ್ನು ಕರೆತಂದು ಸುಗ್ರೀವನಿಗೆ ಮದುವೆ ಮಾದಿಸಿದ್ದರು ನನ್ನವರು. ಆಮೇಲೊಮ್ಮೆ ಮನೆಗೆ ಬಂದವರು ಅಂಗದನ ತೊಟ್ಟಿಲಿಗೆ ಹತ್ತು ತಲೆ ಹೊಂದಿದ್ದ ಜೀವವೊಂದನ್ನು ಕಟ್ಟಿದ್ದರು. ಆತ ಲಂಕೇಶ್ವರ ರಾವಣ ಎಂದರು ಯಾರೋ. ಕೊನೆಗೆ ಅವನೊಡನೆ ಸ್ನೇಹ ಸಂಪಾದಿಸಿದರು. ಇಬ್ಬರು ಬಲಾಢ್ಯರ ನಡುವೆ ತುಲ್ಯಾರಿ ಮಿತ್ರತ್ವ.

 

 ಹೀಗೆ ಸುಖ ಸಂತೋಷದಿಂದ ಇದ್ದ ಹೊತ್ತಿನಲ್ಲಿ ಇಲ್ಲಿಗೆ ಬಂದು ಯುದ್ಧಾಹ್ವಾನ ಕೊಟ್ಟು ನನ್ನವರಿಂದ ಹತನಾದ ದುಂಧುಭಿ. ಅವನ ಸಾವಿನ ಸೇಡು ತೀರಿಸಿಕೊಳ್ಳಲು ಬಂದವ ಅವನ ಅಣ್ಣನ ಮಗ ಮಾಯಾವಿ. ಆತನ ಮೂಲಕವೇ ಕಿಷಿಂಧೆಗೆ ಅದಾವುದೋ ಮಾಯೆ ತಾಗಿ ಇಲ್ಲಿನ ಸುಖ ಸಂತಸಗಳೆಲ್ಲಾ ನಲುಗಿ ಹೋದವು. ಅಪರ ರಾತ್ರಿಯ ಕಾಲದಲ್ಲಿ ಬಂದು ಪಂಥಾಹ್ವಾನ ಕೊಟ್ಟ ಮಾಯಾವಿ. ಅವನನ್ನು ಬಡಿಯುತ್ತಿದ್ದರು ನನ್ನವರು. ಪೆಟ್ಟು ತಿನ್ನಲಾರದೇ ಆತ ಓಡಿದ. ಬೆನ್ನಟ್ಟಿದರು. ಅಣ್ಣನ ಬೆನ್ನಿಗೇ ಸಾಗಿದ ಸುಗ್ರೀವ. ಅದೆಷ್ಟೋ ಮಾಸಗಳ ನಂತರ ಬಂದ ಸುಗ್ರೀವ. ಆದರೆ ಅಂದು ಆತನ ಕಂಠದಿಂದ ಹೊರಟ ನುಡಿಗಳು ನಿಜಕ್ಕೂ ದುರ್ಭರವಾಗಿತ್ತು. ನನ್ನವರು ಅಸುನೀಗಿದ್ದ ವಿಷಯವನ್ನು ಅರುಹಿದ ಸುಗ್ರೀವ.

 

ಇಂಥ ಮಾತು ಕೇಳಿ ಇಡೀ ಕಿಷ್ಕಿಂಧೆಯೇ ದುಃಖದಲ್ಲಿ ಮುಳುಗಿತು. ಸುಗ್ರೀವ ಸುಳ್ಳಾಡುವವನಲ್ಲವಲ್ಲಸುಗ್ರೀವ ಮೂಲೆ ಹಿಡಿದು ಮುಖ ಕೆಳಗೆ ಹಾಕಿ ಅಣ್ಣನನ್ನು ನೆನೆಸಿ ಮೌನವಾಗಿ ಗೋಳಿಡುತ್ತಿದ್ದ. ರುಮೆ ರಮಿಸಿದರೂ ಅಷ್ಟೆ ಸಮಾಧಾನಿಸಿದರೂ ಅಷ್ಟೇ. ಎಲ್ಲವೂ ಪಂಪಾ ನದಿಯಲ್ಲಿ ತೊಳೆದು ಹೋಗುತ್ತಿತ್ತು.ವಾಲಿ ಮಡಿದ ಸುದ್ದಿ ಕೇಳಿ ಅವರೊದನೆ ತುಲ್ಯಾರಿ ಮಿತ್ರತ್ವ ಸಾಧಿಸಿದ್ದ ರಾವಣ ಬಾರಲಿಲ್ಲ. ಸಾವಿರುವನಕದ ಸ್ನೇಹ ಒಬ್ಬನ ಸಾವಿನೊಂದಿಗೆ ಮಣ್ಣಾಗಿ ಹೋಯಿತೇ ಹಾಗಿದ್ದಲ್ಲಿ. ಹಾಗಾದರೆ ಅಲ್ಲಿ ಸ್ನೇಹಕ್ಕೆ ಬೇಕಾದ ಸು-ಹೃದ್ ಭಾವ ಇರಲಿಲ್ಲವೇ? ಗೊತ್ತಿಲ್ಲ. ಆಗ ಹಿರಿಯರಾದ ಜ್ಞಾನಿಗಳಾದ ಜಾಂಬವರು ಸುಗ್ರೀವನಿಗೆ ನೀತಿ ಹೇಳಿ ಕಿಷ್ಕಿಂಧೆಯ ಸಿಂಹಾಸನ ಏರುವಂತೆ ಸೂಚಿಸಿದರು. ಹಿರಿಯರ ಮಾತಿಗೆ ಸಮ್ಮತಿಯೇನೋ ಸೂಚಿಸಿದ್ದ ಸುಗ್ರೀವ. ಆದರೆ ದುಃಖದಿಂದಲೇ. ಸುಗ್ರೀವ ಸಿಂಹಾಸನ ಏರಿ ಪಕ್ಕದಲ್ಲಿ ರುಮೆಯನ್ನು ಕೂರಿಸಿಕೊಂಡ ತತ್ ಕ್ಷಣದಲ್ಲಿ ನಾನೂ ಸಿಂಹಾಸನದಲ್ಲಿ ಸುಗ್ರೀವನ ಬಲಭಾಗದಲ್ಲಿ ಕುಳಿತಿದ್ದೆ, ಯಾರೂ ಒತ್ತಾಯಿಸದಿದ್ದರೂ ಸ್ವಯಂ ಪ್ರೇರಿತಳಾಗಿ. ಅಚ್ಚರಿ ಮೂಡುವುದೇ ಇಲ್ಲಿ.

 

ಗಂಡನಾದವನು ಅಳಿದಾಗ ಸಂತಾನಕ್ಕಾಗಿ, ಇರುವ ಸಂತಾನದ ರಕ್ಷಣೆಗಾಗಿ ಹೆಂಡತಿಯಾದವಳು ಗಂಡನ ತಮ್ಮನನ್ನು ಸೇರಬಹುದು ಎನ್ನುವ ಶಾಸ್ತ್ರವಾಕ್ಯ ನಾನು ತಿಳಿದ ವಿಚಾರವೇ ಆಗಿತ್ತು. ಆದರೆ ಅದೆಂದೂ ನನ್ನನ್ನು, ಕಡೆಯ ಪಕ್ಷ ಸುಗ್ರೀವ ಸಿಂಹಾಸನ ಏರುವ ತನಕ  ಪ್ರಭಾವಿಸಿರಲಿಲ್ಲ. ಸುಗ್ರೀವನ ಕುರಿತಾಗಿ ಅಲ್ಲಿಯ ತನಕ ನನಗೆ ಅಂಥ ಯಾವ ಭಾವನೆಯೂ ಮೂಡಿರಲಿಲ್ಲ, ಆದರೆ ಸುಗ್ರೀವ ಸಿಂಹಾಸನವನ್ನು ಏರಿದ ಹೊತ್ತಿನಲ್ಲಿ ನನಗದೇನಾಯಿತು? ಒಂದಾನೊಂದು ಕಾಲದಲ್ಲಿ ನಾನು ಅದನ್ನೇರಿ ಕುಳಿತಿದ್ದವಳು ಇಂದಿಗೂ ಅದು ತನ್ನದಾಗಿರಬೇಕು ಎನ್ನುವ ಅಹಂಕಾರ ಭರಿತ ಅಧಿಕಾರ ಭಾವವೇ? ರುಮೆ ಅದರ ಮೇಲೆ ಕುಳಿತಿದ್ದಕ್ಕೆ ತನಗಾಗಿದ್ದ ಮತ್ಸರವೇ? ಅಥವಾ ಮಗ ಅಂಗದನ ಭವಿತವ್ಯದ ಕುರಿತಾಗಿ ಇದ್ದ ಆತಂಕವೇ?ಭೂಮಿಯಲ್ಲಿ ಅತಿ ಬಲಾಢ್ಯನಾಗಿದ್ದ ವಾಲಿಯನ್ನು ಸೇರಿ ಸುಖಿಸಿ ಫಲ ಪಡೆದಿದ್ದವಳಿಗೂ ಇನ್ನೂ ಆರದ ಮೈ ಬಿಸಿಯ ದೇಹದ ತೆವಲೇ? ಅಥವಾ ಸುಗ್ರೀವನಂಥ ನಿಗರ್ವಿ ಸಜ್ಜನನ ಸೇವೆಗೊದಗಿ ಸಾರ್ಥಕ್ಯ ಪಡೆಯಬೇಕೆಂಬ ಆಕಾಂಕ್ಷೆಯೇ? ಗೊತ್ತಿಲ್ಲ.

 

ಮತ್ತೆ ಮಲಗಿದವಳು ಮಗ್ಗುಲು ಬದಲಿಸುತ್ತೇನೆ. ಹೀಗೆಲ್ಲ ಯೋಚಿಸುತ್ತಿದ್ದಾಗ ನಿಡುಸುಯ್ಯುತ್ತೇನೆ. ನಿಟ್ಟುಸಿರು ತಂತಾನೇ ಹೊರ ಬರುತ್ತದೆ. ನಿಟ್ಟುಸಿರೇ ನನ್ನ ಸದಾ ಕಾಲದ ಸಂಗಾತಿಯಾಗಿಬಿಡಬಹುದೇ? ಹೀಗೆಲ್ಲ ಯೋಚಿಸುತ್ತಲೇ ಮನಸ್ಸು ಮತ್ತೆ ಹಿಂದಕ್ಕೆ ಜಾರಿತು. ಒಂದು ದಿನ ಬೆಳಿಗ್ಗೆ ಸುಗ್ರೀವ ಒಡ್ಡೋಲಗ ಕೊಡುತ್ತಿದ್ದ. ಸಿಂಹಾಸನದ ಮೇಲೆ ಸುಗ್ರೀವನ ಬಲ ಭಾಗದಲ್ಲಿ ತಾನಿದ್ದೆ. ಎಡಭಾಗದಲ್ಲಿ ರುಮೆ. ದ್ವಾರದಲ್ಲಿ ವಾಲಿಯ ಶರೀರ ಕಂಡಿತು. ಕಂಡ ಶರೀರ ಧುತ್ತನೆ ಸಿಂಹಾಸನದತ್ತ ನುಗ್ಗಿ ಸುಗ್ರೀವನನ್ನು ಕೆಡಗಿ,"ಭಾತೃ ದ್ರೋಹಿ" ಎನ್ನುತ್ತಾ ಇನ್ನೂ ಅದೆಷ್ಟೋ ಅವಾಚ್ಯ ಶಬ್ದಗಳಿಂದ ಸುಗ್ರೀವನನ್ನು ನಿಂದಿಸುತ್ತಾ ಆತನನ್ನು ಒದೆಯತೊಡಗಿತ್ತು. ಮೂರ್ಛಿತನಾದ ಸುಗ್ರೀವ ಎಚ್ಚರಗೊಳ್ಳುವ ಮೊದಲೇ ರುಮೆಯನ್ನು ಕೋಣೆಯೊಂದಕ್ಕೆ ಕೂಡಿ ಬಂದಿದ್ದರು ನನ್ನವರು. ಎಚ್ಚರಗೊಂಡ ಸುಗ್ರೀವನಿಗೆ ಮಾತಾಡುವುದಕ್ಕೂ ಅವಕಾಶ ಕೊಡದೇ ಹೊಡೆಯುತ್ತಿದ್ದರು. ಹೊಡೆತ ತಿನ್ನಲಾರದೆ ಸುಗ್ರೀವ ಓಡತೊಡಗಿದ. ಬೆನ್ನಟ್ಟಿದರು.

 

ಕೊನೆಗೊಂದು ದಿನ ತಾರ-ಹನುಮಂತ ಮೊದಲಾದವರು ಕಾಣಿಸಲಿಲ್ಲ. ಅದ್ಯಾರೋ ಹೇಳಿದರು ಅವರು ಋಷ್ಯಮೂಕದಲ್ಲಿ ಸುಗ್ರೀವನೊಂದಿಗಿದ್ದಾರೆ ಎಂದು. ಸಿಡುಕಿದ್ದವರು ನನ್ನವರು." ಎಲಾ ಹೇಡಿ!! ನನ್ನ ಶಾಪದ ಸಮಾಚಾರವನ್ನು ತಿಳಿದು, ಋಷ್ಯಮೂಕದಲ್ಲಿ ಅವಿತಿದ್ದೀಯಾ?" ಎಂದು. ಜೊತೆಗೆ ಒಂದು ರೀತಿಯ ಕುಹಕ ಭರಿತ ವಿಲಕ್ಷಣ ನಗೆ ಮೂಡಿತ್ತು ಮುಖದಲ್ಲಿ. ಅಂದಿನಿಂದ ನಿತ್ಯದ ಕಾಯಕವಾಗಿ ಹೋಗಿದೆ. ರುಮೆಯನ್ನು ಕರೆದುಕೊಂಡು ಅರಮನೆಯ ಉಪ್ಪರಿಗೆ ಏರಿ ಋಷ್ಯಮೂಕದ ಕಡೆ ಮುಖ ಮಾಡಿ ನಿಂತು ಅವಳನ್ನು ಹಿಂಸಿಸುವುದು. ಅವಳು ಅಳುವುದು. ಎಲ್ಲೋ ದಶಕಕ್ಕೋ ಶತಮಾನಕ್ಕೋ ಒಮ್ಮೆ ಸುಗ್ರೀವ ಬರುವುದು. " ನನ್ನ ಹೆಂಡತಿಯನ್ನು ಬಿಟ್ಟು ಕಳಿಸು" ಎಂದು ಕೂಗಾಟ, ಅರಚಾಟ ಮಾಡಿ ಹೊಡೆದಾಡುವುದು, ಕೊನೆಗೆ ಪೆಟ್ಟು ತಿಂದು ಹೋಗುವುದು. ಇಂದಾಗಿದ್ದೂ ಅದೇ. ಆದರೆ ಅಷ್ಟೇ ಆಗಿದ್ದಲ್ಲವಲ್ಲ. ಅಂಗದ ತಂದ ಘೋರ ಸಮಾಚಾರವೂ ಇದೆಯಲ್ಲ.

 

ಆದರೆ ಸುಗ್ರೀವ ಅಂದು ವಾಲಿ ಮಡಿದಿದ್ದಾನೆ ಎಂದೊಡನೆ ಇಡೀ ಕಿಷ್ಕಿಂಧೆಯೆ ಅದನ್ನು ಒಪ್ಪಿದ್ದೇಕೆ? ತಾನೂ ಒಪ್ಪಿದ್ದೇಕೆ? ಸುಗ್ರೀವ ಸತ್ಯವಂತನೆಂದೇ? ಅಥವಾ ವಾಲಿಯ ಅಹಂಕಾರ ಮೇರೆ ಮೀರಿ ಮೆರೆದಾಟ ಅತಿಯಾಗಿ ಗರ್ವಿಷ್ಠನಾಗಿ ಹೊಂದಿದ್ದ ವಿಪರೀತ ಬುದ್ದ್ಗಿ ವಿನಾಶ ಕಾಲದ ಮುನ್ಸೂಚನೆಯನ್ನು ಸುಪ್ತವಾಗಿ ಕೊಟ್ಟಿತ್ತೇ? ಅಥವಾ ಎರಡೂ ಕಾರಣಗಳಿರಬಹುದೇ?ಎಷ್ಟೊಂದು ಕಾಲವಾಯಿತು ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳುತ್ತಾ. ಉತ್ತರ ಮಾತ್ರ ಸಿಗುತ್ತಿಲ್ಲ. ಅದೊ ಹೆಜ್ಜೆಯ ಸಪ್ಪಳವಾಗುತ್ತಿದೆ. ನನ್ನವರು ಬಂದರೆನಿಸುತ್ತದೆ. ತಿಳಿಯದೇ ಮಾಡಿದ ತಪ್ಪನ್ನು ಮನ್ನಿಸುವ ಉದಾರಗುಣ ತನ್ನೆಡೆಗೆ ಹೊಂದಿದ್ದಾರೆ. ಇಂದಾದರೂ ಇವರನ್ನು ರಮಿಸಿದ ನಂತರ ಉದಾರ ಗುಣದ ಲಾಭವನ್ನು ಸುಗ್ರೀವ ರುಮೆಯರಿಗೂ ಕರುಣಿಸಲು ಕೇಳಬೇಕು. ಕಾಮೋನ್ಮತ್ತನಾಗಿ ಅದು ತಣಿದ ಘಳಿಗೆಯಲ್ಲಿ ಗಂಡಸು ಏನನ್ನೂ ಕರುಣಿಸುತ್ತಾನೆ. ಆದರೆ ಕೇಳಲು ತನಗೆ ಧೈರ್ಯ ಬೇಕು ಅಷ್ಟೇ. ಇಂದು ಅಂಗದ ತಂದ ಸುದ್ದಿ ಕೇಳಿ ಈಗಲಾದರೂ ಧೈರ್ಯವನ್ನು ಪಡೆಯಲೇ ಬೇಕು.

No comments:

Post a Comment